ಶೋಭಿತಾ ಶಿವಣ್ಣ ನಿಧನಕ್ಕೆ ಕಾರಣವೇನು ? ಪೊಲೀಸರಿಗೆ ಸಿಕ್ಕ 'ಡೆತ್ ನೋಟ್'ನಲ್ಲಿ ಏನಿದೆ ?
ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ಮಾನಸಿಕ ಖಿನ್ನತೆಗೆ ಮೊದಲ ಸ್ಥಾನ ಇದೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ.
ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಬದುಕೇ ಬೇಡ ಸತ್ತರೆ ಚೆಂದ ಎಂದುಕೊಂಡು ಆತುರದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಶೋಭಿತಾ ಶಿವಣ್ಣ ಕೂಡ ಹೀಗೆ ದುಡುಕಿನ ನಿರ್ಧಾರವನ್ನು ತೆಗೆದುಕೊಂಡರಾ ಎನ್ನುವ ಅನುಮಾನ ಈಗ ಕಿರುತೆರೆಯ ಉದ್ಯಮಕ್ಕೆ ಕಾಡುತ್ತಿದೆ. ಇದಕ್ಕೆ ಕಾರಣ ಸಿಕ್ಕ ಡೆತ್ ನೋಟ್.

ಹೌದು, ಶೋಭಿತಾ ಶಿವಣ್ಣ ಸಾವಿನ ತನಿಖೆಯನ್ನು ಮಾಡುತ್ತಿರುವ ಹೈದರಾಬಾದ್ನ ಗಚ್ಚಿಬೌಳಿಯ ಪೊಲೀಸರಿಗೆ ಶೋಭಿತಾ ಶಿವಣ್ಣ ಅವರ ರೂಮ್ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಗಂಡ ಮತ್ತು ಹೆಂಡತಿ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಲಿಲ್ಲ ಎನ್ನುವುದು ಕೂಡ ಕಂಡು ಬಂದಿದೆ. ಶೋಭಿತಾ ಶಿವಣ್ಣ ಸಾವಿಗೆ ಖಿನ್ನತೆ ಕಾರಣ ಇರಬಹುದಾ ಎನ್ನುವುದರ ಕುರಿತು ಕೂಡ ತನಿಖೆ ನಡೆಯುತ್ತಿದೆ.
ಇನ್ನು ಶೋಭಿತಾ ಕೋಣೆಯಲ್ಲಿ ಪತ್ತೆಯಾದ ಸೂಸೈಡ್ ಲೆಟರ್ ನಲ್ಲಿ 'ಇಫ್ ಯು ವಾಂಟ್ ಟು ಕಮಿಟ್ ಸೂಸೈಡ್, ಯು ಕ್ಯಾನ್ ಡು ಇಟ್' { ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು} ಎಂದು ಬರೆಯಲಾಗಿದೆ. ಈ ಹಿನ್ನೆಲೆ ತನಿಖೆಯನ್ನು ಮಾಡುತ್ತಿರುವ ಪೊಲೀಸರು ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ಕಾರಣಕ್ಕಾಗಿಯೇ ಈ ಸಾಲುಗಳನ್ನು ಬರೆದಿರಬಹುದು ಎನ್ನುವ ಸಂಶಯ ಪೊಲೀಸರನ್ನು ಕಾಡುತ್ತಿದೆ. ಮದುವೆಯ ನಂತರ ಶೋಭಿತಾ ಅವಕಾಶಗಳಿಂದ ವಂಚಿತರಾಗಿದ್ದರಾ..? ಈ ಕಾರಣಕ್ಕೆ ಖಿನ್ನತೆಗೆ ಜಾರಿದ್ದರಾ..? ಎಂದು ಪೊಲೀಸರಿಂದ ಸದ್ಯ ತನಿಖೆ ನಡೆಯುತ್ತಿದೆ.
ಇನ್ನುಳಿದಂತೆ ಕಳೆದ ವರ್ಷ ಮೇ 22ರಂದು ಮದುವೆಯಾಗಿದ್ದ ಶೋಭಿತಾ ಆ ನಂತರ ಕಿರುತೆರೆಯಿಂದ ಅಂತರವನ್ನು ಕಾಪಾಡಿಕೊಂಡಿದ್ದರು. ಮೂಲತಃ ಸಕಲೇಶಪುರದವರಾದ ಶೋಭಿತಾ ಶಿವಣ್ಣ ಮೊದಲಿನಿಂದಲೂ ನಟನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು.ಆರಂಭದಲ್ಲಿ ರಾಜ್ ಮ್ಯೂಸಿಕ್ ಚಾನೆಲ್ ನಲ್ಲಿ VJ ಆಗಿದ್ದ ಶೋಭಿತಾ, ಆ ನಂತರ ಕಿರುತೆರೆಯಲ್ಲಿ ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಂಡು ಮಿಂಚಿದ್ದರು. ತಾನೊಬ್ಬ ಒಳ್ಳೆಯ ಕಲಾವಿದೆ ಆಗಬೇಕು ಎಂದು ಹಗಲಿರುಳು ಎನ್ನದೆ ಶ್ರಮವಹಿಸಿ, ಕೆಲಸ ಮಾಡಿ ಇದೀಗ ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಕೂಡ ಶೋಭಿತಾ ಮೂಡಿಸಿದ್ದರು. ಕನ್ನಡದ ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದ ಶೋಭಿತಾ ನಿನ್ನಿಂದಲೇ ಧಾರಾವಾಹಿಯಲ್ಲಿ ಕೂಡ ಆಕ್ಟ್ ಮಾಡಿದ್ದರು. ಇತರ ಭಾಷೆಯ ಧಾರಾವಾಹಿಗಳಲ್ಲಿಯೂ ಕೂಡ ನಟಿಸಿದ್ದರು.
ಇನ್ನು ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿ ಕೂಡ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡಿದ್ದ ಶೋಭಿತಾ ಅಟೆಂಪ್ಟ್ ಟು ಮರ್ಡರ್ ಹಾಗೂ ಜಾಕ್ಪಾಟ್ ಸಿನಿಮಾಗಳಲ್ಲಿ ನಟಿಸಿದ್ದರು. ಮಾತ್ರವಲ್ಲದೇ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದು ಗೌಡ ಜೊತೆ ಶತಭಿಷೆ ಚಿತ್ರದಲ್ಲೂ ನಟಿಸಿದ್ದರು. ಇದಲ್ಲದೇ ಶೋಭಿತಾ ''ಫಸ್ಟ್ ಡೇ ಫಸ್ಟ್ ಷೋ" ಸಿನಿಮಾಗೋಸ್ಕರ ಕೂಡ ಬಣ್ಣ ಹಚ್ಚಿದ್ದರು. ತೀರಾ ಇತ್ತೀಚೆಗಷ್ಟೇ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯವನ್ನು ಕೋರಿ ಅತೀ ಶೀಘ್ರದಲ್ಲಿ 'ಫಸ್ಟ್ ಡೇ, ಫಸ್ಟ್ ಷೋ' ನಿಮ್ಮ ಮುಂದೆ. ಕನ್ನಡ ಚಿತ್ರರಂಗದಲ್ಲೇ ಹಿಂದೆಂದೂ ನೋಡಿರದ ಮನರಂಜನೆಯ ಕಥಾ ಹಂದರ, ತಾಯಿ ಭುವನೇಶ್ವರಿ ಆಶೀರ್ವದಿಸಿ ಹಾಗು ಕೋಟ್ಯಂತರ ಕನ್ನಡಿಗರು ಹೆಮ್ಮೆಯಿಂದ ಮೆಚ್ಚಿ "ಹೌದೌದು" ಎನ್ನುವ ಚಿತ್ರರಂಗದ ಬಗೆಗಿನ ಒಂದು ಅಪ್ಪಟ ಕನ್ನಡ ಚಿತ್ರ. ಹರಸಿ ಹಂಚಿ ಆಶೀರ್ವದಿಸಿ' ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು.


Click it and Unblock the Notifications











