ಕನ್ನಡ ಇಂಡಸ್ಟ್ರಿಗಾಗಿ ಪ್ರಾಣ, ಪ್ರೀತಿ ಕೊಟ್ಟೆ ; ಆದರೆ ನಾನು ಕಷ್ಟದಲ್ಲಿದ್ದಾಗ ಯಾರೂ ಬರಲಿಲ್ಲ- ರಾಗಿಣಿ ಕಣ್ಣೀರು
ಅದು 2020- 2021ರ ಆಸು ಪಾಸು. ಕನ್ನಡ ಚಿತ್ರರಂಗಕ್ಕೆ ಗರ ಬಡೆದಿತ್ತು. ಮಾದಕ ಮಾಯಾಜಾಲದಲ್ಲಿ ಗಂಧದ ಗುಡಿ ಸಿಲುಕಿತ್ತು. ಆ ಕಾಲಕ್ಕೆ ವಿಪರೀತ ಸದ್ದು ಮಾಡಿದ್ದ ಪ್ರಕರಣ ಇದು. ಆಂಕರ್ ಅನುಶ್ರೀ ಅವರಿಂದ ಹಿಡಿದು ದೂದ್ ಪೇಡಾ ದಿಗಂತ್ವರೆಗೆ ಎಲ್ಲರು ಸರತಿ ಸಾಲಿನಲ್ಲಿ ಬಂದು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯನ್ನೇದುರಿಸಿ ಮನೆ ಸೇರಿದ್ದರು. ಆದರೆ. ಪರಭಾಷೆಯಿಂದ...
ಕನ್ನಡ ಚಿತ್ರರಂಗಕ್ಕೆ ವಲಸೆ ಬಂದ ಇಬ್ಬರು ನಾಯಕಿಯರ ನಸೀಬು ಕೆಟ್ಟಿತ್ತು. ಜೈಲು ಇಬ್ಬರನ್ನೂ ಕೈ ಬೀಸಿ ಕರೆದಿತ್ತು. ಆ ಇಬ್ಬರು ಬೇರೆ ಯಾರು ಅಲ್ಲ ಬದಲಿಗೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹೆಚ್ಚು ಕಡಿಮೆ 140 ದಿನಗಳ ಕಾಲ ರಾಗಿಣಿ ಪಡಬಾರದ ಕಷ್ಟ ಪಟ್ಟರು. ಮನದೊಳಗೆ ಬಿಕ್ಕಿದ್ದರು. ತನ್ನದೇನು ತಪ್ಪಿಲ್ಲ ಯಾವ ಡ್ರಗ್ಸ್ನ್ನು ಕೂಡ ತಾವು ಸೇವಿಸಿಲ್ಲ ಎಂದು ಅಲವತ್ತುಕೊಂಡರು.

ಆದರೆ, ರಾಗಿಣಿ ಅವರ ಈ ಮಾತುಗಳನ್ನು ಆಗ ಯಾರೆಂದರೆ ಯಾರು ಕೇಳಲಿಲ್ಲ. ಕನ್ನಡ ಚಿತ್ರರಂಗದವರೇ ರಾಗಿಣಿಯನ್ನು ನಂಬಲಿಲ್ಲ. ಬದಲಿಗೆ ಬೆಂಕಿ ಇರದೆ ಹೊಗೆಯಾಡುತ್ತಾ ಎನ್ನುವ ಪ್ರಶ್ನೆ ಮಾಡಿದರು. ಅನುಮಾನದ ದೃಷ್ಟಿಯಿಂದ ನೋಡಿ ಕೊನೆ ಕೊನೆಗೆ ರಾಗಿಣಿಗೆ ಅವಮಾನವಾಗುವಂತೆ ಕೂಡ ಮಾತನಾಡಿದರು.
ಕನ್ನಡ ಚಿತ್ರರಂಗದ ಈ ನಡೆ ನುಡಿ ಮತ್ತು ಮನಸ್ಥಿತಿಯ ಕುರಿತು ರಾಗಿಣಿ ಈಗ ಮೌನ ಮುರಿದಿದ್ದಾರೆ. ತಮ್ಮ ಮನದ ನೋವನ್ನು ಹೊರ ಹಾಕಿ ಎಲ್ಲರೆದುರು ಕಣ್ಣೀರು ಹಾಕಿದ್ದಾರೆ.
ಹೌದು, ಕನ್ನಡ ಚಿತ್ರರಂಗಕ್ಕೆ ಹಲವಾರು ಬೇರೆ ರಾಜ್ಯದ ಚೆಲುವೆಯರು ವಲಸೆ ಬಂದಿದ್ದಾರೆ. ಆ ಪೈಕಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿ ಹೋಗಿದ್ದರೆ, ಕೆಲವೇ ಕೆಲ ಬೆರಳೆಣಿಕೆಯಷ್ಟು ಬೆಡಗಿಯರು ಇಲ್ಲಿಯೇ ಬದುಕು ರೂಪಿಸಿಕೊಂಡರು. ಅದರಲ್ಲಿ ಪಂಜಾಬ್ ನ ಪೋರಿ ರಾಗಿಣಿ ಕೂಡ ಒಬ್ಬರು. ''ಹೋಳಿ'' ಚಿತ್ರದ ಮೂಲಕ ಕನ್ನಡದಲ್ಲಿ ನಾಯಕಿಯಾಗಿ ವೃತ್ತಿ ಬದುಕು ಶುರು ಮಾಡಿದ ರಾಗಿಣಿ ಆ ನಂತರ ಕನ್ನಡದ ಸಾಕಷ್ಟು ಹೀರೋಗಳ ಜೊತೆಗೆ ತೆರೆ ಹಂಚಿಕೊಂಡರು.
''ಕೆಂಪೇಗೌಡ''.. ''ಗೋಕುಲ''.. ''ಶಂಕರ್ ಐಪಿಎಸ್''.. ''ಆರಕ್ಷಕ''.. ''ಶಿವ''.. ''ಬಂಗಾರಿ''.. ಹೀಗೆ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸುತ್ತಾನೇ ಒಂದು ಕಾಲದಲ್ಲಿ ಮಾಲಾಶ್ರೀ ಅವರು ಮಾಡುತ್ತಿದ್ದ ಪಾತ್ರಗಳನ್ನು ತಮ್ಮದಾಗಿಸಿಕೊಂಡ ರಾಗಿಣಿ ಆ ನಂತರ ''ವೀರ ರಣಚಂಡಿ''.. ''ರಾಗಿಣಿ ಐಪಿಎಸ್''.. ಮುಂತಾದ ಹೀರೋಯಿನ್ ಓರಿಯೆಂಟಡ್ ಚಿತ್ರಗಳಲ್ಲಿ ನಟಿಸಿದರು.

ಇಂಥಾ ರಾಗಿಣಿ ಕನ್ನಡದ ಮನೆ ಮಗಳಾಗಿ 15 ವರ್ಷಗಳಾಗಿವೆ. ಈ ಹಿನ್ನೆಲೆ ತಾವು ನಡೆದು ಬಂದ ಹಾದಿಯನ್ನು ತಿರುಗಿ ನೋಡಲು ಇತ್ತೀಚೆಗೆ ಮಾಧ್ಯಮದವರ ಮುಂದೆ ಬಂದಿದ್ದ ರಾಗಿಣಿ, ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಭಾವುಕರಾಗಿದ್ದಾರೆ. ಈ ಕುರಿತು ವೇದಿಕೆಯ ಮೇಲೆ ಮಾತನಾಡಿರುವ ರಾಗಿಣಿ ನಾನು ಕನ್ನಡ ಇಂಡಸ್ಟ್ರಿಗಾಗಿ ಪ್ರಾಣ, ಪ್ರೀತಿ ಕೊಟ್ಟೆ. ಹೆಸರನ್ನೂ ಕೊಟ್ಟಿದ್ದೇನೆ. ಬೇರೆ ಕಡೆ ಹೋದಾಗಲೂ ಸ್ಯಾಂಡಲ್ವುಡ್ ಇಂಡಸ್ಟ್ರಿಯನ್ನೇ ಪ್ರಮೋಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾನು ಕನ್ನಡತಿಯಾಗಿಯೇ ಇರಲು ಇಚ್ಛಿಸುತ್ತೇನೆ. ಇದರ ಹೊರತಾಗಿಯೂ ಇಲ್ಲಿ ನನಗೆ ಪ್ರೀತಿ ಸಿಗುತ್ತಿಲ್ಲ. ನಾನು ಎಷ್ಟೇ ಕನ್ನಡ ಇಂಡಸ್ಟ್ರಿಯನ್ನು ಪ್ರಮೋಟ್ ಮಾಡಿದರೂ ಬೇರೆಯವರು ತೋರುತ್ತಿರುವ ಕಾಳಜಿ, ಪ್ರೀತಿ ಇಲ್ಲಿಯವರು ಕೊಡುತ್ತಿಲ್ಲ ಎಂದು ಭಾವುಕರಾಗಿದ್ದಾರೆ.
ಮುಂದುವರೆದು ನಾನು ಕನ್ನಡದವಳು ಅಲ್ಲದಿದ್ದರೂ ಕನ್ನಡ ಕಲಿತಿದ್ದೇನೆ ಎಂದು ಹೇಳಿರುವ ರಾಗಿಣಿ ದ್ವಿವೇದಿ ಇಲ್ಲಿ ಒಳ್ಳೆಯ ದಿನಗಳೂ ಇದ್ದವು, ಆದರೆ ಕೆಟ್ಟ ದಿನಗಳಲ್ಲಿ ನನಗೆ ಯಾರೂ ಇರಲಿಲ್ಲ ಎಂದು ನೊಂದುಕೊಂಡಿದ್ದಾರೆ. ನಾನು ತುಂಬಾ ಕಷ್ಟದ ಸಮಯ ನೋಡಿಕೊಂಡು ಬಂದೆ. ಹೀಗಾಗಿ ನಾನು ಹೆಚ್ಚಾಗಿ ನೆಗೆಟಿವ್ಗಿಂತ ಪಾಸಿಟಿವ್ ವಿಚಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೇನೆ. ನಮ್ಮ ಜೀವನದಲ್ಲಿ ನೆಗೆಟಿವ್ಗಳನ್ನ ಒಪ್ಪಿಕೊಂಡು ಹೋದಷ್ಟು ಮುಖ್ಯವಾಗುತ್ತೆ ಎಂದು ಹೇಳಿರುವ ರಾಗಿಣಿ, ನಿಜ ಹೇಳಬೇಕು ಅಂದ್ರೆ ಆ ಕಷ್ಟದ ಸಮಯದಲ್ಲಿ ಯಾರೂ ಇರಲಿಲ್ಲ. ಒಳ್ಳೆಯ ಸಮಯದಲ್ಲಿ ಎಲ್ಲರೂ ಇರ್ತಾರೆ ಎಂದು ಬಿಕ್ಕಿದ್ದಾರೆ.
ಹೀಗೆ ಮಾತನಾಡುತ್ತಾ ಮಾತನಾಡುತ್ತಾ ಕಣ್ಣೀರಾದ ರಾಗಿಣಿ, ನನಗೆ ಯಾಕೆ ಇಷ್ಟು ಅಳು ಬಂತು ಅಂದರೆ, ಜೀವನದಲ್ಲಿ ನಮ್ಮ ಶಕ್ತಿ ತೋರಿಸುವುದು ಎಷ್ಟು ಮುಖ್ಯವೋ, ಬಲಹೀನತೆ ತೋರಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತೆ ಎಂದು ಹೇಳಿದ್ದಾರೆ. ನಾವು ಎರಡನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ದುರ್ಬಲರಾದರೂ, ಒಳ್ಳೆಯ ಹಾಗೂ ಕೆಟ್ಟ ದಿನವಾದರೂ ಒಪ್ಪಿಕೊಳ್ಳಬೇಕು ಎಂದೂ ಹೇಳಿದ ರಾಗಿಣಿ ಇದೆಲ್ಲದರ ಹೊರತಾಗಿಯೂ ಯಾರು, ಏನೇ ಮಾಡಿದರೂ ನನಗೆ ಕನ್ನಡ ಚಿತ್ರರಂಗದ ಮೇಲೆ ಅಪಾರವಾದ ಪ್ರೀತಿ ಇದೆ, ಮುಂದೆಯೂ ಆ ಪ್ರೀತಿ ಇರುತ್ತೆ ಎಂದು ಹೇಳಿದ್ದಾರೆ.
ಸದ್ಯ ರಾಗಿಣಿ ಆಡಿದ ಈ ಮಾತು ಗಾಂಧಿನಗರದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ರಾಗಿಣಿ ಅವರ ಈ ಭಾಷಣದ ವಿಡಿಯೋ ಕೂಡ ವೈರಲ್ ಆಗಿದ್ದು ಹಲವರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











