ಸಹಾಯ ಮಾಡಲು ಕರೆ ನೀಡಿದ್ದ ಲೂಸಿಯಾ ಪವನ್, ಸಂಗ್ರಹವಾದ ಹಣವೆಷ್ಟು?
ಕೊರೊನಾ ಭೀತಿಯಿಂದಾಗಿ ಚಿತ್ರರಂಗ ಬಂದ್ ಆಗಿ ಹಲವು ದಿನಗಳಾದವು. ಚಿತ್ರೀಕರಣವನ್ನೇ ನಂಬಿಕೊಂಡಿದ್ದ ಲಕ್ಷಾಂತರ ದಿನಗೂಲಿ ನೌಕರರಿಗೆ ಕೆಲಸವಿಲ್ಲದಂತಾಗಿದೆ. ಅವರ ಕುಟುಂಬಗಳು ಆತಂಕದ ದಿನಗಳನ್ನು ಎದುರಿಸುತ್ತಿವೆ.
ಈ ಸಮಯದಲ್ಲಿ ಹಲವು ಪ್ರಮುಖ ನಟರು, ಸಂಬಂಧಿತ ಸಂಘ-ಸಂಸ್ಥೆಗಳು ಕೆಲವು ಕಡೆಗಳಲ್ಲಿ ದಿನಗೂಲಿ ನೌಕರರಿಗೆ ಸಹಾಯ ಮಾಡುವ ಕಾರ್ಯ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ದೊಡ್ಡ ಹೆಸರಿನ ನಟರುಗಳು ಈ ನಿಟ್ಟಿನಲ್ಲಿ ಇನ್ನೂ ಮುಂದೆ ಬಂದಿಲ್ಲ.
ಆದರೆ ಲೂಸಿಯಾ, ಯೂ ಟರ್ನ್ ಸಿನಿಮಾಗಳ ಮೂಲಕ ಖ್ಯಾತವಾಗಿರುವ ನಿರ್ದೇಶಕ ಪವನ್ ಕುಮಾರ್ ಅವರು, ಸಂಕಷ್ಟದಲ್ಲಿರುವ ಚಿತ್ರರಂಗದಲ್ಲಿ ದುಡಿಯುವ ದಿನಗೂಲಿ ನೌಕರರ ಸಹಾಯಕ್ಕೆಂದು ಕೆಲವು ಕಾರ್ಯಗಳನ್ನು ಮಾಡುತ್ತಿದ್ದು, ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

ಜನತಾ ಕರ್ಪ್ಯೂ ದಿನ ಅಭಿಯಾನ ಪ್ರಾರಂಭಿಸಿದ್ದ ಪವನ್
ಭಾನುವಾರ ಇಡೀಯ ಭಾರತವೇ ಜನತಾ ಕರ್ಪ್ಯೂ ಆಚರಿಸಿದ ದಿವಸ ಪವನ್ ಕುಮಾರ್ ಅವರು, ಆನ್ಲೈನ್ ಮೂಲಕವೇ ಹಣ ಸಂಗ್ರಹಿಸಿ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ಸಹಾಯ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು.

48 ಲಕ್ಷದಲ್ಲಿ ಸಂಗ್ರವಾಗಿರುವ ಹಣ ಇಷ್ಟು
ಖಾತೆ ಸಂಖ್ಯೆಯೊಂದನ್ನು ನೀಡಿದ್ದ ಪವನ್ ಕುಮಾರ್ ಹಣ ಸಹಾಯಕ್ಕೆ ಮನವಿ ಮಾಡಿದ್ದರು. ಅವರ ಮನವಿಯಂತೆ 48 ಗಂಟೆಗಳಲ್ಲಿ 3.75 ಲಕ್ಷ ರೂಪಾಯಿ ಹಣ ಒಟ್ಟಾಗಿದೆ. ಇದನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲಾಗುವುದು. ಹಣ ಸಂಗ್ರಹಣೆ ಇನ್ನೂ ನಡೆಯುತ್ತಿದ್ದು, ಇನ್ನಷ್ಟು ಮಂದಿ ಹಣ ಕಳುಹಿಸುವ ಸಾಧ್ಯತೆ ಇದೆ. ಒಟ್ಟಾಗಿರುವ ಹಣದ ಲೆಕ್ಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಪವನ್.

ಹಲವು ನಟರು ಪವನ್ ಗೆ ಜೊತಾಯಾಗಿದ್ದಾರೆ
ಪವನ್ ಅವರು ಪ್ರಾರಂಭಿಸಿದ್ದ ಈ ಕಾರ್ಯಕ್ಕೆ ಧನಂಜಯ, ದಿಗಂತ್, ಶ್ರದ್ಧಾ ಶ್ರೀನಾಥ್, ಬಿ.ಸಿ.ಸುರೇಶ್, ಚೇತನ್, ಶರ್ಮಿಳಾ ಮಾಂಡ್ರೆ, ಪ್ರಕಾಶ್ ರಾಜ್ ಅವರೂ ಸಹ ಹಣ ಕಳುಹಿಸಿದ್ದಾರೆ ಎಂದು ಪವನ್ ಹೇಳಿದ್ದಾರೆ.

ಬೆಳಿಗ್ಗೆಯಿಂದ ಸಂಜೆ ವರೆಗೆ ಲೈವ್ ಮಾಡಿದ್ದ ಪವನ್
ಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಲೈವ್ ಮಾಡಿದ್ದ ಪವನ್ ಕುಮಾರ್, ಹಲವು ನಟರ ಸಂದರ್ಶನ, ಸ್ಕ್ರಿಪ್ಟ್ ರೀಡಿಂಗ್ ರೀತಿಯ ಹಲವು ಕಾರ್ಯಗಳನ್ನು ಮಾಡಿದ್ದರು. ಅದರೊಟ್ಟಿಗೆ ಹಣ ಸಂಗ್ರಹವನ್ನೂ ಮಾಡಿದರು.


Click it and Unblock the Notifications











