ಸಿದ್ದಗಂಗಾ ಶ್ರೀಗಳ ಆರೋಗ್ಯಕ್ಕಾಗಿ ಉಪೇಂದ್ರ ಟೀಮ್ ಪ್ರಾರ್ಥನೆ
ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಜಿ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ಎಲ್ಲ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಈಗ ನಟ ಉಪೇಂದ್ರ ಸಹ ಶ್ರೀಗಳ ಒಬ್ಬ ಭಕ್ತರಾಗಿ ಅವರ ಆರೋಗ್ಯ ಸರಿ ಹೋಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದಾರೆ. ಶ್ರೀಗಳ ಅನಾರೋಗ್ಯದ ಹಿನ್ನಲೆಯಲ್ಲಿ ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮುಂದುಡಲಾಗಿದೆ.
ನಾಳೆ ದಾವಣಗೆರೆಯಲ್ಲಿ 'ಐ ಲವ್ ಯೂ' ಸಿನಿಮಾದ ಆಡಿಯೋ ಬಿಡುಗಡೆಯ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಶ್ರೀಗಳ ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ಕಾರ್ಯಕ್ರಮ ಮಾಡಿ ಸಂಭ್ರಮಿಸುವುದು ಸೂಕ್ತವಲ್ಲ ಎಂದು ಚಿತ್ರತಂಡ ಆ ಕಾರ್ಯಕ್ರಮವನ್ನು ಮುಂದುಡಿದೆ.

ನಟ ಉಪೇಂದ್ರ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಅಂದಹಾಗೆ, 'ಐ ಲವ್ ಯೂ' ಆಡಿಯೋ ಲಾಂಚ್ ಮುಂದುಡಿದ ದಿನಾಂಕ ಇನ್ನು ಬಹಿರಂಗ ಆಗಿಲ್ಲ.
'ಐ ಲವ್ ಯೂ' ನಟ ಉಪೇಂದ್ರ ಹಾಗೂ ರಚಿತಾ ರಾಮ್ ಜೋಡಿಯ ಹೊಸ ಸಿನಿಮಾ. ಆರ್ ಚಂದ್ರು ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. 'ಬ್ರಹ್ಮ' ಚಿತ್ರದ ಬಳಿಕ ಮತ್ತೆ ಉಪ್ಪಿ ಜೊತೆ ಆರ್ ಚಂದ್ರು ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











