ತೆಲುಗು ಚಿತ್ರಕ್ಕಾಗಿ ಬ್ರಹ್ಮಾಸ್ತ್ರ ಆಫರ್ ತಿರಸ್ಕರಿಸಿದ್ದ ತೆಲುಗು ನಟ; ಆ ತೆಲುಗು ಚಿತ್ರವೇ ಫ್ಲಾಪ್!
ಬ್ರಹ್ಮಾಸ್ತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಒಂದು ವಾರವನ್ನು ಪೂರೈಸಿದೆ. ಈ ಚಿತ್ರಕ್ಕೆ ಅಯಾನ್ ಮುಖರ್ಜಿ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಕೂಡ ಅಭಿನಯಿಸಿದ್ದಾರೆ. ಇನ್ನು ಬಾಲಿವುಡ್ನ ಕ್ಯೂಟ್ ಕಪಲ್ ರಣ್ಬೀರ್ ಕಪೂರ್ ಹಾಗೂ ಅಲಿಯಾ ಭಟ್ ಇದೇ ಮೊದಲ ಬಾರಿಗೆ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರ ಮೊದಲ ವಾರ 300 ಕೋಟಿ ಗಳಿಸಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಇನ್ನು ಈ ಚಿತ್ರ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳಲಾರಂಭಿಸಿದ ಬೆನ್ನಲ್ಲೇ ತೆಲುಗು ನಟನೋರ್ವ ತನಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸುವ ಆಫರ್ ಬಂದಿತ್ತು, ಆದರೆ ಆ ಸಮಯದಲ್ಲಿ ಬೇರೊಂದು ಸಿನಿಮಾದಲ್ಲಿ ಬ್ಯುಸಿ ಇದ್ದರಿಂದ ಈ ಆಫರ್ ಅನ್ನು ತಿರಸ್ಕರಿಸಿದ್ದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಹೌದು, ತೆಲುಗು ನಟ ಸುಧೀರ್ ಬಾಬು ಈ ಹೇಳಿಕೆಯನ್ನು ನೀಡಿದ್ದಾರೆ. ಬ್ರಹ್ಮಾಸ್ತ್ರ ಚಿತ್ರದಲ್ಲಿ ತಾನು ಮಾಡಬೇಕಿದ್ದ ರೋಲ್ ತುಂಬಾ ಚಾಲೆಂಜಿಂಗ್ ಆಗಿತ್ತು, ಆದರೆ ಆ ಸಮಯದಲ್ಲಿ ತಾನು ತೆಲುಗು ಸಿನಿಮಾ ಸಮ್ಮೋಹನಂ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಕಾರಣ ಬ್ರಹ್ಮಾಸ್ತ್ರದಲ್ಲಿ ನಟಿಸಲಾಗಲಿಲ್ಲ ಎಂದು ಕಾರಣ ನೀಡಿದ್ದಾರೆ.

ಅಂದಹಾಗೆ ಸುಧೀರ್ ಬಾಬು ಈ ಹಿಂದೆಯೇ ಬಾಲಿವುಡ್ ಪ್ರವೇಶಿಸಿದ್ದಾರೆ. 2016ರಲ್ಲಿ ಬಿಡುಗಡೆಗೊಂಡಿದ್ದ ಟೈಗರ್ ಶ್ರಾಫ್ ಅಭಿನಯದ ಭಾಗಿ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ಸುಧೀರ್ ಬಾಬು ಬಾಲಿವುಡ್ ಪ್ರವೇಶಿಸಿದ್ದರು. ಇನ್ನು ಸುಧೀರ್ ಬಾಬು ಈ ವಿಷಯವನ್ನು ಈ ವಾರ ಬಿಡುಗಡೆಗೊಂಡಿರುವ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಚಿತ್ರದ ಸಂದರ್ಶನದ ಸಮಯದಲ್ಲಿ ತಿಳಿಸಿದ್ದರು.
ಇನ್ನು ಸಮ್ಮೋಹನಂಗಾಗಿ ಸುಧೀರ್ ಬಾಬು ಬ್ರಹ್ಮಾಸ್ತ್ರ ಮಿಸ್ ಮಾಡಿಕೊಂಡೆ ಎಂದಿದ್ದಾರೆ. ಆದರೆ, ಸಮ್ಮೋಹನಂ ಚಿತ್ರ ನಿರೀಕ್ಷಿಸಿದ ಯಶಸ್ಸು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. 15 ಕೋಟಿ ಬಜೆಟ್ನಲ್ಲಿ ತಯಾರಾಗಿದ್ದ ಈ ಚಿತ್ರ 15.75 ಕೋಟಿ ಕಲೆಕ್ಷನ್ ಮಾಡಿತ್ತು.


Click it and Unblock the Notifications











