Hostel Hudugaru Bekagiddare: ಕೇಸ್ ಹಾಕಿ ಸೋತ ರಮ್ಯಾಗೆ ಅಣ್ಣಾವ್ರ ಹಾಡು ಹಾಡಿ ಕುಟುಕಿದ ಹಾಸ್ಟೆಲ್ ಹುಡುಗ್ರು!
ಇಂದು ( ಜುಲೈ 21 ) ಶುಕ್ರವಾರ ಕನ್ನಡ ಸೇರಿದಂತೆ ವಿವಿಧ ಚಿತ್ರರಂಗಗಳ ಹಲವಾರು ಸಿನಿಮಾಗಳು ಬೆಳ್ಳಿತೆರೆಗೆ ಕಾಲಿಟ್ಟಿವೆ. ಕನ್ನಡದ ಪೈಕಿ ಬಹು ನಿರೀಕ್ಷಿತ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತೆರೆಗೆ ಬಂದಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಸಿನಿಮಾಸ್ ಚಿತ್ರಮಂದಿರದಲ್ಲಿ ಈ ಚಿತ್ರದ ಫ್ಯಾನ್ ಶೋ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು, ಈ ಬಿಡುಗಡೆಯನ್ನು ಕನ್ನಡದ ಎಲ್ಲಾ ನಟರ ಅಭಿಮಾನಿಗಳೂ ಸಹ ಸಂಭ್ರಮಿಸುತ್ತಿದ್ದಾರೆ.
ಹೌದು, ಬಿಡುಗಡೆಯಾಗುವುದೇ ಅನುಮಾನ ಎನ್ನಲಾಗುತ್ತಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ರಿಲೀಸ್ ಆಗುತ್ತಿರುವುದು ಕನ್ನಡ ಸಿನಿ ರಸಿಕರ ಪಾಲಿಗೆ ಖುಷಿಯ ವಿಚಾರವೇ ಸರಿ. ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಿಡುಗಡೆಯಾಗುವುದರಲ್ಲಿ ಅನುಮಾನ ಹುಟ್ಟಿದ್ದು ನಟಿ ರಮ್ಯಾ ಅವರು ಚಿತ್ರ ಬಿಡುಗಡೆಯಾಗಲು ಎರಡು ದಿನಗಳು ಬಾಕಿ ಇದೆ ಎನ್ನುವಾಗ ತೆಗೆದುಕೊಂಡ ಬೇಡವಾದ ವಿವಾದಾತ್ಮಕ ನಿರ್ಣಯ.

ಹೌದು, ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ನಟಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸುವ ಮೂಲಕ ಬಿಡುಗಡೆಯ ಸನಿಹದಲ್ಲಿ ಶಾಕ್ ನೀಡಿದ್ದರು. ರಮ್ಯಾ ತನ್ನ ದೃಶ್ಯಗಳ ವಿಡಿಯೊ ಹಾಗೂ ಫೋಟೊಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ತನ್ನ ಅನುಮತಿ ಇಲ್ಲದೇ ಬಳಸಿಕೊಂಡಿದೆ ಎಂದು ಆರೋಪಿಸಿ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ ನೋಟಿಸ್ ಕಳುಹಿಸಿದ್ದರು.
ಹೀಗಾಗಿಯೇ ನಿನ್ನೆ ಸಂಜೆಯೇ ನಡೆಯಬೇಕಿದ್ದ ಚಿತ್ರದ ಸೆಲೆಬ್ರಿಟಿ ಪ್ರೀಮಿಯರ್ ಶೋ ಸಹ ಕ್ಯಾನ್ಸಲ್ ಆಗಿ ಚಿತ್ರ ಬಿಡುಗಡೆಯಾಗುವುದರಲ್ಲಿ ಗೊಂದಲ ಮೂಡಿತ್ತು. ಈ ಗೊಂದಲಕ್ಕೆ ಕೋರ್ಟ್ ಉತ್ತರವನ್ನು ನೀಡಿದ್ದು, ನಿನ್ನೆ ಮಧ್ಯಾಹ್ನದ ವೇಳೆಗೆ ಹಾಸ್ಟೆಲ್ ಹುಡುಗರು ಚಿತ್ರವನ್ನು ರಮ್ಯಾ ದೃಶ್ಯಗಳಿಗೆ ಕತ್ತರಿ ಹಾಕದೇ ಬಿಡುಗಡೆ ಮಾಡಬಹುದು ಎಂದು ತೀರ್ಪನ್ನು ನೀಡಿ ಹಾಸ್ಟೆಲ್ ಹುಡುಗರ ಕೈ ಹಿಡಿದಿದೆ.
ಹೀಗೆ ಕೇಸ್ ಹಾಕಿದ್ದ ರಮ್ಯಾಗೆ ಹಿನ್ನಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಸಹ ತಮ್ಮ ಚಿತ್ರದ ಬಿಡುಗಡೆಗೆ ತೊಂದರೆ ಮಾಡಿದ ರಮ್ಯಾಗೆ ತೀರ್ಪು ಹೊರಬಿದ್ದ ನಂತರ ರಾಜ್ಕುಮಾರ್ ನಟನೆಯ ಬಹದ್ದೂರ್ ಗಂಡು ಚಿತ್ರದ 'ಮುತ್ತಿನಂಥ ಮಾತೊಂದು ಗೊತ್ತೇನಮ್ಮ' ಹಾಡನ್ನು ಹಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಈ ಹಾಡಿನಲ್ಲಿ ರಾಜ್ಕುಮಾರ್ ಅವರು ಸೊಕ್ಕಿನಿಂದ ಕೂಡಿದ್ದ ನಾಯಕಿಗೆ ಬುದ್ದಿವಾದ ಹೇಳುವ ಕೆಲಸ ಮಾಡಿದ್ದರು. ಅದೇ ರೀತಿ ಇಲ್ಲಿ ಹಾಸ್ಟೆಲ್ ಹುಡುಗ್ರು ತಮ್ಮ ವಿರುದ್ಧ ಕೇಸ್ ಹಾಕಿದ್ದ ರಮ್ಯಾ ಅವರಿಗೆ ಹಾಡಿನ ಸಾಹಿತ್ಯದ ಹಾಗೆ ಬದುಕಿ ಎಂದು ನೀತಿಪಾಠ ಮಾಡಿದ್ದಾರೆ. ಹೀಗೆ ಹಾಸ್ಟೆಲ್ ಹುಡುಗ್ರು ರಮ್ಯಾಗೆ ಈ ಹಾಡನ್ನು ಹಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿನಿ ರಸಿಕರು ಚಿತ್ರತಂಡಕ್ಕೆ ಬೆಂಬಲ ಸೂಚಿಸಿ ಸರಿಯಾದ ರಿಪ್ಲೈ ಕೊಟ್ಟಿದ್ದೀರ ಎಂದು ಹಾಸ್ಟೆಲ್ ಹುಡುಗ್ರ ಬೆನ್ನು ತಟ್ಟುತ್ತಿದ್ದಾರೆ.
ಇನ್ನು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸಹ ತಮ್ಮ ಶಿಷ್ಯರ ಪರ ಬ್ಯಾಟ್ ಬೀಸಿದ್ದು, ನ್ಯಾಯ ಸಿಕ್ಕಿದ್ದರ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡು ನಟಿ ರಮ್ಯಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಬುಕಿಂಗ್ ತೆರೆದಿದೆ ಎಂಬ ಪೋಸ್ಟ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ "ನ್ಯಾಯ ಅಂದ್ರೆ ನ್ಯಾಯ.. ಜೈ ಆಂಜನೇಯ! ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ. ಥಿಯೇಟರ್ನಲ್ಲಿ ಸಿಗೋಣ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











