ರಾತ್ರಿಯೆಲ್ಲಾ ಆಸ್ಪತ್ರೆ ಮುಂದೆ ಕಾದರೂ ಬೆಡ್ ನೀಡದೇ ವಾಪಸ್ ಕಳಿಸಿದರು: ಗಾಯಕಿ ಕಸ್ತೂರಿ ಶಂಕರ್
'ಕೋವಿಡ್ನಿಂದಾಗಿ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಆದ ನನ್ನ ಪತಿಯವರನ್ನು ಪಕ್ಕದಲ್ಲಿಟ್ಟುಕೊಂಡು ಒಂದು ಬೆಡ್ಗಾಗಿ ರಾತ್ರಿಯೆಲ್ಲಾ ಆಸ್ಪತ್ರೆಯ ಮುಂದೆ ಕಾದೆವು. ಕೊನೆಗೂ ನಮಗೆ ಬೆಡ್ ನೀಡಲಿಲ್ಲ. ಬೇರೆ ವಿಧಿ ಇಲ್ಲದೆ, ಹೃದಯ ಸಮಸ್ಯೆ ಹೊಂದಿರುವ ಪತಿಯವರನ್ನು ಮನೆಗೆ ಕರೆದುಕೊಂಡು ಬರಬೇಕಾಯಿತು'' ಕನ್ನಡದ ಹಿರಿಯ ಗಾಯಕಿ ಕಸ್ತೂರಿ ಶಂಕರ್ ತಮಗಾದ ಕೆಟ್ಟ ಅನುಭವದ ಬಗ್ಗೆ 'ಫಿಲ್ಮೀಬೀಟ್' ಜೊತೆಗೆ ಹಂಚಿಕೊಂಡರು.
'ನನ್ನ ಮಗನಿಗೆ, ಮೊಮ್ಮಗನಿಗೆ ಜ್ವರ ಬಂದಿತ್ತು. ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದೆವು ನಂತರ ಏಪ್ರಿಲ್ 16 ರಂದು ಪತಿ ಶಂಕರ್ ಅವರಿಗೆ ಜ್ವರ ಬಂತು. 17 ರಂದು ಬಿಬಿಎಂಪಿಯವರೇ ಬಂದು ಕೊರೊನಾ ಪರೀಕ್ಷೆ ಮಾಡಿದರು. ಅದೇ ದಿನವೇ ಶಂಕರ್ಗೆ ರಕ್ತದಲ್ಲಿ ಆಮ್ಲಜನಕ ಕಡಿಮೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂತು. ಕೂಡಲೇ ನನ್ನ ಸೊಸೆ ಹಲವು ನರ್ಸಿಂಗ್ ಹೋಮ್ಗಳಿಗೆ ಕರೆ ಮಾಡಿ ಐಸಿಯು ಬೆಡ್ ಬಗ್ಗೆ ವಿಚಾರಿಸಿದರು. ಆದರೆ ಎಲ್ಲಿಯೂ ಬೆಡ್ ಸಿಗಲಿಲ್ಲ. 'ನಿಮಗೆ ಸರ್ಜಾಪುರ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಬೆಡ್ ಅಲಾಟ್ ಆಗಿದೆ' ಎಂದು ಅದೇ ದಿನ ರಾತ್ರಿ 10 ಕ್ಕೆ ಬಿಬಿಎಂಪಿಯಿಂದ ಸಂದೇಶ ಬಂತು. ಕೂಡಲೇ ಹೊರಡಲು ಅಣಿಯಾದೆವು ಆದರೆ 10 ಗಂಟೆಯಿಂದ ಪ್ರಯತ್ನಿಸಿದರೂ ಯಾವುದೇ ಆಂಬುಲೆನ್ಸ್ ಸಿಗಲಿಲ್ಲ. ಕೊನೆಗೆ ಖಾಸಗಿ ಆಂಬುಲೆನ್ಸ್ ಮಾಡಿಕೊಂಡು ಆಸ್ಪತ್ರೆ ತಲುಪಿದಾಗ 11 ದಾಟಿತ್ತು' ಎಂದು 17 ನೇ ತಾರೀಖು ನಡೆದಿದ್ದನ್ನು ವಿವರಿಸಿದರು ಕಸ್ತೂರಿ ಶಂಕರ್.
'ಆಸ್ಪತ್ರೆ ಬಳಿ ಹೋದ ಮೇಲೆ ಬೇರೆಯದ್ದೇ ಕತೆ ನಡೆಯಿತು. ನಮಗಿಂತಲೂ ಮುಂಚೆ ಹಲವಾರು ಮಂದಿ ರೋಗಿಗಳೊಡನೆ ಆಸ್ಪತ್ರೆ ಬಳಿ ಕಾಯುತ್ತಾ ನಿಂತಿದ್ದರು. ಸಂಜೆ ಐದು ಗಂಟೆಯಿಂದಲೇ ಬೆಡ್ಗಾಗಿ ಕಾಯುತ್ತಿದ್ದವರೂ ಇದ್ದರು. ನಮಗೂ ಕಾಯಲು ಹೇಳಿದರು, ನಾವೂ ಕಾದೆವು. ಆದರೆ ರಾತ್ರಿ 3 ಗಂಟೆ ವೇಳೆಗೆ ಬೆಡ್ಗಳಿಲ್ಲ, ಹೊರಡಿ ಎಂದರು ಆಸ್ಪತ್ರೆಯವರು. ನನ್ನ ಸೊಸೆ, ನನ್ನ ಸಹೋದರ ಆಸ್ಪತ್ರೆಯವರೊಡನೆ ವಾಗ್ವಾದ ಮಾಡಿದರು, ಆದರೆ ಪ್ರಯೋಜನವಾಗಲಿಲ್ಲ. ಆಗಲೇ ಆತಂಕದ ಮನಸ್ಥಿತಿಯಲ್ಲಿದ್ದ ನಮಗೆ ಆಸ್ಪತ್ರೆಯವರ ನಿರ್ಲಕ್ಷ್ಯದ ಮಾತುಗಳು ಇನ್ನಷ್ಟು ಘಾಸಿಗೊಳಿಸಿದವು'' ಎಂದು ಬೇಸರದಿಂದ ನುಡಿದರು ಕಸ್ತೂರಿ ಶಂಕರ್.

ನಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ: ಕಸ್ತೂರಿ ಶಂಕರ್
''ಆ ವೇಳೆಗಾಗಲೆ ಶಂಕರ್ ಅವರಿಗೆ ಬಹಳ ಸುಸ್ತಾಗಿಬಿಟ್ಟತ್ತು. ನಮಗೂ ಆಸ್ಪತ್ರೆಯವರ ಧೋರಣೆ ಅರ್ಥವಾಗಿತ್ತು. ಹಾಗಾಗಿ ಬೇರೆ ವಿಧಿ ಇಲ್ಲದೆ ನಾಲ್ಕು ಗಂಟೆ ಸಮಯಕ್ಕೆ ಶಂಕರ್ ಅವರನ್ನು ಕರೆದುಕೊಂಡು ಮನೆಗೆ ಮರಳಿದೆವು. ಪರಿಚಯಸ್ಥ ವೈದ್ಯರ ಸಲಹೆಗಳನ್ನಾಧರಿಸಿ ಈಗ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಅವರ ಆರೋಗ್ಯ ತುಸು ಸುಧಾರಿಸಿದೆ. ಚಿಕಿತ್ಸೆ ಮುಂದುವರೆಸಿದ್ದೇವೆ. ನಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ'' ಎಂದು ಅಸಹಾಯಕರಾಗಿ ಹೇಳಿದರು.

ಐದು ಇಂಜೆಕ್ಷನ್ಗೆ 65,000 ಪಾವತಿಸಿದೆವು: ಕಸ್ತೂರಿ ಶಂಕರ್
''ಕೊರೊನಾ ಸಮಯದಲ್ಲಿ ಕೆಲವರು ಸುಲಿಗೆಗೆ ಇಳಿದಿದ್ದಾರೆ. ನನ್ನ ಮಗನಿಗೆ ಹಾಗೂ ಪತಿಗೆ ಐದು 'ರೆಮ್ಡೆಸಿವಿರ್' ಇಂಜೆಕ್ಷನ್ ಕೊಡಲೇಬೇಕಾಯಿತು. ಒಂದು ಇಂಜೆಕ್ಷನ್ಗೆ 13,000 ಪಾವತಿಸುವಂತೆ ಕೇಳಿದರು. ಬೇರೆ ವಿಧಿ ಇಲ್ಲದೆ ಪಾವತಿಸಿದೆವು. ಆದರೆ ನಂತರ ಬೇರೆ ವೈದ್ಯರ ಸಹಾಯದಿಂದ ನಮಗೆ ಕಡಿಮೆ ಮೊತ್ತಕ್ಕೆ ಇಂಜೆಕ್ಷನ್ ದೊರಕಿತು. ಒಂದು ಇಂಜೆಕ್ಷನ್ಗೆ 13,000 ಕೊಡುವುದು ನಮ್ಮಂಥಹವರಿಗೂ ಕಷ್ಟವೇ. ನಾವು ಹೇಗೊ ಕೊಟ್ಟೆವು ಆದರೆ ಬಡವರ ಪಾಡೇನು'' ಎಂದು ಆತಂಕದಿಂದ ಪ್ರಶ್ನೆ ಮಾಡಿದರು ಕಸ್ತೂರಿ ಶಂಕರ್.

ಕರೆ ಸ್ವೀಕರಿಸಲಿಲ್ಲ ಸಂಸದ ತೇಜಸ್ವಿ ಸೂರ್ಯ
''ಪತಿಯಗೆ ಬೆಡ್ ನಿರಾಕರಿಸಿದಾಗ ಸಹಾಯಕ್ಕಾಗಿ ಹಲವಾರು ಮಂದಿಗೆ ಕರೆ ಮಾಡಿದ್ದೆ ಯಾರೂ ಸ್ಪಂದಿಸಲಿಲ್ಲ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೂ ಕರೆ ಮಾಡಿದೆ ಅವರೂ ಉತ್ತರಿಸಲಿಲ್ಲ. ಬೆಳಿಗ್ಗೆಯಾದರೂ ಕರೆ ಮಾಡಿ ಮಾಹಿತಿ ಪಡೆಯುತ್ತಾರೆ, ಸಹಾಯ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆ, ಅದೂ ಆಗಲಿಲ್ಲ. ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರುವುದಿಲ್ಲ ಎಂಬುದು ನನಗೆ ಅರ್ಥವಾಯಿತು ಎಂದರು ಕಸ್ತೂರಿ ಶಂಕರ್.
Recommended Video

ರೋಗಿಗಳ ಜೀವನದ ಬಗ್ಗೆ ಕನಿಷ್ಠ ಕಾಳಜಿ ಇರಲಿ: ಕಸ್ತೂರಿ ಶಂಕರ್
''ಹೌದು, ಇದು ಸಂಕಷ್ಟದ ಸಮಯ. ಆದರೆ ರೋಗಿಗಳ ಜೀವನದ ಬಗ್ಗೆ ಕನಿಷ್ಟ ಕಾಳಜಿ ಆದರೂ ಇರಬೇಕಲ್ಲವೆ? ಬಿಬಿಎಂಪಿಯವರು ಹೇಳಿದ್ದಕ್ಕಾಗಿಯೇ ನಾವು ಆ ಆಸ್ಪತ್ರೆಗೆ ಹೋದೆವು ಆದರೆ ಅವರು ಬೆಡ್ ಇಲ್ಲವೆಂದು ವಾಪಸ್ ಕಳಿಸಿದರು ಎಂದರೆ ಅರ್ಥವೇನು? ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸಿದಂತಾಗಲಿಲ್ಲವೇ. 'ನಿಮ್ಮ ಪಾಡು ನಿಮ್ಮದು' ಎಂಬಂತಾಗಲಿಲ್ಲವೇ, ರೋಗಿಯ ಜೀವಕ್ಕೆ ಬೆಲೆ ಇಲ್ಲವೆ?' ಎಂದು ಸಿಟ್ಟಿನಿಂದಲೇ ಪ್ರಶ್ನೆ ಮಾಡಿದರು ಕಸ್ತೂರಿ ಶಂಕರ್.


Click it and Unblock the Notifications











