ಕನ್ನಡ ಧ್ವಜಕ್ಕೆ ಬೆಂಕಿ, ಕೆಂಡವಾದ ಶಿವಣ್ಣ: 'ಪ್ರಾಣ ಬೇಕಾದರೂ ಹೋಗಲಿ'
ಎಂಇಎಸ್ ಹಾಗೂ ಶಿವಸೇನೆಯ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ವಿಚಾರ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಈ ಬಗ್ಗೆ ಈಗಾಗಲೇ ಆಕ್ರೋಶ ಹೊರಹಾಕಿದ್ದಾರೆ.
Recommended Video
ಕನ್ನಡ ಧ್ವಜ ಸುಟ್ಟ ಘಟನೆಯನ್ನು ಖಂಡಿಸಿದ ಮೊದಲಿಗರಲ್ಲಿ ಒಬ್ಬರು ನಟ ಶಿವರಾಜ್ ಕುಮಾರ್, ನಿನ್ನೆ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಅವರು, ಕನ್ನಡ ಧ್ವಜ ಸುಟ್ಟ ವಿಚಾರವಾಗಿ ಆವೇಶಭರಿತರಾಗಿ ಮಾತನಾಡಿದರು.
''ಎಲ್ಲರಿಗೂ ಎಲ್ಲ ಭಾಷೆಯೂ ಮುಖ್ಯ. ನಾವೆಲ್ಲರೂ ಭಾರತೀಯರು. ನಾವೆಲ್ಲರೂ ಒಂದು. ನಾವೆಲ್ಲರೂ ಒಂದಾಗಿರಬೇಕೆಂದರೆ ಪರಸ್ಪರರ ಭಾಷೆಗೆ, ಸಂಸ್ಕೃತಿಗೆ ನಾವು ಗೌರವ ಕೊಡಬೇಕು. ಅದು ಎಲ್ಲರ ಧರ್ಮ. ಬೇರೆಯವರ ಧ್ವಜಕ್ಕೆ ಅಪಮಾನ ಮಾಡುವುದು ಬಹಳ ಹೇಯ. ಅಂಥಹಾ ಕೃತ್ಯ ಯಾರೂ ಮಾಡಬಾರದು. ಧ್ವಜ ಸುಡುವುದು ಎಂದರೆ ತಾಯಿಯನ್ನೇ ಸುಟ್ಟಂತೆ'' ಎಂದು ಭಾವುಕವಾಗಿ ಹೇಳಿದರು ನಟ ಶಿವರಾಜ್ ಕುಮಾರ್.

''ನಾನು ಎಲ್ಲ ಭಾಷೆಗೆ ಗೌರವ ಕೊಡುತ್ತೀನಿ, ಆದರೆ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೀನಿ''
''ನಾನು ಹುಟ್ಟಿದ್ದು ಚೆನ್ನೈನಲ್ಲಿ. ನಾನು ಮೂರನೇ ಭಾಷೆಯಾಗಿ ತಮಿಳು ಕಲಿತೆ, ಕಲಿಯಲೇ ಬೇಕಿತ್ತು. ನನಗೆ ತಮಿಳುನಾಡಿನಲ್ಲಿ ಗೆಳೆಯರಿದ್ದಾರೆ ಅವರೊಟ್ಟಿಗೆ ನಾನು ತಮಿಳಿನಲ್ಲಿ ಮಾತನಾಡುತ್ತೇನೆ. ನಾನು ಎಲ್ಲ ಭಾಷೆಯ ಸಿನಿಮಾ ನೋಡುತ್ತೇನೆ. ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಇಂಗ್ಲೀಷ್ ಕೊನೆಗೆ ಗುಜರಾತಿ ಭಾಷೆಯ ಸಿನಿಮಾ ಸಹ ನೋಡ್ತೀನಿ. ಏಕೆಂದರೆ ನನಗೆ ಆ ಭಾಷೆಯ ಮೇಲಿರುವ ಗೌರವ ಅದು. 'ಅಖಂಡ' ಅಂಥಹಾ ಸಿನಿಮಾಕ್ಕೆ ನಾನು ಮೊದಲ ಶೋಗೆ ಹೋಗ್ತೀನಿ. ಬಾಲಕೃಷ್ಣ ಅವರ ಮೇಲೆ ನನಗಿರುವ ಗೌರವ ಅದು. ಎಲ್ಲ ಭಾಷೆಯ ಸಿನಿಮಾ ನೋಡೋಣ, ಎಲ್ಲ ಭಾಷೆಯನ್ನೂ ಗೌರವಿಸೋಣ. ಆದರೆ ಕನ್ನಡ ಭಾಷೆಯ ಸಿನಿಮಾ ಹೆಚ್ಚು ನೋಡೋಣ. ಕನ್ನಡ ಭಾಷೆಯನ್ನು ಹೆಚ್ಚು ಗೌರವಿಸೋಣ'' ಎಂದರು ಶಿವಣ್ಣ.

ಬೇರೆ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡಬಾರದು: ಶಿವಣ್ಣ
''ಬೇರೆ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡಬಾರದು. ನಮಗೆ ಪವರ್ ಇಲ್ಲ ಎಂದಲ್ಲ. ಸಿಟ್ಟು ಬಂದಾಗ ವ್ಯಕ್ತಿ ಹೇಗೆ ಬೇಕಾದರೂ ಆಗುತ್ತಾನೆ. ಧ್ವಜ ಸುಟ್ಟಿರುವ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಮತ ರಾಜಕಾರಣಕ್ಕಾಗಿ ಸುಮ್ಮನೆ ಆಗಬಾರದು. ತಾರತಮ್ಯ ಮಾಡಬಾರದು ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಮ್ಮವರು ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆ ಆಗಲಿ. ನಮ್ಮವರು ತಪ್ಪು ಮಾಡಿಲ್ಲವೆಂಬ ವಿಷಯವನ್ನೂ ನಾನು ಕೇಳ್ಪಟ್ಟೆ. ನಮ್ಮ ಭಾಷೆಗಾಗಿ ನಾವು ಹೋರಾಡಲೇ ಬೇಕು'' ಎಂದರು ಶಿವರಾಜ್ ಕುಮಾರ್.

ಪ್ರಾಣ ಹೋಗುವುದಾದರೆ ಹೋಗಲಿ ಬಿಡಿ: ಶಿವಣ್ಣ
''ನನಗೆ ವಿಷಯ ಗೊತ್ತಿರಲಿಲ್ಲ. ನನಗೆ ಯಾರೋ ಹೇಳಿದರು. ಆ ನಂತರ ನಾನು ಟ್ವೀಟ್ ಮಾಡಿದೆ. ಇವಾಗೆಲ್ಲ ಟ್ವೀಟ್ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ನನಗೂ ಅದು ಇಷ್ಟವಿಲ್ಲ. ಟ್ವೀಟ್ ಮಾಡಿ ಸುಮ್ಮನಾಗುವುದರಿಂದ ಪ್ರಯೋಜನ ಇಲ್ಲ. ಹೋರಾಟಕ್ಕೆ ಇಳಿಯಬೇಕು ಎಂದರೆ ಇಳಿದು ಬಿಡಬೇಕು. ಯಾವತ್ತೋ ಹೇಳಿಬಿಟ್ಟಿದ್ದೀನಿ. ನಮ್ಮ ಭಾಷೆಗಾಗಿ ಪ್ರಾಣ ಕೊಡುವುದಕ್ಕೂ ಸಹ ನಾನು ತಯಾರಾಗಿದ್ದೇನೆ. ನನಗೆ 59 ವರ್ಷ ಈಗ ಇನ್ನೊಂದು ವರ್ಷಕ್ಕೆ 60 ಜನ ಸಾಕಷ್ಟು ಬೆಳೆಸಿದ್ದಾರೆ, ಪ್ರೀತಿಸಿದ್ದಾರೆ. ಸಾಕಷ್ಟು ಕಂಡಿದ್ದೇನೆ. ಕನ್ನಡಕ್ಕಾಗಿ ಜೀವ ಹೋಗುವುದಾದರೆ ಹೋಗಲಿ ಬಿಡಿ'' ಎಂದರು ಶಿವರಾಜ್ ಕುಮಾರ್.

ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು: ಶಿವಣ್ಣ
''ಪರಸ್ಪರರಿಗೆ ಗೌರವ ಕೊಟ್ಟಾಗಷ್ಟೆ ನಾವೆಲ್ಲ ಒಟ್ಟಿಗೆ ಇರಲು ಸಾಧ್ಯ. ಈಗ ಎಲ್ಲ ಹೇಳುತ್ತಿದ್ದಾರೆ ಶಿವರಾಜ್ ಕುಮಾರ್ ನಾಯಕತ್ವ ವಹಿಸಬೇಕು ಎಂದು. ಯಾವ ನಾಯಕತ್ವವೂ ಬೇಡ. ನಾವೆಲ್ಲ ಒಟ್ಟಿಗೆ ಇರೋಣ, ಒಟ್ಟಿಗೆ ಹೋರಾಡೋಣ. ಸರ್ಕಾರವನ್ನು ಕೇಳಿಕೊಳ್ಳುವುದು ಒಂದೇ, ದಯವಿಟ್ಟು ಸರ್ಕಾರ ಗಟ್ಟಿ ನಿರ್ಧಾರದಲ್ಲಿರಲಿ. ಯಾರೆ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಲಿ. ನಾವು ಎಲ್ಲರಿಗೂ ಜಾಗ ಕೊಟ್ಟಿದ್ದೇವೆ, ನಾವು ಯಾರನ್ನೂ ದ್ವೇಷಿಸಲ್ಲ. ನಾನೇ ಬೇರೆ ಭಾಷೆಯ ಸಿನಿಮಾಗಳಿಗೆ ಮೊದಲ ಶೋಗೆ ಹೋಗಿ ಗೌರವ ಕೊಡ್ತೀನಿ'' ಎಂದರು ಶಿವಣ್ಣ.


Click it and Unblock the Notifications











