ತಮ್ಮದೇ ಸಾವಿನ ಸುದ್ದಿ ಕೇಳಿ ನಗುತ್ತಿದ್ದರು ಅಂಬರೀಶ್
ಅಂಬರೀಶ್ ಅವರ ಹುಟ್ಟುಹಬ್ಬ ಇಂದು. ಅವರಿಲ್ಲದೆ ಆಚರಿಸಲಾಗುತ್ತಿರುವ ಎರಡನೇ ಹುಟ್ಟುಹಬ್ಬ ಇದು. ಅಂಬರೀಶ್ ಅವರು ನವೆಂಬರ್ 24 ರ 2018 ರಂದು ಕಾಲವಾದರು. ಆದರೆ ಅವರು ಸಾಯುವ ಮುನ್ನವೇ ಹಲವು ಬಾರಿ ಅವರ ಸಾವಿನ ಸುದ್ದಿ ಹರಿದಾಡಿತ್ತು.
ಆದರೆ ಅಂಬರೀಶ್ ಸಾಯುವ ಮುನ್ನವೇ ಅವರ ಸಾವಿನ ಸುಳ್ಳು ಸುದ್ದಿ ಹಲವು ಬಾರಿ ಹರಿದಾಡಿತ್ತು. ಅಂಬರೀಶ್ ಅವರು ಚಿಕಿತ್ಸೆಗೆಂದು ಸಿಂಗಾಪುರಕ್ಕೆ ಹೋದಾಗಲಂತೂ ಸುಳ್ಳು ಸುದ್ದಿಗಳು ತುಸು ಜೋರಾಗಿಯೇ ಹರಿದಾಡಿದ್ದವು. ಅಂಬರೀಶ್ ಅವರು ತಮ್ಮದೇ ಸಾವಿನ ಸುದ್ದಿಯನ್ನು ಹೇಗೆ ಎದುರಿಸಿದ್ದರು ಎಂಬುದನ್ನು ಅವರ ಕೆಲವು ಗೆಳೆಯರು ಮಾತನಾಡಿದ್ದಾರೆ.

ಸಾವಿನ ಸುಳ್ಳು ಸುದ್ದಿ ಕೇಳಿ ನಕ್ಕು ಬಿಡುತ್ತಿದ್ದರು ಅಂಬರೀಶ್
ಅಂಬರೀಶ್ ಅವರ ಪರಮಾಪ್ತ ಗೆಳೆಯ ರಾಜೇಂದ್ರ ಸಿಂಗ್ ಬಾಬು ಅಂಬರೀಶ್ ಅವರ ಪೂರ್ಣ ಬೆಳವಣಿಗೆ ಕಂಡವರು. ಅವರ ಸಂತಸ, ದುಃಖದಲ್ಲಿ ಜೊತೆಯಾದವರು. ಅವರು ಹೇಳುವಂತೆ, ಅಂಬರೀಶ್ ಅವರ ಸಾವಿನ ಸುಳ್ಳು ಸುದ್ದಿ ಕೇಳಿ ನಕ್ಕು ಬಿಡುತ್ತಿದ್ದರಂತೆ ಅಂಬರೀಶ್.

ಅಂಬರೀಶ್ ಸಾವಿನ ಬಗ್ಗೆ ಹಲವು ಬಾರಿ ಹಬ್ಬಿತ್ತು ಸುಳ್ಳು ಸುದ್ದಿ
'ಅಂಬರೀಶ್ ಬದುಕಿದ್ದಾಗಲೇ ಸಾಕಷ್ಟು ಬಾರಿ ಸಾವಿನ ಸುದ್ದಿ ಹರಡಿಬಿಟ್ಟಿತ್ತು. ಈ ಸುಳ್ಳು ಸಾವಿನ ಸುದ್ದಿ ಸೆಲೆಬ್ರಿಟಿಗಳ್ಯಾರನ್ನೂ ಬಿಟ್ಟಿಲ್ಲ. ರಾಜ್ಕುಮಾರ್ ವಿಷಯದಲ್ಲಿಯೂ ಹೀಗೆಯೇ ಆಗಿತ್ತು. ಆದರೆ ಅಂಬರೀಶ್ ತಮ್ಮ ಸಾವಿನ ಸುಳ್ಳು ಸುದ್ದಿಯನ್ನೂ ನಗುತ್ತಲೇ ಸ್ವೀಕರಿಸುತ್ತಿದ್ದರು. ನಾನು ಬದುಕಿದ್ದಾಗಲೇ ಸಾವಿನ ಸುದ್ದಿ ಹಂಚಿ ಸತ್ತ ಮೇಲೆ ಜನ ನನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ತೋರಿಸಿದ್ದಾರೆ ಅವರಿಗೆ ಥ್ಯಾಂಕ್ಸ್ ಹೇಳಬೇಕು ಎಂದು ನಗುತ್ತಿದ್ದರು ಅಂಬರೀಶ್' ಎಂದರು ರಾಜೇಂದ್ರ ಸಿಂಗ್ ಬಾಬು.

ಹಂಸಲೇಖ ಪದ್ಯದ ಮೂಲಕ ಹೇಳಿದ್ದರು
ಹಂಸಲೇಖ ಸಹ ಹಿಂದೊಮ್ಮೆ ಅಂಬರೀಶ್ ಅವರು ಸಾವಿನ ಬಗ್ಗೆ ಹೇಗೆ ಯೋಚಿಸುತ್ತಾರೆಂದು ಪದ್ಯವೊಂದರಲ್ಲಿ ಬರೆದಿದ್ದರು. 'ಸಾವನ್ನು Joker ಎಂದು ಗೇಲಿ ಮಾಡಿ: ಜೀವನ ಒಂದು ತಮಾಶೆ ಎಂದು prove ಮಾಡಿ: ಶಿಸ್ತುಗಳಿಗೆ ಸೆಡ್ಡು ಹೊಡೆದು ಹೊರಟಿದ್ದಾರೆ ಅಂಬಿ! ಕರುನಾಡು ಅಳುತ್ತಿದೆ: ಅವರ ಈ ಧೈರ್ಯದ ಡೈಲಾಗುಗಳ ನಂಬಿ! ದೈವವಿತ್ತ ದೈತ್ಯ ದೇಹ: ಅದಕ್ಕೋ... ಮೋಜಿನ ಮೇಲೆ ಮಹಾಮೋಹ!' ಎಂಬುದು ಹಂಸಲೇಖ ಅಂಬರೀಶ್ ಅವರಿಗೆ ಸಾವಿನ ಬಗ್ಗೆ ಇದ್ದ ಅಭಿಪ್ರಾಯದ ಬಗ್ಗೆ ಬರೆದ ಸಾಲಾಗಿದ್ದವು.

ಸೆಲೆಬ್ರಿಟಿಗಳಾರನ್ನೂ ಬಿಟ್ಟಿಲ್ಲ ಸುಳ್ಳು ಸುದ್ದಿಜಾಲ
ಸಾವಿನ ಕುರಿತಾದ ಸುಳ್ಳು ಸುದ್ದಿಗಳು ಸೆಲೆಬ್ರಿಟಿಗಳಿಗೆ ಮಾಮೂಲೇನೋ ಎಂಬಂತಾಗಿ ಬಿಟ್ಟಿದೆ. ರಾಜೇಂದ್ರ ಸಿಂಗ್ ಬಾಬು ಹೇಳಿದಂತೆ. ರಾಜ್ಕುಮಾರ್ ಅವರ ಬಗ್ಗೆಯೂ ಹೀಗೆ ಹಲವು ಸುಳ್ಳು ಸುದ್ದಿಗಳು ಹರಿದಾಡಿದ್ದವು. ಇತ್ತೀಚೆಗೆ ನಟಿ ಜಯಂತಿ ಅವರ ಬಗ್ಗೆಯೂ ಹೀಗೆ ಸುಳ್ಳು ಸಾವಿನ ಸುದ್ದಿಗಳು ಹರಿದಾಡಿದ್ದವು.


Click it and Unblock the Notifications











