Rekha Vedavyas: "ಆರೋಗ್ಯ ಸಮಸ್ಯೆಯಿಂದ ಹೀಗಾಯ್ತು.. ದೇವರ ಮೇಲೆ ಭಾರ ಹಾಕಿದ್ದೀನಿ": ರೇಖಾ
ಇತ್ತೀಚೆಗೆಷ್ಟೆ 'ಹುಚ್ಚ' ಸಿನಿಮಾ ಖ್ಯಾತಿಯ ನಟಿ ರೇಖಾ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ತೂಕ ಕಳೆದುಕೊಂಡು ಬಹಳ ಸೊರಗಿ ಹೋಗಿದ್ದರು. ಆಕೆಯನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದರು. ಕನ್ನಡದ ನಟಿಗೆ ಏನಾಯ್ತು? ಎಂದು ಆತಂಕ ವ್ಯಕ್ತಪಡಿಸಿದ್ದರು.
ಗುರುತು ಹಿಡಿಯಲಾಗದಂತ ರೇಖಾ ಲುಕ್ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆಕೆಗೆ ಏನಾಯ್ತು ಎಂದು ಭಾರೀ ಚರ್ಚೆ ನಡೆದಿತ್ತು. ತೆಲುಗಿನ 'ಶ್ರೀದೇವಿ ಡ್ರಾಮಾ ಕಂಪನಿ' ಕಾಮಿಡಿ ಶೋಗೆ ಅತಿಥಿಯಾಗಿ ರೇಖಾ ಬಂದಿದ್ದರು. ಆ ಶೋನಲ್ಲಿ ರೇಖಾರನ್ನು ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಆ ಕಾರ್ಯಕ್ರಮ ಪ್ರಸಾರವಾಗಿದ್ದು ರೇಖಾ ತಮ್ಮ ಲುಕ್ ಬದಲಾಗಲು ಕಾರಣ ಏನು ಎನ್ನುವುದನ್ನು ವಿವರಿಸಿದ್ದಾರೆ.

"ನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಅಚಾನಕ್ ಆಗಿ ಆಯಿತು. ಒಂದು ನಾನು ಹೇಳಲು ಇಷ್ಟಪಡುತ್ತೀನಿ. ಸಾಕಷ್ಟು ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದು ಸಣ್ಣ ತಲೆನೋವು ಇರಬಹುದು, ಅಥವಾ ದೊಡ್ಡ ಸಮಸ್ಯೆಯೇ ಆಗಿರಬಹುದು. ಯಾವುದಕ್ಕೂ ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು"
"ಒತ್ತಡದಿಂದ ಆರೋಗ್ಯ ಸಮಸ್ಯೆ ಗಂಭೀರವಾಗುತ್ತದೆ. ಎಲ್ಲಕ್ಕಿಂತ ದೇವರಲ್ಲಿ ಹೆಚ್ಚಿನ ನಂಬಿಕೆ ಇಡಬೇಕು. ಯಾವುದೇ ದೇವರು ಆಗಿರಲಿ. ಅದಕ್ಕಿಂತ ಹೆಚ್ಚು ಜೀವನದಲ್ಲಿ ಏನು ಇಲ್ಲ. ನಿಮ್ಮ ಮೆಡಿಸಿನ್ ಕೆಲಸ ಮಾಡಿದ್ದಿದ್ದರೂ ನಿಮ್ಮ ನಂಬಿಕೆ ಕೆಲಸ ಮಾಡುತ್ತದೆ. ನನ್ನನ್ನು ಚೆನ್ನಾಗಿ ನಗಿಸಿ, ನಾನು ಬೇಗ ಚೇತರಿಸಿಕೊಳ್ತೀನಿ" ಎಂದು ರೇಖಾ ಹೇಳಿದ್ದಾರೆ.
ರೇಖಾ ವೇದವ್ಯಾಸ್ ಮಾತುಗಳನ್ನು ಕೇಳಿದ ಅಭಿಮಾನಿಗಳು ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಂದಹಾಗೆ ಕಳೆದೊಂದು ದಶಕದಲ್ಲಿ ಆಕೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರೇಖಾ ಕನ್ನಡದ 'ಹುಚ್ಚ' ಚಿತ್ರದಲ್ಲಿ ಮೊದಲಿಗೆ ಆಕೆ ಬಣ್ಣ ಹಚ್ಚಿದ್ದರು. ಅಲ್ಲಿಂದ ಮುಂದೆ ಕನ್ನಡ ಸಿನಿರಸಿಕರಿಗೆ 'ಹುಚ್ಚ' ನಟಿ ರೇಖಾ ಅಂತ್ಲೇ ಪರಿಚಿತರಾದರು.

ಕನ್ನಡ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿ ರೇಖಾ ಮಿಂಚಿದರು. ತೆಲುಗಿನಲ್ಲೂ ಆಕೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ ಚೆಲುವೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. 'ಚಿತ್ರ', 'ತುಂಟಾಟ', 'ಮೋನಲಿಸಾ', 'ಚೆಲ್ಲಾಟ' ಹೀಗೆ ಹಿಟ್ ಸಿನಿಮಾಗಳಲ್ಲಿ ಮಿಂಚಿದರು. ಬಳಿಕ ತೆಲುಗು, ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು.
ಗಣೇಶ್ ಜೋಡಿಯಾಗಿ 'ಹುಡುಗಾಟ' ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದ ರೇಖಾ ಮತ್ತೊಮ್ಮೆ ಕಮಾಲ್ ಮಾಡಿದರು. ಕೆಲ ವರ್ಷಗಳ ಹಿಂದೆ ದಿಢೀರನೆ ತೂಕ ಹೆಚ್ಚಿಸಿಕೊಂಡಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು. 2014ರಲ್ಲಿ ಕೊನೆಯದಾಗಿ 'ತುಳಸಿ' ಎನ್ನುವ ಕನ್ನಡ ಚಿತ್ರದಲ್ಲಿ ಆಕೆ ಬಣ್ಣ ಹಚ್ಚಿದ್ದರು. ಆ ಬಳಿಕ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಇದೀಗ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
'ಆನಂದಂ' ಎನ್ನುವ ತೆಲುಗು ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದರು. ಬಳಿಕ 'ಜಾಬಿಲಿ', 'ದೊಂಗೊಡು', 'ಅನಗನಗ ಒಕ ಕುರ್ರಾಡು', 'ಜಾನಕಿ ವೆಡ್ಸ್ ಶ್ರೀರಾಮ್' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. ತಮಿಳಿನಲ್ಲಿ 'ಪುನ್ನಗೇ ಪೂವೆ', 'ತ್ರೀ ರೋಜಸ್', 'ನೆಂಜಿರಿಕ್ಕುಂ ವಾರೈ' ಸಿನಿಮಾಗಳಲ್ಲಿ ಕಾಣಿಸಿಕೊಂಡರು. 'ಮುದ್ದ' ಎನ್ನುವ ಸಿನಿಮಾದಲ್ಲಿ ನಟಿಸಿ ಬಾಲಿವುಡ್ನಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.
ತಮಿಳಿನ 'ಪಡಂ ಪೇಸುಂ' ಆಕೆ ರೇಖಾ ನಟಿಸಿದ ಕೊನೆಯ ಸಿನಿಮಾ. ರೇಖಾ ಬೇಗ ಚೇತರಿಸಿಕೊಳ್ಳಲಿ ಮತ್ತೆ ಸಿನಿಮಾಗಳಲ್ಲಿ ನಟಿಸಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications










