'ಕಾಂಚಿ ತಲೈವನ್' ಚಿತ್ರದಲ್ಲಿ ಚಾಲುಕ್ಯ ಧ್ವಜ, ಪುಲಿಕೇಶಿಗೆ ಅವಮಾನ; ಕ್ಷಮೆ ಕೇಳಿದ್ದ ಎಂಜಿಆರ್
ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ತಮಿಳು ನಟ ಕಮಲ್ ಹಾಸನ್ ಹೇಳಿ ವಿವಾದ ಸೃಷ್ಟಿಸಿದೆ. ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಲು ಕಮಲ್ ಹಿಂದೇಟು ಹಾಕುತ್ತಿದ್ದಾರೆ. ಕ್ಷಮೆ ಕೇಳದಿದ್ದರೆ ತಕ್ಕ ಶಾಸ್ತಿ ಮಾಡ್ತೀವಿ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.
ಅಂದಹಾಗೆ ತಮಿಳು ಕಲಾವಿದರು ಕನ್ನಡಿಗರನ್ನು ಕೆಣಕಿ ಬಳಿಕ ಕ್ಷಮೆ ಕೇಳುವ ನಾಟಕ ಮಾಡಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ರಜನಿಕಾಂತ್ ಹಾಗೂ ಸತ್ಯರಾಜ್ ಕೂಡ ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಬಳಿಕ ತಮ್ಮ ಸಿನಿಮಾಗಳ ಬಿಡುಗಡೆಗೆ ಕರ್ನಾಟಕದಲ್ಲಿ ಸಮಸ್ಯೆ ಆಗುತ್ತದೆ ಎಂದು ಅರಿತು ವಿಷಾದ ವ್ಯಕ್ತಪಡಿಸಿ ಇನ್ನು ಮುಂದೆ ಇಂತಹ ತಪ್ಪು ನಡೆಯಲ್ಲ ಎಂದು ಹೇಳಿ ತಪ್ಪಿಸಿಕೊಂಡಿದ್ದರು. ಇಬ್ಬರ ಬಾಯಲ್ಲಿ ಕ್ಷಮೆಯ ಮಾತು ಬರಲೇಯಿಲ್ಲ.

ದಶಕಗಳಿಂದಲೂ ಕನ್ನಡಿಗರನ್ನು ತಮಿಳರು ಕೆಣಕುವ ದುಸ್ಸಾಹಸ ಮಾಡುತ್ತಲೇ ಇದ್ದಾರೆ. 1963ರಲ್ಲಿ ಎಂಜಿಆರ್ ನಟನೆಯ 'ಕಾಂಚಿ ತಲೈವನ್' ಎಂಬ ಐತಿಹಾಸಿಕ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ಪಲ್ಲವ ದೊರೆ ನರಸಿಂಹವರ್ಮನ್ ಪಾತ್ರದಲ್ಲಿ ಅವರು ನಟಿಸಿದ್ದರು. ಕರುಣಾನಿಧಿ ಚಿತ್ರಕಥೆ ಬರೆದಿದ್ದ ಚಿತ್ರಕ್ಕೆ ಎ. ಕಾಶಿಲಿಂಗಂ ಆಕ್ಷನ್ ಕಟ್ ಹೇಳಿದ್ದರು. ಪಲ್ಲವರು ಹಾಗೂ ಚಾಲುಕ್ಯರ ನಡುವಿನ ವೈರತ್ವದ ಕಥೆ ಚಿತ್ರದಲ್ಲಿತ್ತು.
ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ್ದ ಸಿನಿಮಾ ಸಾಕಷ್ಟು ವಿವಾದಗಳಿಂದಲೂ ಸುದ್ದಿ ಮಾಡಿತ್ತು. 'ಕಾಂಚಿ ತಲೈವನ್' ಚಿತ್ರದಲ್ಲಿ ಇಮ್ಮಡಿ ಪುಲಿಕೇಶಿಯನ್ನು ಬಫೂನ್ ರೀತಿ ಚಿತ್ರಿಸಿದ್ದಲ್ಲದೇ ತಮಿಳು ರಾಜ ಚಾಲುಕ್ಯರ ಧ್ವಜಕ್ಕೆ ಅವಮಾನ ಮಾಡುವ ಸನ್ನಿವೇಶ ಇತ್ತು. ಇದು ಸಜವಾಗಿಯೇ ಕನ್ನಡಿಗರನ್ನು ಕೆರಳಿಸಿತ್ತು. ಕನ್ನಡ ಕಾರ್ಯಕರ್ತ ಮಾ. ರಾಮಮೂರ್ತಿಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕಾರಣವಾಯಿತು. ಇದು ಕನ್ನಡ ಧ್ವಜದ ಅಗತ್ಯಕ್ಕೆ ಒಂದು ಕಾರಣ ಎನ್ನುವಂತಾಯಿತು. ಅಂದಿನ ಹೋರಾಟದಲ್ಲಿ ಅನಕೃ ಕೂಡ ಭಾಗಿ ಆಗಿದ್ದರು. ಬಳಿಕ ಎಂಜಿಆರ್ ಬೆಂಗಳೂರಿಗೆ ಬಂದು ತಪ್ಪಿಗೆ ಕ್ಷಮೆ ಕೇಳಿದ್ದರು. ಆ ದೃಶ್ಯಗಳನ್ನು ತೆಗೆದು ಹಾಕಲಾಗಿತ್ತು.
ಡಾ. ರಾಜ್ಕುಮಾರ್ ಅವರ ಅಭಿಮಾನಿಯೂ ಆಗಿರುವ ಹಾಲುಜೇನು ರಾಮ್ಕುಮಾರ್ ಈ ಘಟನೆ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. "ಕನ್ನಡದಲ್ಲಿ 'ಇಮ್ಮಡಿ ಪುಲಿಕೇಶಿ' ಸಿನಿಮಾ ಬಂದಿತ್ತು. ಅದರಲ್ಲಿ ಪುಲಿಕೇಶಿ ಅಂತ್ಯ ಹೇಗಾಯಿತು ಎಂದು ಸ್ಪಷ್ಟವಾಗಿ ತೋರಿಸಿದ್ದರು. ಆದರೆ ತಮಿಳಿನ 'ಕಾಂಚಿ ತಲೈವನ್' ಚಿತ್ರದಲ್ಲಿ ಇತಿಹಾಸ ತಿರುಚಲಾಗಿತ್ತು. ಬೇಕಂತಲೇ ಪುಲಿಕೇಶಿ ಪಾತ್ರವನ್ನು ಆ ರೀತಿ ಚಿತ್ರಿಸಿದ್ದರು. ಕೊನೆಗೆ ಚಾಲುಕ್ಯರ ಧ್ವಜಕ್ಕೆ ಅವಮಾನ ಮಾಡಲಾಗಿತ್ತು. ಆಗ ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಪ್ರತಿಭಟನೆ ನಡೆಸಲಾಗಿತ್ತು. ಅನಕೃ, ಮಾ. ರಾಮಮೂರ್ತಿ ಇದರ ಮುಂದಾಳತ್ವ ವಹಿಸಿದ್ದರು. ಎಂಜಿಆರ್ ಬೆಂಗಳೂರಿಗೆ ಬಂದು ಕ್ಷಮೆ ಕೇಳಿದ್ದರು. ಆ ಸನ್ನಿವೇಶವನ್ನು ಇಲ್ಲಿ ತೆಗೆಸಿದ್ದರು. ಆದರೆ ತಮಿಳುನಾಡಿನಲ್ಲಿ ಪ್ರದರ್ಶನವಾದ ಚಿತ್ರದಲ್ಲಿ ಆ ಸನ್ನಿವೇಶ ಇತ್ತು" ಎಂದು ನೆನಪಿಸಿಕೊಂಡಿದ್ದಾರೆ.

ಹೀಗೆ ತಮಿಳು ಚಿತ್ರದಲ್ಲಿ ಪುಲಿಕೇಶಿಯನ್ನು ತಪ್ಪಾಗಿ ಚಿತ್ರಿಸಿದ್ದರಂತೆ ಆತನ ಶೌರ್ಯ ಪರಾಕ್ರಮಗಳನ್ನು ಕನ್ನಡ 'ಇಮ್ಮಡಿ ಪುಲಿಕೇಶಿ' ಚಿತ್ರದಲ್ಲಿ ಸಾರಿ ಹೇಳಲಾಗಿತ್ತು. ಜಿ. ವಿ ಅಯ್ಯರ್ ಚಿತ್ರಕಥೆ ಬರೆದಿದ್ದ ಚಿತ್ರವನ್ನು ಎನ್.ಸಿ ರಾಜನ್ ಕಟ್ಟಿಕೊಟ್ಟಿದ್ದರು. ಸಂಗೀತ ನಿರ್ದೇಶಕ ಜಿ. ಕೆ ವೆಂಕಟೇಶ್ ಚಿತ್ರ ನಿರ್ಮಾಣ ಸಹ ಮಾಡಿದ್ದರು. ಅಣ್ಣಾವ್ರ ಜೊತೆ ಉದಯ್ ಕುಮಾರ್, ಜಯಂತಿ, ಕಲ್ಪನಾ, ಬಾಲಕೃಷ್ಣ, ಕೆ. ಎಸ್ ಅಶ್ವಥ್ ಚಿತ್ರದ ತಾರಾಗಣದಲ್ಲಿದ್ದರು.
19 ವರ್ಷಗಳ ಹಿಂದೆ 'ಇಮ್ಸೈ ಅರಸನ್ 23 ಎಂ ಪುಲಿಕೇಶಿ' ಎಂಬ ಹಾಸ್ಯ ಪ್ರಧಾನ ಸಿನಿಮಾ ಬಂದಿತ್ತು. ಚಿತ್ರದಲ್ಲಿ ವಡಿವೇಲು ದ್ವಿಪಾತ್ರದಲ್ಲಿ ನಟಿಸಿದ್ದರು. ಬೇಕಂತಲೇ ಪುಲಿಕೇಶಿ ಹೆಸರನ್ನು ಬಳಸಿಕೊಂಡು ಅವಮಾನ ಮಾಡಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೂಡ ಹಾಲುಜೇನು ರಾಮ್ಕುಮಾರ್ ಮಾತನಾಡಿದ್ದಾರೆ. ತಮಿಳರು ಬೇಕಂತಲೇ ಇಂತಾದೊಂದು ಸಿನಿಮಾ ಮಾಡಿದ್ದರು ಎಂದು ಅಸಮಾಧಾನ ಹೊರ ಹಾಕಿದ್ದಾರೆ.


Click it and Unblock the Notifications











