ದರ್ಶನ್ಗೆ ಸುಳ್ಳು ಹೇಳಿ ರೀಮೆಕ್ ಮಾಡಿದ್ದ ಚಾಲಾಕಿ ನಿರ್ದೇಶಕ ಯಾರು? ಸಿಕ್ಕಿ ಬಿದ್ದಿದ್ಹೇಗೆ?
ಕೆಲವರು ಚಾಪೆ ಕೆಳಗೆ ನುಸುಳಿದರೆ ಮತ್ತೆ ಕೆಲವರು ರಂಗೋಲಿ ಕೆಳಗೆ ನುಸುಳುತ್ತಾರೆ. ಚಿತ್ರರಂಗದಲ್ಲೂ ಇಂತಹವರು ಬಹಳಷ್ಟು ಜನ ಸಿಗುತ್ತಾರೆ. ಏನೇನೋ ಕಥೆ ಹೇಳಿ, ಯಾವುದೋ ಕಥೆ ಕದ್ದು ತಂದು ಸಿನಿಮಾ ಮಾಡಿದ ಭೂಪರು ಇದ್ದಾರೆ. ಇಂತಹ ಚಾಲಾಕಿ ನಿರ್ದೇಶನಕನ ಬಗ್ಗೆ ನಟ ದರ್ಶನ್ ಮಾತನಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನೂರಾರು ಸಿನಿಮಾ ಕಥೆಗಳನ್ನು ಕೇಳಿದ್ದಾರೆ. ಕೆಲವು ಸಿನಿಮಾಗಳು ಸಕ್ಸಸ್ ಕಂಡಿದ್ದರೆ ಮತ್ತೆ ಕೆಲವು ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿವೆ. ಸದ್ಯ ದರ್ಶನ್ ನಟನೆಯ 'ಕ್ರಾಂತಿ' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ಸಿಕ್ಕಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಟ ದರ್ಶನ್ ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ.
ನಟ ದರ್ಶನ್ಗೆ ಕಥೆ ಹೇಳಿ ಒಪ್ಪಿಸೋದು ಬಹಳ ಕಷ್ಟ ಇದೆ ಅನ್ನುವ ಮಾತುಗಳು ಕೇಳಿ ಬರುತ್ತಿರುತ್ತದೆ. ಈ ಬಗ್ಗೆ ಸ್ವತಃ ದರ್ಶನ್ ಮಾತನಾಡಿದ್ದು ನಿರ್ದೇಶಕರೊಬ್ಬರು ಯಾವುದೋ ಸಿನಿಮಾ ಕಥೆ ಕದ್ದು ಅದನ್ನೇ ಹೇಳಿ ಒಪ್ಪಿಸಿಬಿಟ್ಟಿದ್ದರು ಎಂದು ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ನಂಗೆ ಕಥೆ ಹೇಳಿ ಒಪ್ಪಿಸೋದು ಕಷ್ಟ ಅಲ್ಲ
ಈ ಸಂಜೆ ನ್ಯೂಸ್ ಯೂಟ್ಯೂಬ್ ಚಾನಲ್ಗೆ ನೀಡಿರುವ ಸಂದರ್ಶನದಲ್ಲಿ ನಟ ದರ್ಶನ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. "ನನಗೆ ಕಥೆ ಹೇಳಿ ಒಪ್ಪಿಸೋದು ಕಷ್ಟ ಅಲ್ಲ. ಯಾರೋ ಸುಳ್ಳು ಹೇಳಿರಬಹುದು. ನಾನು ಕಥೆ ಒಪ್ಪಿಯೇ ಎಲ್ಲಾ ಸಿನಿಮಾಗಳಲ್ಲಿ ನಟಿಸಿರೋದು. ಕೆಲವೊಮ್ಮೆ ಚೆನ್ನಾಗಿರಬಹುದು ಎಂದು ನಾನು ಒಪ್ಪಿಕೊಂಡಿರುತ್ತೇನೆ. ಕೆಲವರು ಕಥೆ ಚೆನ್ನಾಗಿ ಹೇಳುತ್ತಾರೆ. ಚೆನ್ನಾಗಿ ಸಿನಿಮಾ ಮಾಡಲು ಬರಲ್ಲ. ಕೆಲವರು ಚೆನ್ನಾಗಿ ಸಿನಿಮಾ ಮಾಡುತ್ತಾರೆ ಆದರೆ ಕಥೆ ಹೇಳಲು ಬರುವುದಿಲ್ಲ" ಎಂದಿದ್ದಾರೆ.

ಇಂಟ್ರೆಸ್ಟಿಂಗ್ ಕಥೆ ಹೇಳಿದ ದರ್ಶನ್
"ಒಮ್ಮೆ ಬಹಳ ಇಷ್ಟಪಟ್ಟು ಒಂದು ಕಥೆ ಒಪ್ಪಿಕೊಂಡಿದ್ದೆ. ಯಾವುದೋ ಒಂದು ಸಿನಿಮಾ. ಹೆಸರು ಬೇಡ. ಕಥೆ ಕೇಳಿ, ಏನಯ್ಯಾ ಕಥೆ ಹಿಂಗೆ ಮಾಡಿದ್ದಾನೆ. ಹಂಗೆ ಹಿಂಗೆ ಅಂತ. ಗೋವಾದಲ್ಲಿ ಶೂಟಿಂಗ್ ಹೋಗಿದ್ದೆ. ಟಿವಿ ನೋಡುತ್ತಿದ್ದೆ. ಏನೋ ಒಂದು ಸಣ್ಣ ಪ್ರೋಮೊ ರೀತಿ ಬಂತು. ಅಯ್ಯೋ ಇದು ಎಲ್ಲೋ ಕೇಳಿದಂತೆ ಇದೆ ಅಲ್ವಾ ಅನ್ನಿಸ್ತು. ಸಂಜೆ 7 ಗಂಟೆಗೆ ಸಿನಿಮಾ ಬರುತ್ತೆ ಅಂತ ಬೇಗ ಹೋಗಿ ಶೂಟಿಂಗ್ ಮುಗಿಸಿ, ಬಂದು ಕೂತು ಸಿನಿಮಾ ನೋಡಿದ್ದೆ. ಅಯ್ಯೋ ಅವನು ಸೆಕೆಂಡ್ ಹಾಫ್ ಇದೇ ಕಥೆ ಹೇಳಿದ್ನಲ್ಲ. ಫಸ್ಟ್ ಹಾಫ್ ಮಾತ್ರ ಬೇರೆ ಹೇಳಿದ್ದ ಅನ್ನಿಸಿತ್ತು. ಆ ಮೇಲೆ ಅವನಿಗೆ ಹೇಳ್ದೆ. ಇದು ರೀಮೆಕ್ ಸಿನಿಮಾ ಅಂತ ಮೊದ್ಲೆ ಹೇಳಬಹುದಿತ್ತು ಅಲ್ವಾ ಅಂತ. ಎಷ್ಟೋ ಜನ ಕೊರಿಯನ್ ಸಿನಿಮಾಗಳನ್ನು ಕದ್ದು ಮಾಡುತ್ತಿದ್ದಾರೆ ಅಂತಾರೆ."

ಯಾರು ಆ ಚಾಲಾಕಿ ನಿರ್ದೇಶಕ?
ನಟ ದರ್ಶನ್ ಹೀಗೆ ಹೆಸರು ಹೇಳದೇ ಸಿನಿಮಾವೊಂದರ ಬಗ್ಗೆ ಮಾತನಾಡುತ್ತಿದ್ದಂತೆ ಯಾವುದು ಆ ಸಿನಿಮಾ? ಯಾರು ಆ ನಿರ್ದೇಶಕ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ದರ್ಶನ್ ನಟನೆಯ ಒಂದಷ್ಟು ಸಿನಿಮಾಗಳ ಕಥೆಗಳನ್ನು ಮೆಲುಕು ಹಾಕಿದ್ದಾರೆ. ಮತ್ತೆ ಕೆಲವರು ದರ್ಶನ್ ಕಥೆ ಕೇಳಿದ್ದಾಗಿ ಮಾತ್ರ ಹೇಳಿದ್ದಾರೆ. ಅವರು ಆ ಸಿನಿಮಾ ಮಾಡಿದ್ರೋ ಇಲ್ವೋ ಗೊತ್ತಿಲ್ಲ ಎಂದು ಸುಮ್ಮನಾಗಿದ್ದಾರೆ.

ಜನವರಿ 26ಕ್ಕೆ 'ಕ್ರಾಂತಿ' ರಿಲೀಸ್
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಜನವರಿ 26ಕ್ಕೆ ತೆರೆಗೆ ಬರಲಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಚಿತಾ ರಾಮ್, ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ಸ್ವತಃ ವಿ. ಹರಿಕೃಷ್ಣ ಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ. ಸಾಕಷ್ಟು ದಿನಗಳಿಂದ ಅಭಿಮಾನಿಗಳು 'ಕ್ರಾಂತಿ' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಚಿತ್ರತಂಡ ಅದನ್ನು ಮತ್ತಷ್ಟು ಹೆಚ್ಚಿಸಿದೆ.


Click it and Unblock the Notifications











