ಎಚ್.ಎಸ್.ವಿ ಅವರ 'ಹಸಿರು ರಿಬ್ಬನ್' ಚಿತ್ರಕ್ಕೆ ಸಿಕ್ತು ಅಧಿಕೃತ ಚಾಲನೆ
'ಮೇಷ್ಟ್ರು' ಎಂದೇ ಎಲ್ಲರಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ಕನ್ನಡದ ಪ್ರಖ್ಯಾತ ಕವಿ, ಲೇಖಕರಾಗಿರುವ ಎಚ್.ಎಸ್.ವೆಂಕಟೇಶ್ ಮೂರ್ತಿ ಇದೀಗ 'ಹಸಿರು ರಿಬ್ಬನ್' ಎಂಬ ಚಿತ್ರಕ್ಕೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು' ಸೇರಿದಂತೆ ಅನೇಕ ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಎಚ್.ಎಸ್.ವಿ ಸದ್ಯ 'ಹಸಿರು ರಿಬ್ಬನ್' ಸಿನಿಮಾದ ಮೂಲಕ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.
ಚೊಚ್ಚಲ ಬಾರಿಗೆ ಎಚ್.ಎಸ್.ವಿ ಆಕ್ಷನ್ ಕಟ್ ಹೇಳಲಿರುವ 'ಹಸಿರು ರಿಬ್ಬನ್' ಚಿತ್ರಕ್ಕೆ ಆಗಸ್ಟ್ 6 ರಂದು ಅಧಿಕೃತ ಚಾಲನೆ ದೊರೆಯಿತು. ಮುಂದೆ ಓದಿರಿ...

ಅದ್ಧೂರಿಯಾಗಿ ನಡೆದ ಮುಹೂರ್ತ ಸಮಾರಂಭ
ಎಚ್.ಎಸ್.ವಿ ಅವರ 'ಹಸಿರು ರಿಬ್ಬನ್' ಚಿತ್ರದ ಮುಹೂರ್ತ ಸಮಾರಂಭ ಆಗಸ್ಟ್ 6 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಮುಖ್ಯ ಅತಿಥಿಗಳು...
ನಿರ್ದೇಶಕ ಯೋಗರಾಜ್ ಭಟ್, ನಟ ಶ್ರೀನಾಥ್, ನಾದಬ್ರಹ್ಮ ಹಂಸಲೇಖ, ಪತ್ರಕರ್ತ ಜೋಗಿ, ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಚಿತ್ರರಂಗದ ಗಣ್ಯರು 'ಹಸಿರು ರಿಬ್ಬನ್' ಮುಹೂರ್ತ ಸಮಾರಂಭಕ್ಕೆ ಸಾಕ್ಷಿ ಆದರು.

ಮುಹೂರ್ತ ಸಮಾರಂಭಕ್ಕೆ ಚಾಲನೆ
ಅತಿಥಿಗಳಾದ ಹಂಸಲೇಖ, ಶ್ರೀನಾಥ್, ಯೋಗರಾಜ್ ಭಟ್ ದೀಪ ಬೆಳಗಿಸುವ ಮೂಲಕ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದರು.

ರಾಜೇಂದ್ರ ಸಿಂಗ್ ಬಾಬು ಕ್ಲಾಪ್
ಮುಹೂರ್ತದ ಶಾಟ್ ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕ್ಲಾಪ್ ಮಾಡುವ ಮೂಲಕ ಎಚ್.ಎಸ್.ವೆಂಕಟೇಶ್ ಮೂರ್ತಿ ರವರ ಕನಸಿನ ಕೂಸಿಗೆ ಅಧಿಕೃತ ಚಾಲನೆ ಲಭಿಸಿತು.

ಗಿರಿಜಾ ಲೋಕೇಶ್, ನಿಖಿಲ್ ಮಂಜೂ
'ಹಸಿರು ರಿಬ್ಬನ್' ಚಿತ್ರದ ಮುಖ್ಯಭೂಮಿಕೆಯಲ್ಲಿ ಗಿರಿಜಾ ಲೋಕೇಶ್ ಹಾಗೂ ನಿಖಿಲ್ ಮಂಜೂ ಅಭಿನಯಿಸುತ್ತಿದ್ದಾರೆ.

ಪೋಸ್ಟರ್ ಬಿಡುಗಡೆ
'ಹಸಿರು ರಿಬ್ಬನ್' ಚಿತ್ರದ ಪೋಸ್ಟರ್ ನೂ ಇದೇ ವೇಳೆ ಬಿಡುಗಡೆ ಮಾಡಲಾಯಿತು

ಎಚ್.ಎಸ್.ವಿ ಏನಂತಾರೆ.?
ಇದೇ ವೇಳೆ, ''ನನಗೆ ಅತ್ಯಂತ ಆಪ್ತರಾಗಿರುವ ನಿಖಿಲ್ ಮಂಜೂ 'ಹಸಿರು ರಿಬ್ಬನ್' ಚಿತ್ರದಲ್ಲಿ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ನಿರ್ದೇಶಕರಾಗಿರುವ ನಿಖಿಲ್ ಮಂಜೂ ರವರನ್ನ ನಿರ್ದೇಶಿಸುವ ಕೆಲಸ ನನಗೆ ಬಂದಿದೆ. ಇದು ಬಹಳ ಬಿಕ್ಕಟ್ಟಿನ ಕೆಲಸ. ಈ ಕೆಲಸದಲ್ಲಿ ನನಗೆ ಯಶಸ್ಸು ಸಿಗುತ್ತದೆ ಎಂದು ಭಾವಿಸುತ್ತೇನೆ'' ಎಂದು ಎಚ್.ಎಸ್.ವೆಂಕಟೇಶ್ ಮೂರ್ತಿ ಹೇಳಿದರು.

'ಹಸಿರು ರಿಬ್ಬನ್' ಕಥೆ ಏನು.?
ಎಚ್.ಎಸ್.ವೆಂಕಟೇಶ್ ಮೂರ್ತಿ ಬರೆದಿರುವ 'ಅನಾತ್ಮಕಥನ' ಪುಸ್ತಕದಲ್ಲಿನ ಒಂದು ಅಧ್ಯಾಯವನ್ನು ಇಟ್ಟುಕೊಂಡು 'ಹಸಿರು ರಿಬ್ಬನ್' ಸಿನಿಮಾ ಮಾಡಲಾಗುತ್ತಿದೆ. ಅಮಾಯಕರನ್ನು ಸ್ವಾರ್ಥಿಗಳು ಹೇಗೆ ಮೋಸ ಮಾಡುತ್ತಾರೆ ಎಂಬುದೇ ಚಿತ್ರದ ಕಥಾಹಂದರ.


Click it and Unblock the Notifications











