''ಈ ಬಾರಿ ಬಿಗ್ ಬಾಸ್ ಸಹವಾಸ ಸಾಕು ಎಂದುಕೊಂಡಿದ್ದು ನಿಜಾ'' - ಕಿಚ್ಚ ಸುದೀಪ್..!
ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು ಎನ್ನುವುದನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಇಂಥ ಸುದೀಪ್ ಈಗ ಬಿಗ್ ಬಾಸ್ನ ಹನ್ನೊಂದನೇ ಸೀಸನ್ಗೆ ಅಣಿಯಾಗಿದ್ದಾರೆ. ಕಾರ್ಯಕ್ರಮ ಶುರುವಾಗುವ ಒಂದು ವಾರದ ಮುನ್ನ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮಾತ್ ಮಾತಲ್ಲಿ ಬಿಗ್ ಬಾಸ್ ಸಹವಾಸ ಸಾಕು ಎಂಬ ಭಾವನೆ ನನಗೆ ಬಂದಿದ್ದು ನಿಜಾ ಎಂದು ಒಂದು ಕ್ಷಣ ಎಲ್ಲರನ್ನೂ ಅಚ್ಚರಿಗೂ ದೂಡಿದ್ದಾರೆ ಸುದೀಪ್

ಹೌದು, ಇಂದು ಈ ಬಾರಿಯ ಬಿಗ್ ಬಾಸ್ ನ ವಿಶೇಷತೆಯನ್ನು ಹೇಳಲು ಮಾಧ್ಯಮದವರ ಮುಂದೆ ಬಂದಿದ್ದ ಕಿಚ್ಚ ಸುದೀಪ್ ಹಲವಾರು ವಿಚಾರಗಳ ಕುರಿತು ಮಾತನಾಡಿದ್ದಾರೆ. ಬಿಗ್ ಬಾಸ್ ಸಹವಾಸ ಸಾಕು ಎಂದುಕೊಂಡಿದ್ದೇ. ಹಾಗಂಥ ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ, ಬಿಗ್ ಬಾಸ್ ಬದಲು ಸಿನಿಮಾ ಕಡೆ ಹೆಚ್ಚು ಗಮನ ಕೊಡಬೇಕೆನ್ನುವ ಉದ್ದೇಶ ನನಗೆ ಇತ್ತು, ಆದರೆ ಹಾಗೂ ಹೀಗೂ ಕೊನೆಗೂ ಬಿಗ್ ಬಾಸ್ ತಂಡ ನನ್ನ ಮನಸು ಬದಲಿಸುವಲ್ಲಿ ಯಶಸ್ವಿಯಾದರು ಎಂದು ಹೇಳಿದ್ದಾರೆ. ಬಿಗ್ ಬಾಸ್ ಶುರುವಾದರೆ ನನ್ನ ಬದುಕು ನಿಂತಂತೆ ಆಗುತ್ತೆ, ನಾಲ್ಕು ದಿನ ಹೊರಗೆ ಹೋಗಬಹುದಷ್ಟೇ ಆ ನಂತರ ಎಲ್ಲೇ ಇದ್ದರೂ ಶುಕ್ರವಾರ ಬರಬೇಕಾಗುತ್ತೆ, ಹೀಗಾಗಿ ಹತ್ತು ವರ್ಷ ಆಯ್ತು ಬೇರೆಯವರು ಮಾಡಲಿ ಅಂತ ಯೋಚನೆ ಮಾಡಿದ್ದೆ ಆದರೆ ಅದು ಆಗಲಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಅಲ್ಲ. ಬದುಕಿನ ಬಹುಮುಖ್ಯವಾದ ಭಾಗ. ಖುದ್ದು ಸುದೀಪ್ ಈ ಮಾತನ್ನು ಇಂದು ಹೇಳಿದ್ದಾರೆ ಕೂಡ. ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ನಡೆಸಿಕೊಂಡು ಬಂದಿದ್ದೇನೆ, ಈ ಕಾರಣಕ್ಕೆ ಬಿಗ್ ಬಾಸ್ ಜೊತೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಸೆದಿದೆ, ಒಪ್ಪಿಕೊಳ್ಳಲು ಇದು ಕೂಡ ಪ್ರಮುಖ ಕಾರಣವೆಂದು ಸುದೀಪ್ ಹೇಳಿದ್ದಾರೆ.

ಇನ್ನೂ ಅಚ್ಚು ಕಟ್ಟಾಗಿ ಕಾರ್ಯಕ್ರಮ ನಿಭಾಯಿಸಿಕೊಂಡು ಬಿಗ್ ಬಾಸ್ ಭಾರವನ್ನು ತಮ್ಮ ಹೆಗಲ ಮೇಲೆ ಹತ್ತು ವರ್ಷಗಳ ಕಾಲ ಹೊತ್ತಿರುವ ಸುದೀಪ್, ಈ ಕಾರ್ಯಕ್ರಮಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು ಅನ್ನುವ ಪ್ರಶ್ನೆ ಅನೇಕರಲ್ಲಿದೆ. ಇಂದು ಈ ಪ್ರಶ್ನೆ ಸುದೀಪ್ ಅವರಿಗೆ ಕೂಡ ಎದುರಾಗಿದೆ. ಇದಕ್ಕೆ ನಗುತ್ತಲೇ ಉತ್ತರವನ್ನು ನೀಡಿದ ಸುದೀಪ್ , ನನ್ನ ತಟ್ಟೆ ಎಷ್ಟು ಅಗಲ ಇದೆಯೋ ಅಷ್ಟೇ ನಾನು ಊಟ ಮಾಡುತ್ತೇನೆ, ನನಗೆ ಯೋಗ್ಯತೆ ಎಷ್ಟು ಇದೆಯೋ ನಾನಷ್ಟೇ ದುಡಿಯೋದು ಎಂದು ಹೇಳಿದ್ದಾರೆ. ಹತ್ತು ವರ್ಷ ಬಿಗ್ ಬಾಸ್ಗೆ ಕೆಲಸ ಮಾಡಿದ್ದೇನೆ, ಚಿತ್ರರಂಗದಲ್ಲಿ 28 ವರ್ಷ ಪೂರೈಸಿದ್ದೇನೆ. ಸಹಜವಾಗಿ ಒಳ್ಳೆಯ ಸಂಭಾವನೆಯನ್ನೇ ಪಡೆದುಕೊಳ್ಳುತ್ತಿರುತ್ತೇನೆ ಅಲ್ವಾ ಎಂದು ಮರು ಪ್ರಶ್ನೆಯನ್ನು ಮಾಡಿ ಇದು ನನ್ನ ಹೊಸ ಅಧ್ಯಾಯ ಎಂದು ನಕ್ಕಿದ್ದಾರೆ ಸುದೀಪ್.
ಅಂದ್ಹಾಗೇ ಈ ಬಾರಿ ಸ್ವರ್ಗ ನರಕದ ಕಥೆ ಬಿಗ್ ಬಾಸ್ನಲ್ಲಿದೆ. ಇದರ ಬಗ್ಗೆ ಕೂಡ ಮಾತನಾಡಿರುವ ಸುದೀಪ್, ನಾವು ತಂಡ ಮಾಡದೇ ಇದ್ದರೂ ಅವರು ಒಳಗಡೆ ಹೋದ ನಂತರ ತಮ್ಮ ತಂಡ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಬಾರಿ ನಾವೇ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಅವರನ್ನು ಮನೆಯೊಳಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಉಳಿದಂತೆ ಈ ಬಾರಿಯ ಬಿಗ್ ಬಾಸ್ ಈ ಸೆಪ್ಟೆಂಬರ್ 29ರಿಂದ ಶುರುವಾಗಲಿದೆ. ಪ್ರತಿ ದಿನ ರಾತ್ರಿ 09-30ರಿಂದ ನೀವು ಈ ಕಾರ್ಯಕ್ರಮವನ್ನು ನೋಡಬಹುದು. ಇನ್ನೂ ಮನೆಯ ಒಳಗೆ ಈ ಬಾರಿ ಯಾರೆಲ್ಲ ಬರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಅವತ್ತೇ ಸಿಗಲಿದೆಯಾದರೂ ಸದ್ಯಕ್ಕೆ ಬೃಂದಾವನ' ಖ್ಯಾತಿಯ ವರುಣ್ ಆರಾಧ್ಯ.. ಯೂಟ್ಯೂಬರ್ ವರ್ಷಾ ಕಾವೇರಿ.. ತುಕಾಲಿ ಸಂತು ಅವರ ಪತ್ನಿ ಮಾನಸಾ.. ಸುನಿಲ್ ರಾವ್.. ಮೋಕ್ಷಿತಾ ಪೈ.. ರೀಲ್ಸ್ ರೇಷ್ಮಾ.. ಹೀಗೆ ಕೆಲ ಹೆಸರುಗಳು ಚಾಲ್ತಿಯಲ್ಲಿವೆ.
ಒಟ್ನಲ್ಲಿ ಸುದೀಪ್ ಅವರ ಪಾಲಿಗೆ ಬಿಗ್ ಬಾಸ್ ದುಡ್ಡಿಗೂ ಮೀರಿದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಸಮಯವನ್ನು ಮೀಸಲಿಡುವದರ ಜೊತೆ ತಮ್ಮ ಶ್ರಮವನ್ನು ಕೂಡ ಸುದೀಪ್ ಧಾರೆಯೆರೆದಿದ್ದಾರೆ. ನಿದ್ರೆಯನ್ನು ಮರೆತಿದ್ದಾರೆ. ಜ್ವರ ಇದ್ದರೂ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇನ್ನೂ ಘಂಟೆಗಳವರೆಗೆ ನಿಲ್ಲಬೇಕು. ಸಹಜವಾಗಿ ಕಾಲು ನೋಯುತ್ತೆ. ಆದರೂ ಕೂಡ ಈ ಬಾಧೆಗಳನ್ನೆಲ್ಲ ತೋರಿಸಿಕೊಳ್ಳದೇ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದ ಸುದೀಪ್ ಈ ಬಾರಿ ಮತ್ತೊಮ್ಮೆ ಕಿರುತೆರೆಯ ಮೂಲಕ ನಿಮ್ಮ ಮನೆಗಳನ್ನು ತಲುಪಲಿದ್ದಾರೆ. ದಿನಾಂಕ ನೆನಪಿದೆಯಲ್ಲ ಸೆಪ್ಟೆಂಬರ್ 29.


Click it and Unblock the Notifications











