ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ ; ರೊಚ್ಚಿಗೆದ್ದ ಐಂದ್ರಿತಾ ರೈ - ಶಾಸಕ ಮುನಿರತ್ನಗೆ ಟ್ಯಾಗ್ ಮಾಡಿ ಆಕ್ರೋಶ ಹೊರ ಹಾಕಿದ ನಟಿ
ಬೆಂಗಳೂರನ್ನು ಈ ಹಿಂದೆ ಗಾರ್ಡನ್ ಸಿಟಿ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಬೆಂಗಳೂರು ಅಕ್ಷರಶಃ ಗಾರ್ಬೇಜ್ ಸಿಟಿಯಾಗಿದೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ನಾಗರಿಕ ಪ್ರಜ್ಞೆಯ ಕೊರತೆಯಿಂದ ಕಸದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. 1,000 .. 5,000.. ಎಷ್ಟೇ ದಂಡ ಹಾಕಿದರೂ ಕೂಡ ಎಲ್ಲೆಂದರಲ್ಲಿ ಕೆಲವರು ಕಸ ಎಸೆದು ನಗರದ ಸೌಂದರ್ಯ ಹಾಳು ಮಾಡಿದರೆ...
ಇನ್ನೂ ಕೆಲ ಕಿಡಿಗೇಡಿಗಳು ಕಸಕ್ಕೆ ಬೆಂಕಿ ಹಚ್ಚು ಮೂಲಕ ಪರಿಸರ ಮಾಲಿನ್ಯ ಮಾಡುತ್ತಾರೆ. ಇವರ ಈ ಬೇಜವಾಬ್ಧಾರಿತನದಿಂದ ಜವಾಬ್ಧಾರಿಯುತ ನಾಗರಿಕರು ಕೂಡ ದಿನ ನಿತ್ಯ ನರಳುವಂತಾಗಿದೆ. ಇನ್ನೂ ಬೆಂಗಳೂರು ಇಂದು ಎಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ ಕಸ ವಿಲೇವಾರಿ ಮಾಡಲು ಕೂಡ ಜಾಗ ಇಲ್ಲದಂತಾಗಿದೆ. ಇದೆಲ್ಲದರಿಂದ ಹಲವರು ಹೈರಾಣಾಗಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜೆಬಿಎ) ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಈ ಸಮಸ್ಯೆಗೆ ಮುಕ್ತಿ ಸಿಕ್ತಿಲ್ಲ. ಕೇವಲ ಜನ ಸಾಮಾನ್ಯರು ಮಾತ್ರವಲ್ಲ ಚಿತ್ರರಂಗದ ತಾರೆಯರು ಕೂಡ ಈ ಕಸದ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಉದಾಹರಣೆಗೆ ಐಂದ್ರೀತಾ ರೇ.
ಹೌದು, ಐಂದ್ರೀತಾ ರೇ ಕನ್ನಡ ಚಿತ್ರರಂಗದ ಚಿಗರೆ ಕಂಗಳ ಚೆಲುವೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಐಂದ್ರೀತಾ ಸದ್ಯ ಮದುವೆ ನಂತರ ಮನೆಯಲ್ಲಿದ್ದಾರೆ.
ಆದರೆ.. ಮನೆಯಲ್ಲಿ ಈ ಕಸದ ಸಮಸ್ಯೆಯಿಂದ ಇವರಿಗೆ ನೆಮ್ಮದಿ ಮಾತ್ರ ಇಲ್ಲದಂತಾಗಿದೆ. ಹೀಗಾಗಿಯೇ ಕೆರಳಿದ ಐಂದ್ರೀತಾ ರಾಜರಾಜೇಶ್ವರಿ ನಗರ ಶಾಸಕ ಮತ್ತು ನಿರ್ಮಾಪಕ ಮುನಿರತ್ನ ಅವರನ್ನು ಟ್ಯಾಗ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಐಂದ್ರೀತಾ ರೇ ರಾಜರಾಜೇಶ್ವರಿ ನಗರ ಪ್ರದೇಶದಲ್ಲಿ ಮೂರು ದಿನಗಳಿಂದ ಕಸ ಸುಡುತ್ತಿದ್ದಾರೆ. ಏನಿದು ಸಮಸ್ಯೆ ಎಂದು ನೋಡಿದಾಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಿಬ್ಬಂದಿಯೇ ಕಸ ಸುಡುತ್ತಿದ್ದಾರೆ ಎಂದು ತಮ್ಮ ಬೇಸರ ಹೊರ ಹಾಕಿದ್ದಾರೆ.

ಕಸದಿಂದಾಗಿ ನಮಗೆ 3 ದಿನದಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಿರುವ ಐಂದ್ರೀತಾ ರೇ ಸುಟ್ಟ ಕಸದ ಹೊಗೆಯಿಂದ ಮನೆಯಲ್ಲಿ ಇರೋಕೆ ಆಗ್ತಿಲ್ಲ. ಉಸಿರಾಡಲು ಆಗುತ್ತಿಲ್ಲ. ಕಸ ಸುಟ್ಟ ಹೊಗೆ ಮನೆಯೊಳಗೆ ಬರ್ತಿದೆ. ರೆಸಿಡೆನ್ಶಿಯಲ್ ಜಾಗದಲ್ಲಿ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕಸವನ್ನು ಸುಡುತ್ತಿರುವ ಹಿನ್ನೆಲೆ ನಮ್ಮ ಅಪಾರಟ್ಮೆಂಟ್ ಸುತ್ತ ಹೊಗೆ ಸುತ್ತಿಕೊಳ್ಳುತ್ತಿದೆ ಎಂದು ಕೂಡ ಹೇಳಿರವ ಐಂದ್ರೀತಾ ಮೂರು ದಿನವಾದರೂ ಕೂಡ ಅದರ ಎಫೆಕ್ಟ್ ಹಾಗೇ ಇರುತ್ತೆ, ಇದರಿಂದ ಉಸಿರಾಟದ ಸಮಸ್ಯೆ ಎದುರಾಗಿದೆ ಎಂದಿದ್ದಾರೆ.
ಮುಂದುವರೆದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಾಯವಾಣಿಗೆ ಕರೆ ಮಾಡಿದರೂ ಕನೆಕ್ಟ್ ಆಗುತ್ತಿಲ್ಲ, ಕಂಟ್ರೋಲ್ ರೂಂಗೆ ಫೋನ್ ಮಾಡಿದ್ರು ಪ್ರಯೋಜನವಾಗುತ್ತಿಲ್ಲ ಎಂದು ಹೇಳಿರುವ ಐಂದ್ರೀತಾ ರೇ ಸಂಬಂಧಪಟ್ಟ ಅಧಿಕಾರಿಗಳು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಶಾಸಕ ಮುನಿರತ್ನ ಅವರಿಗೆ ಕೂಡ ತಮ್ಮ ವಿಡಿಯೋ ಟ್ಯಾಗ್ ಮಾಡಿದ್ದಾರೆ.
ಇನ್ನು ತಮ್ಮ ಈ ವಿಡಿಯೋ ದೇಶವ್ಯಾಪಿ ಚರ್ಚೆಗೀಡಾದ ಬೆನ್ನಲ್ಲಿಯೇ ಮತ್ತೊಂದು ವಿಡಿಯೋ ಕೂಡ ಹಂಚಿಕೊಂಡಿರುವ ಐಂದ್ರೀತಾ ರೇ ಈ ಸಮಸ್ಯೆಯ ಕುರಿತು ಸರ್ಕಾರ ಮತ್ತು ಅಧಿಕಾರಿಗಳು ಗಂಭೀರವಾಗಿ ಆಲೋಚನೆ ಮಾಡಬೇಕು ಎಂದು ಹೇಳಿದ್ದಾರೆ. ನನ್ನೊಬ್ಬಳ ಸಮಸ್ಯೆ ಮಾತ್ರ ಅಲ್ಲ ಕಲುಷಿತ ವಾತಾವರಣದಿಂದ ಎಲ್ಲರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ, ಹಿರಿಯ ನಾಗರೀಕರಿಗೆ ತೊಂದರೆಯಾಗುತ್ತೆ ಎಂದು ಹೇಳಿದ್ದಾರೆ. ನಾನು ಕೂಡ ಆಸ್ಪತ್ರೆಗೆ ದಾಖಲಾಗಿದ್ದೆ ಈಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಕೂಡ ಐಂದ್ರೀತಾ ತಮ್ಮ ಮತ್ತೊಂದು ವಿಡಿಯೋದಲ್ಲಿ ಹೇಳಿದ್ದಾರೆ.


Click it and Unblock the Notifications











