ಕಬ್ಜ ಬಳಿಕ ದರ್ಶನ್ ಜತೆ ಪ್ಯಾನ್ ಇಂಡಿಯಾ ಸಿನಿಮಾ; ಆರ್ ಚಂದ್ರು ಹೇಳಿದ್ದಿಷ್ಟು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಓರ್ವರು. ದರ್ಶನ್ ನಟನೆಯ ಚಿತ್ರಕ್ಕೆ ಬಂಡವಾಳ ಹೂಡಿದರೆ ನಷ್ಟವಿಲ್ಲ ಎಂಬುದನ್ನು ಅರಿತಿರುವ ನಿರ್ಮಾಪಕರು ದರ್ಶನ್ ಕಾಲ್ಶೀಟ್ಗಾಗಿ ಕಾದು ಕುಳಿತಿರುತ್ತಾರೆ. ಇನ್ನು ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಿರ್ದೇಶಕನಿಗೂ ದರ್ಶನ್ ಅವರಿಗೆ ಒಮ್ಮೆಯಾದರೂ ಆಕ್ಷನ್ ಕಟ್ ಹೇಳಬೇಕೆಂಬ ಬಯಕೆ ಇದ್ದೇ ಇರುತ್ತದೆ.
ನಟ ದರ್ಶನ್ ಸಹ ವಿಭಿನ್ನ ನಿರ್ದೇಶಕರ ಜತೆ ಕೆಲಸ ಮಾಡುತ್ತಾ ಯಶಸ್ವಿ ಸಿನಿ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ದರ್ಶನ್ ಇನ್ನೂ ಸಹ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ, ಯಾವುದಾದರೂ ಓರ್ವ ನಿರ್ದೇಶಕ ನಮ್ಮ ನಟನಿಗೆ ಪ್ಯಾನ್ ಇಂಡಿಯಾ ಮಟ್ಟದ ಕಥೆ ಬರೆದು ನಿರ್ದೇಶಿಸಬೇಕು ಎಂಬುದು ಹಲವು ದರ್ಶನ್ ಅಭಿಮಾನಿಗಳ ಆಸೆ ಕೂಡ.
ಇದೀಗ ತಮ್ಮ ಮುಂದಿನ ಚಿತ್ರವನ್ನು ನಿರ್ದೇಶಕ ತರುಣ್ ಸುಧೀರ್ ಜತೆ ಮಾಡಲಿರುವ ದರ್ಶನ್ ಅದಾದ ಬಳಿಕ ಯಾರ ಜತೆ ಚಿತ್ರ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಹೀಗಿರುವಾಗಲೇ ಸದ್ಯ ಕಬ್ಜ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಆರ್ ಚಂದ್ರು ದರ್ಶನ್ ಅವರ ಜತೆ ಸಿನಿಮಾ ಮಾಡುವ ಕುರಿತಾಗಿ ಮಾಧ್ಯಮಗಳ ಜತೆ ಮಾತನಾಡುವಾಗ ಪ್ರತಿಕ್ರಿಯಿಸಿದ್ದು, ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೂ ಕಾರಣವಾಗಿದೆ.

ದರ್ಶನ್ ಜತೆ ಸಿನಿಮಾ ಮಾಡುವ ಬಗ್ಗೆ ಹೇಳಿಕೆ
ನಿನ್ನೆ ( ಫೆಬ್ರವರಿ 7 ) ನಿರ್ದೇಶಕ ಆರ್ ಚಂದ್ರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಕಬ್ಜ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿ ಇರುವ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಅದ್ದೂರಿಯಾಗಿಯೇ ಆಚರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಅವರಿಗೆ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಕಬ್ಜ ಚಿತ್ರದ ಅಪ್ಡೇಟ್ ಏನಾದರೂ ಇರಲಿದೆಯಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಆರ್ ಚಂದ್ರು ದರ್ಶನ್ ಅವರ ಜತೆ ಒಡನಾಟ ಚೆನ್ನಾಗಿದೆ, ಖಂಡಿತ ನಾನೂ ಸಹ ದರ್ಶನ್ ಅವರಿಗೆ ಸಿನಿಮಾ ತೋರಿಸಬೇಕು, ಅವರಿಗೂ ಸಹ ಸಿನಿಮಾ ಮಾಡಬೇಕು, ಯಾರಿಗೆ ಆಸೆ ಇರುವುದಿಲ್ಲ ಹೇಳಿ ಎಂದರು. ಇದೇ ವೇಳೆ ಮುಂದಿನ ಸಿನಿಮಾವನ್ನು ದರ್ಶನ್ ಅವರ ಜತೆ ನಿರೀಕ್ಷಿಸಬಹುದಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕುತ್ತರಿಸಿದ ಚಂದ್ರು ಯಾಕಾಗಬಾರದು, ಎಲ್ಲರೂ ಫ್ಯಾನ್ಸ್ ಅಲ್ವಾ, ಎಲ್ರೂ ಒಟ್ಟಿಗೆ ಕೆಲಸ ಮಾಡಿದ್ದೇವೆ, ಇಂಡಸ್ಟ್ರಿಯಲ್ಲಿ ಯಾರೇ ಆಗಲಿ ನನಗಿಷ್ಟ ಎಂದೂ ಸಹ ಚಂದ್ರು ತಿಳಿಸಿದರು.

ಚಿತ್ರದಲ್ಲಿ ಶಿವಣ್ಣ ಇರುತ್ತಾರಾ?
ಇನ್ನು ಸದ್ಯ ಕಬ್ಜ ಚಿತ್ರದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಹರಿದಾಡುತ್ತಿರುವ ವಿಷಯವೆಂದರೆ ಚಿತ್ರದಲ್ಲಿ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಜತೆಗೆ ನಟ ಶಿವ ರಾಜ್ಕುಮಾರ್ ಸಹ ಇರಲಿದ್ದಾರಾ ಎಂಬುದು. ಹೌದು, ಪ್ರಿಯಾಂಕಾ ಉಪೇಂದ್ರ ಅವರು ಮಾಧ್ಯಮದ ಜತೆ ಮಾತನಾಡುವಾಗ ಚಿತ್ರದಲ್ಲಿ ಶಿವ ರಾಜ್ಕುಮಾರ್ ಸಹ ಇರಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಆರ್ ಚಂದ್ರು ಈಗಲೇ ಈ ಕುರಿತು ಯಾವುದೇ ಮಾಹಿತಿಯನ್ನು ನಾನು ಬಿಟ್ಟುಕೊಡುವುದಿಲ್ಲ, ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ, ಇನ್ನೂ ಹಲವಾರು ಕಲಾವಿದರನ್ನು ನೋಡಿ ಇವರೆಲ್ಲಾ ಚಿತ್ರದಲ್ಲಿ ಇದ್ದಾರಾ ಎಂದು ಆಶ್ಚರ್ಯಪಡ್ತೀರ ಎಂದು ಹೇಳಿದರು.

ಫೆಬ್ರವರಿ 16ಕ್ಕೆ ಮುಂದಿನ ಹಾಡು
ಮೊನ್ನೆಯಷ್ಟೇ ಕಬ್ಜ ಚಿತ್ರತಂಡ ತನ್ನ ಮೊದಲ ಹಾಡನ್ನು ಹೈದರಾಬಾದ್ನಲ್ಲಿ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಟೈಟಲ್ ಹಾಡನ್ನು ಮೊದಲಿಗೆ ಬಿಡುಗಡೆ ಮಾಡಿದ್ದ ಚಿತ್ರತಂಡ ತನ್ನ ಎರಡನೇ ಹಾಡನ್ನು ಫೆಬ್ರವರಿ 16ರಂದು ಬಿಡುಗಡೆ ಮಾಡಲಿದೆ. ಇದೇ ದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವೂ ಸಹ ಇದೆ.


Click it and Unblock the Notifications











