Hostel Hudugaru Bekagiddare: ರಮ್ಯಾ ಕೇಸ್ ಹಾಕಿದ್ದು ಪ್ರಮೋಷನ್ ಗಿಮಿಕ್ಕಾ? ಅಪ್ಪು ಎಲ್ಲಾ ನೋಡ್ತಿದ್ದಾರೆ ಎಂದ ನಿರ್ದೇಶಕ!
ಇಂದು ( ಜುಲೈ 21 ) ಶುಕ್ರವಾರ ವಿವಿಧ ಭಾಷೆಗಳ ಹಲವಾರು ಚಿತ್ರಗಳು ತೆರೆಗೆ ಬರುತ್ತಿದ್ದು, ಕನ್ನಡದ ಪರ ಬಹು ನಿರೀಕ್ಷಿತ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ರಿಲೀಸ್ ಆಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ವೀರೇಶ್ ಸಿನಿಮಾಸ್ ಚಿತ್ರಮಂದಿರದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಮೊದಲ ಪ್ರದರ್ಶನ ಆರಂಭಗೊಂಡಿದೆ.
ಇನ್ನು ಚಿತ್ರ ಸೆಟ್ಟೇರಿದಾಗಿನಿಂದಲೂ ಭಿನ್ನ ವಿಭಿನ್ನ ಪ್ರಚಾರದ ಉಪಾಯಗಳಿಂದಾಗಿ ಸದ್ದು ಮಾಡುತ್ತಾ ಬಂದಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಚಂದನವನದ ಹಲವಾರು ಸ್ಟಾರ್ಗಳನ್ನು ಪ್ರಚಾರ ಕಾರ್ಯಗಳಿಗೆ ಬಳಸಿಕೊಂಡು ಸಿನಿ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ದೊಡ್ಡ ದೊಡ್ಡ ಕಲಾವಿದರನ್ನು ತಮ್ಮ ಪ್ರೋಮೊಗಳಿಗಾಗಿ ಬಳಸಿಕೊಂಡು ಯಶಸ್ವಿಯಾಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಲು ಸಿನಿ ರಸಿಕರು ಕಾತರರಾಗಿ ಕಾಯುತ್ತಿದ್ರು. ಆದರೆ ನಟಿ ರಮ್ಯಾ ಚಿತ್ರ ಬಿಡುಗಡೆಗೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇದೆ ಎನ್ನುವಾಗ ಚಿತ್ರತಂಡದ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದರು.
ಚಿತ್ರತಂಡ ತನ್ನ ವಿಡಿಯೊ ಹಾಗೂ ಫೋಟೊಗಳನ್ನು ತನ್ನ ಅನುಮತಿ ಇಲ್ಲದೇ ಬಳಸಿಕೊಂಡಿದೆ ಎಂದು ಆರೋಪಿಸಿದ ರಮ್ಯಾ ಒಂದು ಕೋಟಿ ಪರಿಹಾರಕ್ಕೆ ಒತ್ತಾಯಿಸಿದ್ದರು. ರಮ್ಯಾ ಅವರ ಈ ನಡೆ ಚಿತ್ರತಂಡಕ್ಕೆ ಹಿನ್ನಡೆಯನ್ನು ಉಂಟುಮಾಡಿತ್ತು. ಚಿತ್ರ ಬಿಡುಗಡೆಯಾಗುತ್ತಾ ಎಂಬ ಅನುಮಾವನ್ನು ಹುಟ್ಟುಹಾಕಿತ್ತು. ಆದರೆ ನಿನ್ನೆ ಕೋರ್ಟ್ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬಿಡುಗಡೆಗೆ ಯಾವುದೇ ತಡೆ ಇಲ್ಲ ಎಂದು ತೀರ್ಪನ್ನು ನೀಡಿದ್ದು ರಮ್ಯಾ ದೃಶ್ಯಗಳಿಗೂ ಸಹ ಕತ್ತರಿ ಹಾಕುವ ಅಗತ್ಯವಿಲ್ಲ ಎಂದಿದೆ.
ಹೀಗೆ ರಮ್ಯಾ ವಿರುದ್ಧ ಗೆದ್ದು ಬಿಡುಗಡೆಗೆ ಅನುಮತಿಯನ್ನು ಪಡೆದುಕೊಂಡ ಬಳಿಕ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಸೇರಿದಂತೆ ಇಡೀ ತಂಡ ಪತ್ರಿಕಾಗೋಷ್ಠಿ ನಡೆಸಿತು. ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ನಾಳೆ ಚಿತ್ರ ರಿಲೀಸ್ ಆಗ್ತಿದೆ ಎಂಬ ಖುಷಿಯನ್ನು ಹಂಚಿಕೊಂಡು ನಾನು ಏನೇ ಮಾಡಿದ್ರೂ ಮೊದಲು ಅಪ್ಪು ಸರ್ ಅವರನ್ನ ನೆನಪಿಸಿಕೊಂಡೇ ಮಾಡೋದು, ಅವರು ಇದನ್ನೆಲ್ಲಾ ನೋಡುತ್ತಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಬಳಿಕ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ಸಿಕ್ಕಿದೆ, ಸೆನ್ಸಾರ್ ಮಂಡಳಿಯಲ್ಲಿ ಸೆನ್ಸಾರ್ ಆಗಿದ್ದ ಚಿತ್ರವನ್ನೇ ಪ್ರದರ್ಶಿಸಲಿದ್ದೇವೆ, ಯಾವುದೇ ದೃಶ್ಯಕ್ಕೂ ಕತ್ತರಿ ಹಾಕುವುದಿಲ್ಲ ಎಂದರು. ಇನ್ನು ರಮ್ಯಾ ಅವರನ್ನು ಲೇಡಿ ಸೂಪರ್ಸ್ಟಾರ್ ಎಂದು ಕರೆದ ನಿತಿನ್ ಕೃಷ್ಣಮೂರ್ತಿ ಅವರ ಮೇಲೆ ಗೌರವ ಇದೆ, ಆದರೆ ಸಾವಿರ ಕಲಾವಿದರು ಸೇರಿ ಎರಡೂವರೆ ವರ್ಷಗಳ ಕಾಲ ಕಷ್ಟಪಟ್ಟು ಮಾಡಿರುವ ಚಿತ್ರದ ಮೇಲೆ ಈ ಥರ ಮಾಡಿದ್ದು ಬೇಸರ ತಂದಿದೆ ಎಂದರು.
ಇನ್ನು ಕೆಲವರು ಈ ವಿವಾದವನ್ನು ಚಿತ್ರಕ್ಕೆ ಪ್ರಚಾರ ಸಿಗಲಿ ಎಂದು ಮಾಡಿದ ಗಿಮಿಕ್ ಎಂದುಕೊಂಡಿದ್ದಾರೆ, ಇದು ಗಿಮಿಕ್ ಅಲ್ಲ, ರಮ್ಯಾ ಅವರು ನಿಜವಾಗಿಯೂ ದೂರನ್ನು ಕೊಟ್ಟಿದ್ರು ಎಂಬುದನ್ನೂ ಸಹ ಸ್ಪಷ್ಟಪಡಿಸಿದರು. ಅಲ್ಲದೇ ನೋಟಿಸ್ ಎರಡು ದಿನಗಳ ಹಿಂದೆ ಮೇಲ್ ಮೂಲಕ ಬಂದಿತ್ತು ಹಾಗೂ ಬಳಿಕ ಮನೆಗೆ ಪೋಸ್ಟ್ ಮೂಲಕ ಬಂದಿತ್ತು ಎಂದು ನಿತಿನ್ ತಿಳಿಸಿದರು.


Click it and Unblock the Notifications











