ಕೆಲಸ ಮಾಡ್ತಿದ್ದ ಕಂಪೆನಿಯಲ್ಲಿ ರಜೆ ಕೊಡಲ್ಲ ಅಂದಿದ್ದಕ್ಕೆ ರಾಜೀನಾಮೆ ನೀಡಿದ್ರು ಕ್ರಾಂತಿ 'ಪುಷ್ಟವತಿ'!
2022 ರೀತಿಯ ಅದ್ಭುತ ವರ್ಷವನ್ನು ಕಳೆದ ಚಂದನವನ ಅಂತಿಮವಾಗಿ ವೇದ ಹಾಗೂ ಪದವಿ ಪೂರ್ವ ಚಿತ್ರಗಳ ಬ್ಲಾಕ್ ಬಸ್ಟರ್ ವರದಿಯೊಂದಿಗೆ ಚಿತ್ರೀಕರಣ ಮುಗಿಸಿದೆ. ಇನ್ನು 2023ಕ್ಕೆ ಕಾಲಿಟ್ಟಿರುವ ಚಂದನವನದ ಪರ ಮೊದಲು ಬಿಡುಗಡೆಯಾಗಲಿರುವ ಸ್ಟಾರ್ ನಟರ ಚಿತ್ರವೆನಿಸಿಕೊಂಡಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರ. ಹೌದು, ಕ್ರಾಂತಿ ಚಿತ್ರ ಇದೇ ತಿಂಗಳ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬರಲಿದೆ.
ಇನ್ನು ಚಿತ್ರದ ಹೈಪ್ ಹೆಚ್ಚಿಸುವ ಸಲುವಾಗಿ ಕ್ರಾಂತಿ ಚಿತ್ರತಂಡ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದೆ. ಮೊದಲ ಮೂರು ಹಾಡುಗಳನ್ನು ರಾಜ್ಯದ ವಿವಿಧ ಮೂರು ಊರುಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಬಿಡುಗಡೆಗೊಳಿಸಲಾಗಿದೆ. ಚಿತ್ರದ ಮೂರನೇ ಹಾಡು 'ಶೇಕ್ ಇಟ್ ಪುಷ್ಪವತಿ'ಯನ್ನು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು.
ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಹಾಡು ದಿನ ಕಳೆದಂತೆ ಹಿಟ್ ಆಯಿತು. ಮೊದಲೆರಡು ಹಾಡುಗಳು ಮಾಡದಷ್ಟು ಸದ್ದನ್ನು ಈ ಹಾಡು ಮಾಡುತ್ತಿದೆ. ಸಾಮಾಜಿಕ ಜಾಲತಾಣದ ರೀಲ್ಸ್ಗಳಲ್ಲಿ ವೈರಲ್ ಆಗುತ್ತಿರುವ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಕನ್ನಡದ ಯುವ ನಟಿ ನಿಮಿಕಾ ರತ್ನಾಕರ್. ಸಾಮಾನ್ಯವಾಗಿ ಕನ್ನಡದ ಐಟಂ ಹಾಡುಗಳಿಗೆ ಹಿಂದಿ ಹಾಗೂ ಇತರೆ ನಟಿಯರನ್ನು ಕರೆತರಲಾಗುತ್ತದೆ. ಆದರೆ ಪುಷ್ಪವತಿ ಹಾಡಿಗೆ ಮಾತ್ರ ಕನ್ನಡತಿಯನ್ನೇ ಆರಿಸಿಕೊಂಡು ಗೆದ್ದಿದೆ ಕ್ರಾಂತಿ ಚಿತ್ರತಂಡ. ಹಾಡಿನಲ್ಲಿ ಹೆಜ್ಜೆ ಹಾಕಿ ವೈರಲ್ ಆಗಿರುವ ನಿಮಿಕಾ ರತ್ನಾಕರ್ ಯುಟ್ಯೂಬ್ ಸಂದರ್ಶನಗಳಲ್ಲಿ ಭಾಗವಹಿಸಿ ತಮ್ಮ ಬಗೆಗಿನ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಎಂಜಿನಿಯರ್ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದ ನಿಮಿಕಾ
ಇನ್ನು ನಿಮಿಕಾ ರತ್ನಾಕರ್ ಮಾಡೆಲ್ ಎಂಬುದು ಸದ್ಯ ಸಿನಿ ರಸಿಕರಿಗೆ ತಿಳಿದಿರುವ ವಿಷಯವೇ. ಆದರೆ ಮಾಡೆಲ್ ಆಗುವುದಕ್ಕೂ ಮುನ್ನ ನಿಮಿಕಾ ಖಾಸಗಿ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. 2017ರಲ್ಲಿ ನಡೆದ ಫ್ಯಾಷನ್ ಶೋ ಕಾಂಪಿಟಿಷನ್ನಲ್ಲಿ ಭಾಗವಹಿಸಿದ್ದ ನಿಮಿಕಾ ಗೆಲುವು ಕಂಡಿದ್ದರು. ಇದಾದ ಬಳಿಕ ಕೊರಿಯಾಗೆ ಹೋಗಬೇಕಾದ ಅನಿವಾರ್ಯ ನಿಮಿಕಾಗೆ ಎದುರಾಗಿತ್ತು. ಇದಕ್ಕಾಗಿ 22 ದಿನಗಳ ರಜೆ ಸಹ ನಿಮಿಕಾಗೆ ಅಗತ್ಯವಿತ್ತು. ಆದರೆ ಕಂಪೆನಿಯಲ್ಲಿ ರಜೆ ನೀಡಲಿಲ್ಲ ಹಾಗೂ ತಾನು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಕೊರಿಯಾಗೆ ಹಾರಿದ್ದೆ ಎಂದು ನಿಮಿಕಾ ರತ್ನಾಕರ್ ಹೇಳಿಕೊಂಡಿದ್ದಾರೆ.

ಕೊರಿಯಾದಿಂದ ಬಂದಮೇಲೆ ಕೈಯಲ್ಲಿ ಕೆಲಸ ಇಲ್ಲ
ಹೀಗೆ ರಜೆ ನೀಡದ ಕಾರಣ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಕೊರಿಯಾಗೆ ಹಾರಿದ್ದ ನಿಮಿಕಾ ಬೆಂಗಳೂರಿಗೆ ವಾಪಸ್ ಆದ ನಂತರ ಕೆಲಸವಿಲ್ಲದೇ, ಕೈನಲ್ಲಿ ಹಣವಿಲ್ಲದೇ ಏನು ಮಾಡಬೇಕು ಎಂದು ತಿಳಿಯದೇ ಚಿಂತೆಗೊಳಗಾಗಿದ್ದರಂತೆ. ಇದೇ ಸಮಯಕ್ಕೆ ರಾಮಧಾನ್ಯ ಎಂಬ ಚಿತ್ರದ ಆಫರ್ ನಿಮಿಕಾ ರತ್ನಾಕರ್ ಅವರನ್ನು ಹುಡುಕಿಕೊಂಡು ಬಂದಿತ್ತು. ಸಿಕ್ಕ ಅವಕಾಶವನ್ನು ಬಿಡದ ನಿಮಿಕಾ ರತ್ನಾಕರ್ ಈ ಚಿತ್ರದಲ್ಲಿ ನಟಿಸಿದರು ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ಅಬ್ಬರ ಚಿತ್ರದಲ್ಲೂ ಸಹ ನಟಿಸಿದರು. ಅಲ್ಲದೇ ತ್ರಿಶೂಲಂ ಎಂಬ ಚಿತ್ರದಲ್ಲಿಯೂ ಸಹ ನಿಮಿಕಾ ಬಣ್ಣ ಹಚ್ಚಿದ್ದಾರೆ.

ನಿಮಿಕಾ ಮೂಲತಃ ಮಂಗಳೂರಿನವರು
ಇನ್ನು ತಮ್ಮ ಫ್ಯಾಮಿಲಿ ಕುರಿತು ಮಾಹಿತಿ ಹಂಚಿಕೊಂಡ ನಿಮಿಕಾ ರತ್ನಾಕರ್ ತಾನು ಮೂಲತಃ ಮಂಗಳೂರಿನವಳು, ಅಪ್ಪ ಹಾಗೂ ಅಮ್ಮ ಮಂಗಳೂರಿನಲ್ಲಿಯೇ ಇದ್ದಾರೆ ಎಂದು ಹೇಳಿಕೊಂಡರು. ಅಪ್ಪ ಇಂಟೀರಿಯರ್ ಡಿಸೈನರ್ ಹಾಗೂ ಅಮ್ಮ ಗೃಹಿಣಿಯಾಗಿದ್ದಾರೆ ಎಂದ ನಿಮಿಕಾ ರತ್ನಾಕರ್ ತನ್ನ ಸೋದರ ಇಟಲಿಯಲ್ಲಿ ಆರ್ಕಿಟೆಕ್ಟ್ ಎಂದು ತಿಳಿಸಿದರು. ಇನ್ನು ತಮ್ಮ ತಂದೆ ಈ ಹಿಂದೆ ನಿರ್ಮಾಪಕ ಹಾಗೂ ನಿರ್ದೇಶಕನಾಗಿ 'ಅಣ್ಣಾಜಿ' ಎಂಬ ಚಿತ್ರವನ್ನು ಮಾಡಿದ್ದರು ಎಂದು ಸಹ ಹೇಳಿಕೊಂಡರು.


Click it and Unblock the Notifications











