"ಬಾಡಿನ ಏನಾದರೂ ಮಾಡಿ ಮುಚ್ಚಾಕಿ" ಎಂದಿದ್ರಾ ದರ್ಶನ್? ದರ್ಶನ್ ಸಿಕ್ಕಿಬಿದ್ದಿದ್ದೇಗೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಅವರ ಗ್ಯಾಂಗ್ ಅನ್ನು ಪೊಲೀಸರು ಬಂದಿದ್ದಾರೆ. ಪವಿತ್ರಾ ಗೌಡ ಆರೋಪಿ ನಂ1 ಹಾಗೂ ದರ್ಶನ್ ಆರೋಪಿ ನಂ 2 ಆಗಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದ ಒಟ್ಟು 13 ಆರೋಪಿಗಳನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ.
ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 13 ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ನೀಡಿದ್ದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಇವರ ಈ 13 ಮಂದಿಯ ಮೇಲಿದೆ. ಇನ್ನೂ ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿದ ಬಳಿಕ ಅಸಲಿ ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ? ಇಲ್ವಾ? ಅನ್ನೋದು ಗೊತ್ತಾಗಲಿದೆ.

ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಿಕ್ಕಿಬಿದ್ದಿದ್ದೇಗೆ? ಇದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಇಲ್ಲಿವರೆಗೂ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ದರ್ಶನ್ರನ್ನು ಪೊಲೀಸರು ಬಂದಿದ್ದೇ ಒಂದು ರೋಚಕ ಸಂಗತಿ. ರೇಣುಕಾಸ್ವಾಮಿ ಇನ್ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡಗೆ ಅಶ್ಲೀಲ ಮೇಸೆಜ್ ಕಳಿಸಿದ್ದ. ಈ ವಿಚಾರವನ್ನು ಪವಿತ್ರಾ ಗೌಡ ನಟ ದರ್ಶನ್ಗೆ ಹೇಳಿದ್ಮೇಲೆ, ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಬುದ್ದಿ ಕಲಿಸುವುದಕ್ಕೆ ಮುಂದಾಗಿದ್ದರು. ಈ ವೇಳೆ ಮರ್ಡರ್ ನಡೆದಿತ್ತು.
ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ಮೃತದೇಹವನ್ನು ಕಲಾಸಿಪಾಳ್ಯದ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಮೃತದೇಹ ಸಿಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದರಿಂದ ತಮ್ಮ ಬಾಸ್ ದರ್ಶನ್ ಎಲ್ಲಿ ಸಿಕ್ಕಿಬೀಳುತ್ತಾರೋ ಅಂತ ನಂದೀಶ್, ಪವನ್ ಹಾಗೂ ನವೀನ್ ಮೂವರು ಪೊಲೀಸರಿಗೆ ಶರಣಾಗಿದ್ದರು. ಇಲ್ಲಿಗೆ ತನಿಖೆ ನಿಲ್ಲಬಹುದು ಎಂದುಕೊಂಡಿದ್ದರು. ಆದರೆ, ಪೊಲೀಸರಿಗೆ ಬೇರೆಯದ್ದೇ ಸುಳಿವು ಸಿಕ್ಕಿತ್ತು.

ಪೊಲೀಸರು ಈ ಮೂವರ ಕಾಲ್ ರೆಕಾರ್ಡ್ ಅನ್ನು ಚೆಕ್ ಮಾಡುತ್ತಾರೆ. ರಾತ್ರಿಯಿಡಿ ದರ್ಶನ್ ಜೊತೆ ಈ ಆರೋಪಿಗಳು ಸಂಪರ್ಕದಲ್ಲಿ ಇರುವುದು ಗೊತ್ತಾಗುತ್ತೆ. ಈ ವಿಷಯದ ಬಗ್ಗೆ ಪೊಲೀಸರು ಮತ್ತೆ ವಿಚಾರಣೆ ನಡೆಸಲು ಆರಂಭಿಸುತ್ತಾರೆ. ಮತ್ತೆ ಅದೇ ಕಥೆ ಹೇಳಿದಾಗ, ಮಧ್ಯರಾತ್ರಿ 2.30ರವರೆಗೂ ಆರೋಪಿಗಳಿಗೆ ಪೊಲೀಸರು ತಮ್ಮ ಸ್ಟೈಲ್ನಲ್ಲಿ ಬೆಂಡೆತ್ತುತ್ತಾರೆ.
ಆಗಲೇ ಪೊಲೀಸರ ಟ್ರೀಟ್ಮೆಂಟ್ ತಾಳಲಾರದೆ ಆರೋಪಿ ನಂದೀಶ್ ಬಾಯಿ ಬಿಡುತ್ತಾನೆ. ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಇದ್ದರು ಎಂಬ ಮಾಹಿತಿ ನೀಡುತ್ತಾನೆ. ರೇಣುಕಾಸ್ವಾಮಿಗೆ ಬಾಸ್ ಹೊಡೆದು ಮನೆಗೆ ಹೋಗಿದ್ದರು. ಆಮೇಲೆ ನಾವು ಹೊಡೆಯುವುದಕ್ಕೆ ಶುರು ಮಾಡಿದ್ವಿ. ಆ ವೇಳೆ ಸ್ಥಳದಲ್ಲೇ ರೇಣುಕಾಸ್ವಾಮಿ ಸತ್ತು ಹೋದ ಎಂದು ಬಾಯಿ ಬಿಟ್ಟಿದ್ದ.
ರೇಣುಕಾಸ್ವಾಮಿ ಸತ್ತು ಹೋದ ಬಳಿಕ ದರ್ಶನ್ಗೆ ಕರೆ ಮಾಡಿ ಮಾತಾಡುತ್ತಾರೆ. ಈ ವೇಳೆ ದರ್ಶನ್ ಏನಾದರೂ ಮಾಡಿ ಮುಚ್ಚಾಕಿ ಎಂದು ದರ್ಶನ್ ಹೇಳಿದ್ದರಂತೆ. ರಾತ್ರಿಯಾಗಿದ್ದರಿಂದ ಭಯದಲ್ಲಿ ಏನು ಮಾಡಬೇಕು ಅನ್ನೋದು ಗೊತ್ತಾಗದೇ ಇವರು ಆ ಮೃತ ದೇಹವನ್ನು ಕಲಾಸಿಪಾಳ್ಯದ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು.
ನಂದೀಶ್, ಪವನ್ ಹಾಗೂ ನವೀನ್ ಮೂವರನ್ನೂ ಇಟ್ಟುಕೊಂಡು ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ದರ್ಶನ್ ಅಲರ್ಟ್ ಆಗಿದ್ದರು. ಮೊಬೈಲ್ ಸ್ವಿಚ್ ಆಫ್ ಆಗಿತ್ತು.ಮೈಸೂರಿಗೆ ಶಿಫ್ಟ್ ಆಗಿದ್ದರು. ಈ ಸಂದರ್ಭದಲ್ಲಿ ರಾಜಕಾರಣಿ ಹಾಗೂ ಸೆಲೆಬ್ರಿಟಿಗಳಿಂದ ಒತ್ತಡ ಹೇರಿಸಲು ಯತ್ನಿಸಿದ್ದರು ಅನ್ನೋ ಮಾಹಿತಿ ಪೊಲೀಸ್ ವಲಯದಿಂದ ಸಿಕ್ಕಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಹೀಗೆ ಈ ಕೇಸ್ನಲ್ಲಿ ದರ್ಶನ್ ಸಿಕ್ಕಿಬಿದ್ದಿದ್ದರು.


Click it and Unblock the Notifications











