'ದತ್ತ', 'ನಿನಗೋಸ್ಕರ', ಮತ್ತು 'ಗಜ' ಚಿತ್ರಕ್ಕೆ ದರ್ಶನ್ಗೆ ಸಿಕ್ಕ ಸಂಭಾವನೆ ಎಷ್ಟು ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ನಡೆದು ಬಂದ ಹಾದಿಯಲ್ಲಿ ಹೂವುಗಳಿಗಿಂತ ಕಲ್ಲುಗಳಿದ್ದಿದ್ದೇ ಹೆಚ್ಚು.ಅವಮಾನವನ್ನೇದುರಿಸಿ ಆ ನಂತರ ಸನ್ಮಾನವನ್ನೂ ಸ್ವೀಕರಿಸಿ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳನ್ನು ಸಂಪಾದಿಸಿದವರು ದರ್ಶನ್.
ಇಂಥಾ ದರ್ಶನ್ ಕುರಿತು ಕೋಮಲ್ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ದರ್ಶನ್ ಬದುಕಿನಲ್ಲಿ ಸಾಧಿಸಿದ ಪ್ರಗತಿಯ ಕುರಿತು ಮಾತನಾಡಿದ್ದಾರೆ. ಹೌದು, ಗ್ಯಾರಂಟಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೋಮಲ್ ನಾನು ದರ್ಶನ್ ಅವರನ್ನು ಮೊದಲು ಭೇಟಿ ಮಾಡಿದ್ದು ಹರಿಶ್ಚಂದ್ರ ಚಿತ್ರದ ಸಮಯದಲ್ಲಿ ಎಂದಿದ್ದಾರೆ. ಆ ಚಿತ್ರದಲ್ಲಿ ಮೋಹನ್ ಮತ್ತು ನಾರಾಯಣ್ ಅವರು ಹೀರೋ ಆದರೆ ದರ್ಶನ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೇ ನನ್ನದು ಹಾಸ್ಯ ಪಾತ್ರ ಎಂದಿರುವ ಕೋಮಲ್ ನಾವು ಇಬ್ಬರು ದುಡ್ಡು ಕೇಳೋಕೆ ಹೋದಾಗ ನೀನು ಮೊದಲು ಹೋಗಿ ಬಾ ನಾನು ಮೈಸೂರಿಗೆ ಹೋಗಬೇಕು ಎಂದು ದರ್ಶನ್ ನನಗೆ ಹೇಳಿದ್ದರು ಎಂದಿದ್ದಾರೆ.

ಮುಂದುವರೆದು ಹೀಗಾಗಿ ನಾನು ಮೇಲೆ ಹೋದೆ ಆಗ ನಿರ್ಮಾಪಕ ಬಿಎನ್ ಗಂಗಾಧರ್ ಅವರು ನನಗೆ ₹4900 ಕೊಟ್ಟರು. ಆ ನಂತರ ಇಲ್ಲೇ ಇರುವ ಕಾಫಿ ಕುಡಿಯೋಣ ಅಂತೇಳಿ ಅವರು ಹೋದರು ಅವರಿಗೆ ₹2900 ಕೊಟ್ಟರು ಎಂದಿರುವ ಕೋಮಲ್, ಆ ನಂತರ ಆಚೆ ಬಂದು ನನ್ನ ಕೇಳಿದರು. ನಾನು ₹4900 ಎಂದೆ ಅದಕ್ಕೆ ಅವರು ನೋಡು ನೀನು ಬೆಂಗಳೂರಿನಲ್ಲಿ ಇರ್ತಿಯಾ ನಿನಗೆ ₹4900 ಕೊಟ್ಟರು ನಾನು ಮೈಸೂರಿಂದ ಬರೋದು ನನಗೆ ₹2900 ಕೊಟ್ಟಿದಾರೆ ಎಂದರು ಎಂದು ಹೇಳಿದ್ದಾರೆ. ದರ್ಶನ್ ಅವರಾಡಿದ ಈ ಮಾತಿಗೆ ಹೇ ಬಾ ಗುರು ಪರವಾಗಿಲ್ಲ ಮುಂದೆ ಬರುತ್ತೆ ನಿನಗೆ ಇದಕ್ಕಿಂತ ಜಾಸ್ತಿನೇ ಬರುತ್ತೆ ಎಂದು ಹೇಳಿದೆ ಆ ನಂತರ ಇಬ್ಬರು ಕಾಫಿ ಕುಡಿದು ಅಲ್ಲಿಂದ ತೆರಳಿದೆವು ಎಂದು ಹೇಳಿದ್ದಾರೆ.
ಇದಾದ ನಂತರ ನಿನಗೋಸ್ಕರ ಚಿತ್ರದ ಸಮಯದಲ್ಲಿ ಮತ್ತೆ ಭೇಟಿ ಮಾಡಿದ್ವಿ ಅವಾಗ ಅವರಿಗೆ ₹3ಲಕ್ಷ ಕೊಡ್ತಿದ್ದರು ನನಗೆ ₹21,000 ಕೊಟ್ಟಿದ್ದರು. ಇದಾದ ನಂತರ ಮತ್ತೆ ದತ್ತ ಚಿತ್ರ ಇಬ್ಬರು ಮಾಡಿದ್ವಿ ಆಗ ಅವರಿಗೆ ₹36 ಲಕ್ಷ ಕೊಡ್ತಿದ್ದರು ನನಗೆ ₹3 ಲಕ್ಷ ಕೊಡ್ತಿದ್ದರು ಎಂದಿರುವ ಕೋಮಲ್ ಗಜ ಚಿತ್ರದ ಸಮಯದಲ್ಲಿ ಅವರು ದಾಟಿಕೊಂಡು ಹೋಗ್ಬಿಟ್ರು ನನಗೂ ಒಳ್ಳೆ ಸಂಭಾವನೆಯನ್ನೇ ಆ ಚಿತ್ರದ ನಿರ್ಮಾಪಕ ಸುರೇಶ್ ಗೌಡ್ರು ಕೊಟ್ಟರು ಎಂದು ಹೇಳಿದ್ದಾರೆ. ದರ್ಶನ್ ಜೊತೆ ತಮ್ಮ ಒಡನಾಟವನ್ನು ಈ ಮೂಲಕ ಕೋಮಲ್ ನೆನಪು ಮಾಡಿಕೊಂಡಿದ್ದಾರೆ.
ಇನ್ನೂ ಇದೇ ಸಂದರ್ಶನದಲ್ಲಿ ದರ್ಶನ್ ಜೈಲು ಪಾಲಾಗಿರುವ ವಿಚಾರದ ಕುರಿತು ಕೂಡ ಪ್ರತಿಕ್ರಿಯೆಯನ್ನು ನೀಡಿರುವ ಕೋಮಲ್ ಎಲ್ಲದಕ್ಕೂ ಗ್ರಹಗತಿ ಕಾರಣ ಎಂದು ಹೇಳಿದ್ದಾರೆ. ಕತ್ತಲಾದ ಮೇಲೆ ಬೆಳಕು ಆಗ್ಲೇಬೇಕು ಎಂದಿದ್ದಾರೆ. ಯಾವುದೋ ಗ್ರಹತಿಗಳಿಂದ ಅವರಿಗೆ ತೊಂದರೆಯಾಗಿರಬಹುದು ಒಂದು ಕಾಲಾವಧಿಯ ನಂತರ ಅವರ ಬದುಕಿನಲ್ಲಿ ಕೂಡ ಮತ್ತೆ ಬೆಳಕು ಬರುತ್ತೆ ಎಂದು ಕೂಡ ಕೋಮಲ್ ಹೇಳಿದ್ದಾರೆ. ಅಂದ್ಹಾಗೇ ಅವತ್ತು ಕೇವಲ ₹2900 ಸಂಭಾವನೆ ಪಡೆದಿದ್ದ ದರ್ಶನ್ ಇವತ್ತು ಡೆವಿಲ್ ಚಿತ್ರಕ್ಕೆ 22 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ.


Click it and Unblock the Notifications











