ದರ್ಶನ್, ಇಂದ್ರಜಿತ್ ಲಂಕೇಶ್ ಮೇಲೆ ಬಹಿಷ್ಕಾರ ಹಾಕಿ: ವಾಣಿಜ್ಯ ಮಂಡಳಿಗೆ ಪತ್ರ
ನಟ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ಮೇಲೆ ಐದು ವರ್ಷ ಬಹಿಷ್ಕಾರ ಹೇರಿ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದೆ.
ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ರೀತಿಯಲ್ಲಿ ಮಾಧ್ಯಮಗಳ ಮುಂದೆ ಅಸಭ್ಯವಾಗಿ ಮಾತನಾಡುತ್ತಿರುವ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಬ್ಬರನ್ನೂ ಚಿತ್ರರಂಗದ ಚಟುವಟಿಕೆಗಳಿಂದ ಐದು ವರ್ಷ ಬಹಿಷ್ಕಾರ ಮಾಡಿ, ಚಿತ್ರರಂಗದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ಹೇರಿ ಶಿಸ್ತು ಕ್ರಮ ಕೈಗೊಳ್ಳಿ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ವತಿಯಿಂದ ಬರೆದಿರುವ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಕಳೆದ ಒಂದು ವಾರದಿಂದಲೂ ನಟ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್, ಮಾಧ್ಯಮಗಳಲ್ಲಿ ಪರಸ್ಪರ ಅಸಭ್ಯವಾಗಿ ಮಾತನಾಡುತ್ತಾ ರೌಡಿಗಳಂತೆ ವರ್ತಿಸುತ್ತಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಯುವ ಸಮುದಾಯವನ್ನು ದಿಕ್ಕು ತಪ್ಪಿಸಿ ಅವರನ್ನು ಕೊಲೆಗಡುಕರನ್ನಾಗಲು ಪ್ರೇರಣೆ ನೀಡುವಂಥಹಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಅಖಂಡ ಮೋಹನ್ ಪತ್ರದಲ್ಲಿ ಹೇಳಿದ್ದಾರೆ.

ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್, ಉದಯ್ ಕುಮಾರ್ ಇಂಥಹಾ ಮಹನೀಯ ನಟರು ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ, ವಿದೇಶ ಮಟ್ಟದಲ್ಲಿ ಗೌರವ ತಂದುಕೊಟ್ಟಿದ್ದರು. ಆದರೆ ಇರ್ವರು ನಟರುಗಳು ನಮ್ಮ ಚಿತ್ರರಂಗದ ಗೌರವನ್ನು ಹಾಳು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ನಟರ ಮಾತುಗಳು ಯುವಕರ ದಿಕ್ಕು ಪತ್ತಿಸುವಂತಿದೆ. ಇವರನ್ನೇ ಅನುಕರಿಸುವ ಯುವ ಸಮೂಹ ಇವರಂತೆ ವರ್ತಿಸಲು ಪ್ರಾರಂಭಿಸಿದರೆ ನಾಡಿನ ಗತಿ ಏನು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Recommended Video
''ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳ ಬಗ್ಗೆ ಕೆಟ್ಟದಾಗಿ ಮಾತಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿರುವ ಈ ನಿಜ ಜೀವನದಲ್ಲಿ 'ಖಳನಾಯಕ'ರಂತೆ ವರ್ತಿಸುತ್ತಿರುವ ಈ ಇಬ್ಬರನ್ನೂ ಐದು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಿಟ್ಟು, ಸಿನಿಮಾರಂಗದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಬಿಡಬಾರದು. ಒಂದುವೇಳೆ ಇನ್ನು ಮೂರು ದಿನಗಳ ಒಳಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಸ್ಥೆಯ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಲಾಗಿದೆ.


Click it and Unblock the Notifications











