ಈ ಇಬ್ಬರು ನಟರೆಂದರೆ ನನಗಿಷ್ಟ, 'ಗಂಧದಗುಡಿ'ಯಿಂದಾಗಿ ನಟಿಯಾಗುವ ಅವಕಾಶ ಸಿಕ್ಕಿತು ಎಂದ ಅಮೃತಾ ಪ್ರೇಮ್

ಚಿತ್ರರಂಗಗಳಲ್ಲಿ ಖ್ಯಾತ ನಟ ಹಾಗೂ ನಟಿಯ ಪುತ್ರ - ಪುತ್ರಿಯರು, ಕುಟುಂಬಸ್ಥರು ಚಿತ್ರರಂಗ ಪ್ರವೇಶಿಸುವುದು ಕಾಮನ್. ಕನ್ನಡ ಚಿತ್ರರಂಗದಲ್ಲಿಯೂ ಈ ಟ್ರೆಂಡ್ ಈ ಹಿಂದಿನಿಂದಲೂ ಸಾಕಷ್ಟು ದೊಡ್ದ ಮಟ್ಟದಲ್ಲಿಯೇ ನಡೆಯುತ್ತಾ ಬಂದಿದೆ. ಆದರೆ ಪ್ರತಿಭೆ ಉಳ್ಳವರು ಉಳಿದುಕೊಂಡಿದ್ದಾರೆ, ಇಲ್ಲದವರು ಇಂದಿಗೂ ಸಹ ಸೈಕಲ್ ಹೊಡೆಯುತ್ತಲೇ ಇದ್ದಾರೆ. ಇನ್ನು ಈ ವರ್ಷವೂ ಸಹ ಇದೇ ರೀತಿ ಹಲವಾರು ಯುವ ನಟ, ನಟಿಯರು ಹಾಗೂ ಬಾಲ ನಟರು ತಮ್ಮ ತಂದೆ ತಾಯಿಗಳಂತೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಅವರ ಮಗಳು ರಾಧನಾ ರಾಮ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್ನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರೆ, ಈ ವರ್ಷ ಬಿಡುಗಡೆಗೊಂಡ ಗುರು ಶಿಷ್ಯರು ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಹಲವಾರು ನಟರ ಮಕ್ಕಳು ಸಿನಿಮಾ ರಂಗ ಪ್ರವೇಶಿಸಿದರು.
ಇನ್ನು ಈ ಸಾಲಿಗೆ ಇದೀಗ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಕೂಡ ಸೇರಿಕೊಂಡಿದ್ದಾರೆ. ಡಾಲಿ ಧನಂಜಯ್ ಅವರ ಚಿತ್ರ ನಿರ್ಮಾಣ ಸಂಸ್ಥೆಯಾದ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಮೂಡಿ ಬರಲಿರುವ ಮೂರನೇ ಚಿತ್ರ ಟಗರು ಪಲ್ಯಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲೇ ಚಿತ್ರವನ್ನು ಘೋಷಿಸಿದ್ದ ಚಿತ್ರತಂಡ ಈ ಹಿಂದೆ ಇಕ್ಕಟ್ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದ ನಾಗಭೂಷಣ್ ಅವರನ್ನು ನಾಯಕನನ್ನಾಗಿ ಘೋಷಿಸಿತ್ತು. ಆದರೆ ಚಿತ್ರದ ನಾಯಕಿ ಯಾರೆಂಬುದನ್ನು ಮಾತ್ರ ಬಿಟ್ಟುಕೊಡದಿದ್ದ ಚಿತ್ರತಂಡ ನಿನ್ನೆ ( ನವೆಂಬರ್ 29 ) ಅಮೃತಾ ಪ್ರೇಮ್ ಅವರನ್ನು ಪರಿಚಯಿಸಲಿದ್ದೇವೆ ಎಂದು ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ತಿಳಿಸಿತ್ತು ಹಾಗೂ ಚಿತ್ರತಂಡದ ಪತ್ರಿಕಾಗೋಷ್ಟಿ ಕೂಡ ನಡೆದಿತ್ತು. ಈ ವೇಳೆ ಮಾತನಾಡಿದ ಅಮೃತಾ ಪ್ರೇಮ್ ತಮ್ಮ ಫೇವರಿಟ್ ನಟ ಯಾರು ಹಾಗೂ ತನಗೆ ಅವಕಾಶ ಸಿಕ್ಕಿದ್ದು ಹೇಗೆ ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಯಶ್ ನನ್ನ ಫೇವರಿಟ್
ಟಗರು ಪಲ್ಯ ಚಿತ್ರದ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮೃತಾ ಪ್ರೇಮ್ "ಎಲ್ಲಾ ನಟ ಹಾಗೂ ನಟಿಯರೆಂದರೂ ನನಗಿಷ್ಟ, ಅವರ ಚಿತ್ರಗಳಲ್ಲಿ ಅವರು ನೆಕ್ಸ್ಟ್ ಲೆವೆಲ್ ಇದ್ದಾರೆ. ನನಗೆ ತುಂಬಾ ಇಷ್ಟ ಎನ್ನುವುದಾದರೆ ಯಶ್ ಸರ್" ಎಂದು ಹೇಳಿಕೆ ನೀಡಿದರು. ಸದ್ಯ ಅಮೃತಾ ಪ್ರೇಮ್ ನೀಡಿದ ಈ ಹೇಳಿಕೆ ವಿಡಿಯೊವನ್ನು ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ನಮ್ಮ ನೆಚ್ಚಿನ ನಟನ ಅಭಿಮಾನಿಯ ಚಿತ್ರ ಗೆಲ್ಲಲಿ ಎಂದು ಟಗರು ಪಲ್ಯಗೆ ವಿಶ್ ಮಾಡುತ್ತಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಅಪ್ಪು ಅಭಿಮಾನಿ, ಸಿನಿಮಾ ಅವಕಾಶ ಸಿಗಲು ಗಂಧದ ಗುಡಿ ಕಾರಣ!
ಇನ್ನೂ ಮುಂದುವರಿದು ಮಾತನಾಡಿದ ಅಮೃತಾ ಪ್ರೇಮ್ ತಾನು ಚಿಕ್ಕ ವಯಸ್ಸಿನಿಂದಲೂ ಸಹ ಪುನೀತ್ ರಾಜ್ಕುಮಾರ್ ಸರ್ ಅಭಿಮಾನಿ ಎಂದು ಹೇಳಿಕೊಂಡರು. ಅಷ್ಟೇ ಅಲ್ಲದೇ ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ತನಗೆ ಟಗರು ಪಲ್ಯ ಚಿತ್ರದಲ್ಲಿ ಅವಕಾಶ ಲಭಿಸಲು ಕಾರಣ ಎಂದು ಹೇಳಿದರು. ಹೌದು, ಗಂಧದ ಗುಡಿ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಲು ತೆರಳಿದ್ದ ಅಮೃತಾ ಪ್ರೇಮ್ ಅವರನ್ನು ನೋಡಿದ್ದ ನಿರ್ದೇಶಕ ಉಮೇಶ್ ಕೆ ಕೃಪ ಈಕೆಯನ್ನು ತನ್ನ ಟಗರು ಪಲ್ಯ ಚಿತ್ರದಲ್ಲಿ ನಾಯಕಿಯನ್ನಾಗಿ ಮಾಡಬೇಕೆಂದು ಧನಂಜಯ್ ಅವರ ಬಳಿ ಚರ್ಚಿಸಿದರಂತೆ. ಹೀಗಾಗಿ ತಾನು ಚಿತ್ರರಂಗ ಪ್ರವೇಶಿಸಲು ಪುನೀತ್ ರಾಜ್ಕುಮಾರ್ ಅವರ ಆಶೀರ್ವಾದವೇ ಕಾರಣ ಎನ್ನುತ್ತಾರೆ ಅಮೃತಾ ಪ್ರೇಮ್. ಇನ್ನು ಅಮೃತಾ ಹೇಳಿದಂತೆ ಆಕೆ ಅಪ್ಪು ಹಾಗೂ ಯಶ್ ಚಿತ್ರಗಳ ಪೋಸ್ಟರ್ಗಳನ್ನು ತಾನು ಸಂಗ್ರಹಿಸಿದ್ದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಪ್ರೇಮ್ ಮನೆಯ ಮೂವರು ಚಿತ್ರರಂಗಕ್ಕೆ
ಇನ್ನು ಅಮೃತಾ ಪ್ರೇಮ್ ಮೂಲಕ ನೆನಪಿರಲಿ ಪ್ರೇಮ್ ಮನೆಯಿಂದ ಮೂರನೇ ಸದಸ್ಯರ ಆಗಮನ ಚಿತ್ರರಂಗಕ್ಕೆ ಆಗಿದೆ. ಮೊದಲಿಗೆ ನೆನಪಿರಲಿ ಪ್ರೇಮ್, ನಂತರ 'ಗುರು ಶಿಷ್ಯರು' ಮೂಲಕ ಪ್ರೇಮ್ ಪುತ್ರ ಏಕಾಂತ್ ಪ್ರೇಮ್ ಹಾಗೂ ಇದೀಗ 'ಟಗರು ಪಲ್ಯ' ಮೂಲಕ ಅಮೃತಾ ಪ್ರೇಮ್ ಚಿತ್ರರಂಗಕ್ಕೆ ಬಂದಿದ್ದಾರೆ.


Click it and Unblock the Notifications











