'ಪರಮಾತ್ಮ'ನ ಕರ್ಕೊಂಡು ಬರ್ತಿದ್ದಾನೆ ಗಣೇಶ: ಅಪ್ಪು ಗಣೇಶ ಮೂರ್ತಿಗಳಿಗೆ ಸಖತ್ ಡಿಮ್ಯಾಂಡ್!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ದೈಹಿಕವಾಗಿ ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಆದರೆ ತಮ್ಮ ಸಿನಿಮಾಗಳು ಸಮಾಜ ಸೇವೆ ಹಾಗೂ ಮಾನವೀಯ ಗುಣಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅಭಿಮಾನಿಗಳು ಮನೆ ಮನಗಳಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರ ಇಟ್ಟು ಪೂಜೆ ಮಾಡುತ್ತಿದ್ದಾರೆ. ಈ ಬಾರಿ ವಿಘ್ನ ನಿವಾರಕ ಗಣೇಶ, ಪುನೀತ್ ರಾಜ್ಕುಮಾರ್ನ ಕರ್ಕೊಂಡು ಬರ್ತಿದ್ದಾನೆ.
ದೇಶದೆಲ್ಲೆಡೆ ಗಣೇಶ ಹಬ್ಬದ ತಯಾರಿ ಶುರುವಾಗಿದೆ. ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಹಬ್ಬ ಈ ಬಾರಿ ನಿಧಾನವಾಗಿ ರಂಗೇರುತ್ತಿದೆ. ಭಕ್ತರು ಗಣೇಶ ಹಬ್ಬಕ್ಕೆ ತಯಾರಿ ಶುರು ಮಾಡಿಕೊಳ್ಳುತ್ತಿದ್ದು, ಬೀದಿ ಬೀದಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆಸಲು ಸಿದ್ಧತೆ ನಡೆಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮನೆಗಳಲ್ಲಿ ಬೀದಿಗಳಲ್ಲಿ ಭಿನ್ನ ವಿಭಿನ್ನ ಗಣೇಶ ಮೂರ್ತಿಗಳು ಪ್ರತಿಷ್ಟಾಪನೆಗೊಳ್ಳಲಿದೆ. ಈ ಬಾರಿ ಗಣಪನ ಜೊತೆ 'ಪರಮಾತ್ಮ' ಪುನೀತ್ ರಾಜ್ ಕುಮಾರ್ ಅವರನ್ನು ಪೂಜಿಸಲು ಅಭಿಮಾನಿಗಳು ತೀರ್ಮಾನಿಸಿದ್ದಾರೆ. ಈಗಾಗಲೇ ಗಣೇಶ ಮೂರ್ತಿಗಳ ಅಂಗಡಿಗಳಲ್ಲಿ ಗಣೇಶನ ಜೊತೆಗಿರುವ ಪುನೀತ್ ರಾಜ್ಕುಮಾರ್ ಮೂರ್ತಿಗಳಿಗೆ ಡಿಮ್ಯಾಂಡ್ ಶುರುವಾಗಿದೆ.
ಹಳ್ಳಿ, ನಗರ ಅನ್ನದೇ ಎಲ್ಲಾ ಕಡೆ ಗಣೇಶ ಮೂರ್ತಿಯ ಅಂಗಡಿಗಳಲ್ಲಿ ತರಹೇವಾರಿ ಮೂರ್ತಿಗಳು ಸಿದ್ಧವಾಗಿದೆ. ಈಗಾಗಲೇ ಅಭಿಮಾನಿಗಳು ಗಣೇಶನೊಟ್ಟಿಗಿರುವ ಅಪ್ಪು ಮೂರ್ತಿಗಳನ್ನು ಬುಕ್ ಮಾಡುತ್ತಿದ್ದಾರೆ. ಕಳೆದೆರಡು ತಿಂಗಳಿಂದ ಗಣೇಶ ಮೂರ್ತಿ ತಯಾರಕರು ವಿಶೇಷ ಮೂರ್ತಿಗಳಿಗೆ ರೂಪ ಕೊಡುತ್ತಿದ್ದಾರೆ. ಅವರು ಊಹಿಸಿದ್ದಕ್ಕಿಂತ ಅಪ್ಪು ಗಣೇಶನಿಗೆ ಹೆಚ್ಚಿನ ಬೇಡಿಕೆ ಶುರುವಾಗಿದೆ. ಹಾಗಾಗಿ ಇನ್ನು 10 ದಿನಗಳಲ್ಲಿ ಇಂತಹ ಮತ್ತಷ್ಟು ಮೂರ್ತಿಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.

ಜೊತೆಗಿರದ ಜೀವ ಎಂದೆಂದೂ ಜೀವಂತ
ಗಣೇಶ ಅಂದಾಕ್ಷಣ ಅಬಾಲವೃದ್ಧರಾಗಿ ಎಲ್ಲರಿಗೂ ಅದೇನೋ ಪ್ರೀತಿ, ಮನಸ್ಸಿನಲ್ಲಿ ಅದ್ಭುತ ಭಾವ ಮೂಡುತ್ತದೆ. ಗಣಪನ ಡೊಳ್ಳು ಹೊಟ್ಟೆ, ಆನೆ ತಲೆಯ ಮುಗ್ಧ ರೂಪವೇ ಆಕರ್ಷಣೀಯ. ಯಾವುದೇ ಕಾರ್ಯಕ್ರಮವಾದರೂ ಗಜಾನನನಿಗೆ ಮೊದಲ ಪೂಜೆ. ಈ ವರ್ಷ ಚತುರ್ಥಿಯಂದು ಗಣೇಶನ ಜೊತೆ ಪುನೀತ್ ರಾಜ್ಕುಮಾರ್ನ ಪೂಜೆಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಪ್ಪು ಅಗಲಿಕೆಯ ನಂತರ ರಾಜ್ಯಾದ್ಯಂತ ಫೋಟೊ ಫ್ರೇಮ್ ವರ್ಕ್ಸ್ ಅಂಗಡಿಗಳಲ್ಲಿ ಪುನೀತ್ ರಾಜ್ಕುಮಾರ ಭಾವಚಿತ್ರಗಳು ರಾರಾಜಿಸುತ್ತಿದೆ. ಸಾವಿರಾರು ಅಭಿಮಾನಿಗಳು ಅಪ್ಪು ಭಾವಚಿತ್ರವನ್ನು ಕೊಂಡುಕೊಂಡು ಮನೆಯಲ್ಲಿ ಪೂಜಿಸುತ್ತಿದ್ದಾರೆ. ಇದೀಗ ಗಣೇಶನ ಜೊತೆ ಅಪ್ಪುಗೆ ನಮಿಸಲು ತಯಾರಿ ನಡೆಸಿದ್ದಾರೆ.

ತರಹೇವಾರಿ ಮೂರ್ತಿಗಳು ಸಿದ್ಧ
ಗಣೇಶನ ಪಕ್ಕ ಕುಳಿದ ಅಪ್ಪು, ಗಣೇಶನ ಆಶೀರ್ವಾದ ಪಡೆಯುತ್ತಿರುವ ಅಪ್ಪು, ಅಪ್ಪು ಕೈಯಲ್ಲಿ ಗಣೇಶ ಮೂರ್ತಿ, ಅಪ್ಪು ಗಲ್ಲ ಹಿಡಿದ ಗಣೇಶ, ಅಪ್ಪುಗೆ ಮೋದಕ ತಿನ್ನಿಸುತ್ತಿರುವ ಗಣೇಶ ಹೀಗೆ ಮೂರ್ತಿ ತಯಾರಕರು ತಮ್ಮದೇ ಕಲ್ಪನೆಯಲ್ಲಿ ನಾನಾ ಬಗೆಯಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಒಂದೂವರೆ ಅಡಿಯಿಂದ ಐದಾರು ಅಡಿಗಳಷ್ಟು ಎತ್ತರದ ಇಂತಹ ಅಪ್ಪು ಗಣೇಶ ಮೂರ್ತಿಗಳು ಅಂಗಡಿಗಳಲ್ಲಿ ಲಭ್ಯವಿದೆ. ಪುಟ್ಟ ಮಕ್ಕಳು ಅಂಗಡಿಗಳಿಗೆ ಮುಗಿಬಿದ್ದು ಅಪ್ಪು ಗಣೇಶ ಮೂರ್ತಿಗಳನ್ನು ನೋಡಿ ಖುಷಿಪಡುತ್ತಿದ್ದಾರೆ.

ಅಪ್ಪು ಗಣೇಶ ಹೈಲೆಟ್
ಈ ಹಿಂದೆ ಕೂಡ ಸಾಕಷ್ಟು ಥೀಮ್ಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅಭಿಮಾನಿಗಳು ಪೂಜಿಸಿದ್ದಾರೆ. 'ಕೆಜಿಎಫ್' ಹಿಟ್ ಆದಮೇಲೆ ರಾಕಿ ಭಾಯ್ ಗಣಪತಿ ಫೇಮಸ್ ಆಗಿತ್ತು. ಈ ಬಾರಿ ರಾಜ್ಯದ ಎಲ್ಲಾ ಗಣಪತಿ ಮೂರ್ತಿ ತಯಾರಿಸುವ ಅಂಗಡಿಗಳಲ್ಲಿ ಅಪ್ಪು ಗಣೇಶ ವಿಶೇಷ ಎಂದು ಮೂರ್ತಿ ತಯಾರಕರು ಹೇಳುತ್ತಿದ್ದಾರೆ. ಕೆಲವರು ನಮಗೆ ಇದೇ ರೀತಿಯ ಅಪ್ಪು ಗಣೇಶ ಬೇಕು ಎಂದು ಆರ್ಡರ್ ಕೊಟ್ಟಿ ಮಾಡಿಸುತ್ತಿದ್ದಾರೆ. ಚಿತ್ರರಂಗಕ್ಕೆ ಹಾಗೂ ಸಮಾಜಕ್ಕೆ ಅಪ್ಪು ಕೊಡುಗೆ ಅಪಾರ. ಹಾಗಾಗಿ ಅವರಿಗೆ ಗೌರವ ಸಲ್ಲಿಸಲು ಈ ರೀತಿ ಅಪ್ಪು ಗಣೇಶ ಪ್ರತಿಷ್ಠಾಪಿಸಿ ಪೂಜಿಸಲು ಮುಂದಾಗಿರುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ.

'ಲಕ್ಕಿಮ್ಯಾನ್' ಚಿತ್ರದಲ್ಲಿ ದೇವರಾದ ಅಪ್ಪು
'ಗಂಧದ ಗುಡಿ' ಸಾಕ್ಷ್ಯ ಚಿತ್ರ ಹೊತುಪಡಿಸಿದರೆ ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಸಿನಿಮಾ 'ಲಕ್ಕಿಮ್ಯಾನ್'. ವಿಪರ್ಯಾಸ ಅಂದರೆ ಈ ಚಿತ್ರದಲ್ಲಿ ಅಪ್ಪು ದೇವರಾಗಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾ ಬಿಡುಗಡೆಯ ಹೊತ್ತಿಗೆ ಅವರೇ ದೇವರಾಗಿಬಿಟ್ಟಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಿ ಗೆಲ್ಲಿಸಲು ತೀರ್ಮಾನಿಸಿದ್ದಾರೆ.


Click it and Unblock the Notifications











