'ನಾನು ಅರೆಸ್ಟ್ ಆಗಿಲ್ಲ' ಅಂತ ಬೇರೆ ಕಥೆ ಹೇಳ್ತಾರೆ ನಟ ಅರುಣ್ ಗೌಡ.!
ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿರುವ 'ಚಾರ್ ಕೋಲ್ ಕೆಫೆ' ಮೇಲೆ ದಿಢೀರನೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಬಾರ್ ಮಾಲೀಕರಾದ ನಟ ಅರುಣ್ ಗೌಡ ಸೇರಿದಂತೆ ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಇಂದು ಮಧ್ಯಾಹ್ನ ಬ್ರೇಕ್ ಆಯ್ತು.[ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ನಟ ಅರುಣ್ ಗೌಡ ವಶಕ್ಕೆ]
ಸುದ್ದಿ ತಿಳಿಯುತ್ತಿದ್ದಂತೆಯೇ 'ನಟ ಅರುಣ್ ಗೌಡ ಅರೆಸ್ಟ್' ಎಂಬ ಬ್ರೇಕಿಂಗ್ ನ್ಯೂಸ್ ಎಲ್ಲ ಚಾನೆಲ್ ನಲ್ಲಿಯೂ ಬಿತ್ತರವಾಗಲು ಶುರು ಆಯ್ತು. ಆಗ ವಾಹಿನಿಗಳೊಂದಿಗೆ ಮಾತನಾಡಿದ ಅರುಣ್ ಗೌಡ, ''ನಾನು ಅರೆಸ್ಟ್ ಆಗಿಲ್ಲ. ಶೂಟಿಂಗ್ ನಲ್ಲಿ ಬಿಜಿ ಇದ್ದೇನೆ'' ಎಂದು ಬೇರೆಯದ್ದೇ ಕಥೆ ಹೇಳಲು ಆರಂಭಿಸಿದರು.

'ಚಾರ್ ಕೋಲ್ ಕೆಫೆ' ಮಾಲೀಕ ನಟ ಅರುಣ್ ಗೌಡ
'ಮುದ್ದು ಮನಸೇ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅರುಣ್ ಗೌಡ ರಿಯಾಲಿಟಿ ಶೋಗಳಲ್ಲೂ ಪಾಲ್ಗೊಂಡಿದ್ದವರು. ಇಂತಿಪ್ಪ ಅರುಣ್ ಗೌಡ ಪಾರ್ಟ್ನರ್ ಶಿಪ್ ನಲ್ಲಿ 'ಚಾರ್ ಕೋಲ್ ಕೆಫೆ' ಎಂಬ ಬಿಯರ್/ಹುಕ್ಕಾ ಬಾರ್ ಒಂದನ್ನ ಚಂದ್ರ ಲೇಔಟ್ ನಲ್ಲಿ ತೆರೆದಿದ್ದರು.

ಬಾರ್ ಮೇಲೆ ದಾಳಿ
ಕಾನೂನು ಬಾಹಿರವಾಗಿ 'ಚಾರ್ ಕೋಲ್ ಕೆಫೆ' ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ಕೂಡಲೆ ನಿನ್ನೆ (ಮೇ 8) ಚಂದ್ರ ಲೇಔಟ್ ಪೊಲೀಸರ ಸಹಾಯದೊಂದಿಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅರುಣ್ ಗೌಡ ಸೇರಿದಂತೆ ಏಳು ಮಂದಿಯನ್ನ ವಶಕ್ಕೆ ಪಡೆದು, 2250 ರೂಪಾಯಿ, 5 ಹುಕ್ಕಾ ಸ್ಟ್ರಾಂಡ್, 2 ಕೋಲ್ ಸ್ಟ್ಯಾಂಡ್ ಗಳನ್ನ ಸೀಝ್ ಮಾಡಲಾಗಿದೆ.

ಅರುಣ್ ಗೌಡ ಕಥೆ ಕೇಳಿ
''ನಾನು ಅರೆಸ್ಟ್ ಆಗಿಲ್ಲ. ನಾನು ಅರೆಸ್ಟ್ ಆಗಿದ್ದೇನೆ ಎಂಬುದು ಸುಳ್ಳು ಸುದ್ದಿ. ನಾನು ಶೂಟಿಂಗ್ ನಲ್ಲಿ ಬಿಜಿಯಾಗಿದ್ದೇನೆ'' ಎನ್ನುವ ಅರುಣ್ ಗೌಡ, ನಿನ್ನೆ 'ಚಾರ್ ಕೋಲ್ ಕೆಫೆ' ಮೇಲೆ ರೇಡ್ ಆಗಿರುವುದನ್ನು ಒಪ್ಪಿಕೊಳ್ಳುತ್ತಾರೆ.

ಅದು ಬಿಯರ್ ಬಾರ್
''ಅದು ಬಿಯರ್ ಬಾರ್. ಪಾರ್ಟ್ನರ್ ಶಿಪ್ ನಲ್ಲಿ ಆರಂಭಿಸಿದ್ದು. ನನ್ನ ಬಳಿ ಬಾರ್ ಲೈಸೆನ್ಸ್ ಇದೆ. ಹುಕ್ಕಾ ಲೈಸೆನ್ಸ್ ಕೂಡ ಪಡೆದುಕೊಂಡಿದ್ದೇನೆ. ನಿಯಮ ಮೀರಿ ನಾವು ಏನನ್ನೂ ಮಾಡಿಲ್ಲ. ಅಕ್ರಮವಾಗಿ ಅಥವಾ ಕಾನೂನು ಬಾಹಿರವಾಗಿ ಬಾರ್ ನಡೆಸುತ್ತಿಲ್ಲ. ಹುಕ್ಕಾ ಜೊತೆ ಊಟ ಕೊಡುತ್ತಿದ್ದೇವೆ ಎಂಬ ಕಾರಣಕ್ಕೆ ಪೊಲೀಸರು ರೇಡ್ ಮಾಡಿದ್ದಾರೆ'' ಎನ್ನುತ್ತಾರೆ ಅರುಣ್ ಗೌಡ

ಸ್ಟೇಷನ್ ಬೇಲ್ ಸಿಕ್ಕಿದೆ
''ಸ್ಮೋಕಿಂಗ್ ಝೋನ್ ನಲ್ಲಿ ಊಟ ಕೊಡುವ ಹಾಗಿಲ್ಲ. ಹೀಗಾಗಿ ವಿಚಾರಣೆಗೆ ಒಳಪಡಿಸಿದ್ದರು. ಸ್ಟೇಷನ್ ಬೇಲ್ ಪಡೆದುಕೊಂಡಿದ್ದೇನೆ. ಅರೆಸ್ಟ್ ಆಗಿಲ್ಲ'' ಎಂದಷ್ಟೇ ಹೇಳುತ್ತಾರೆ ನಟ ಅರುಣ್ ಗೌಡ.


Click it and Unblock the Notifications











