ನನ್ನ ಕಣ್ಣೀರು ಸಿನಿಮಾ ಸೋಲಿನಿಂದ ಅಲ್ಲ: ನೋವಿನ ಕಾರಣ ಹೇಳಿದ ರವಿ ಬಸ್ರೂರ್
Recommended Video
'ಉಗ್ರಂ', 'ಮಫ್ತಿ', 'ಕೆಜಿಎಫ್' ಸಿನಿಮಾಗಳಿಗೆ ಸಂಗೀತ ನೀಡಿದ್ದ ರವಿ ಬಸ್ರೂರ್ ವಾರಗಳ ಹಿಂದೆ ಕಣ್ಣೀರು ಹಾಕಿದ್ದರು. ಅವರ ನಿರ್ದೇಶನದ 'ಗಿರ್ಮಿಟ್' ಸಿನಿಮಾವನ್ನು ಜನ ಸ್ವೀಕರಿಸುತ್ತಿಲ್ಲ ಎಂದು ದುಃಖ ಹಂಚಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು.
ಕೆಲವರು ರವಿ ಬಸ್ರೂರ್ ಗೆ ಹೀಗೆ ಆಗಬಾರದಿತ್ತು ಎಂದರು. ಇನ್ನು ಕೆಲವರು ಹೋಗಿ ಸಿನಿಮಾ ನೋಡಿದರು. ಹಲವರು ಅವರು ಫೋನ್ ಮಾಡಿ ಸಮಾಧಾನ ಹೇಳಿದರು. ಒಟ್ಟಿನಲ್ಲಿ ರವಿ ಬಸ್ರೂರ್ ಕಣ್ಣೀರು ಹಾಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು.
ಇದೀಗ ರವಿ ಬಸ್ರೂರ್ ಮತ್ತೊಂದು ವಿಡಿಯೋ ಮೂಲಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ನೋವು ಸಿನಿಮಾದ ಸೋಲಿನಿಂದ ಅಲ್ಲ. ಸಿನಿಮಾ ನಮಗೆ ಹವ್ಯಾಸ, ಬ್ಯುಸಿನೆಸ್ ಅಲ್ಲ ಎಂದು ಹೇಳಿದ್ದಾರೆ. ಸಿನಿಮಾ ಬಿಟ್ಟು ಎಂದಿಗೂ ಹೊರ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಸಿನಿಮಾ ಸೋಲಿಗೆ ಕಣ್ಣೀರು ಹಾಕಿಲ್ಲ
''ಇತ್ತೀಚಿಗೆ ವೈರಲ್ ಆದ ವಿಡಿಯೋ ನನ್ನ ವೈಯಕ್ತಿಕವಾದ ವಿಡಿಯೋ. ಅದನ್ನು ನನ್ನ ಸಿನಿಮಾ ಟೀಮ್ ಜೊತೆಗೆ ಹಂಚಿಕೊಂಡಿದ್ದೇನೆ. ಅದು ಹೊರಗಡೆ ಬಂದು, ವೈರಲ್ ಆಯ್ತು ಕ್ಷಮೆ ಇರಲಿ. ಅದು ಹಾಗೆ ಆಗಬಾರದಿತ್ತು. ನಾನು ಕಣ್ಣೀರು ಹಾಕಿದ್ದಕ್ಕೂ ಒಂದು ಕಾರಣ ಇದೆ. ಅದು ಸಿನಿಮಾ ಓಡಲಿಲ್ಲ ಎನ್ನುವ ಕಾರಣಕ್ಕೆ ಅಲ್ಲ.''

ಮಕ್ಕಳ ಕಷ್ಟಕ್ಕೆ ಪ್ರತಿಫಲ ಸಿಗಲಿಲ್ಲ
''ಒಬ್ಬ ಕ್ರಿಯೇಟರ್ ಸಕ್ಸಸ್, ಫೇಲ್ಯೂರ್ ಬಗ್ಗೆ ಯೋಚನೆ ಮಾಡುವುದಿಲ್ಲ. ಸಿನಿಮಾ ನಮ್ಮ ಹವ್ಯಾಸ, ಬ್ಯುಸಿನೆಸ್ ಅಲ್ಲ. ಮಕ್ಕಳ ಕಷ್ಟಕ್ಕೆ ಪ್ರತಿಫಲ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬೇಸರ ಆಯ್ತು. ಪ್ರತಿ ಸಿನಿಮಾ ಹೊಸಬರಿಗೆ ಅವಕಾಶ ಸಿಗಲಿ ಎನ್ನುವ ದೃಷ್ಟಿಯಲ್ಲಿ ಮಾಡುತ್ತೇನೆ ಅಷ್ಟೇ. ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕುತ್ತೇನೆ.''

ಇತರರಿಗೂ ಅವಕಾಶಗಳು ಸಿಗಲಿ
''ನಾನು ಬರೀ ಮ್ಯೂಸಿಕ್ ಮಾಡಿಕೊಂಡು ಇರಬೇಕು ಎಂದು ಅನೇಕ ಸ್ನೇಹಿತರು ಹೇಳಿದರು. ನನ್ನ ಪ್ರಕಾರ ನಮಗೆ ಜೀವನದಲ್ಲಿ ಕೆಲಸ ಮಾಡಲು ಇರುವುದೇ ಹತ್ತು ವರ್ಷ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇತರರಿಗೂ ಅವಕಾಶ ಸಿಗಲಿ ಎಂದು ನಾವು ಸಿನಿಮಾ ಮಾಡುತ್ತಿದ್ದೇವೆ. ಯಾರು ಏನೇ ಹೇಳಿದರು ನಾವು ಸಿನಿಮಾ ಮಾಡುವುದನ್ನು ನಿಲ್ಲಿಸುವವರು ಅಲ್ಲ.''
ಸಿನಿಮಾ ಮಾಡುತ್ತಲೇ ಇರುತ್ತೇವೆ
''ಸಮುದ್ರದಲ್ಲಿ ಈಜುವಾಗ ಕಣ್ಣೀರು ಬಂತು ಅಂತ ಒರೆಸಿಕೊಂಡರೆ, ನಾವು ಮುಳುಗುತ್ತೇವೆ. ನಮಗೆ ಗೊತ್ತು ನಾವು ಸಮುದ್ರದಲ್ಲಿ ಇದ್ದೇವೆ. ನಾವು ಕೈ ಒಡಿತಾನೆ ಇರುತ್ತೇವೆ. ಸಿನಿಮಾ ಮಾಡುತ್ತಲೇ ಇರುತ್ತೇವೆ. ಹೊಸ ಪ್ರಯತ್ನಗಳ ಜೊತೆಗೆ ನಮ್ಮ ತಂಡ ಯಾವಾಗಲೂ ಇದ್ದೇ ಇರುತ್ತದೆ. ರವಿ ಬಸ್ರೂರ್ ಕಣ್ಣೀರು ಹಾಕಿದ ಕೂಡಲೇ ವೀಕ್ ಎಂದುಕೊಳ್ಳಬೇಡಿ. ನಾನು ಎಷ್ಟು ಸ್ಟ್ರಾಂಗ್ ಅಂತ ನಿಮಗೆ ಗೊತ್ತಿದೆ.''


Click it and Unblock the Notifications











