'ಉತ್ತರಕಾಂಡ'ದಿಂದ ಹೊರ ನಡೆದ ರಮ್ಯಾ; ಶಾಕ್ ಕೊಟ್ಟ ಮೋಹಕ ತಾರೆ ಹೇಳಿದ್ದೇನು?
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 'ಉತ್ತರಕಾಂಡ' ಚಿತ್ರದಿಂದ ಹೊರ ಬಂದಿರುವುದಾಗಿ ಘೋಷಿಸಿದ್ದಾರೆ. ಕೆಆರ್ಜಿ ಬ್ಯಾನರ್ನಲ್ಲಿ ಧನಂಜಯ್ ನಟನೆಯ 'ಉತ್ತರಕಾಂಡ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ಸಹ ಕಲಾವಿದರ ಆಯ್ಕೆಗೆ ಚಿತ್ರತಂಡ ಆಡಿಷನ್ ಕೂಡ ಕರೆದಿತ್ತು. ಇದೆಲ್ಲದರ ನಡುವೆ ರಮ್ಯಾ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಈ ಹಿಂದೆ ತಮ್ಮದೇ 'ಸ್ವಾತಿ ಮುತ್ತಿನ ಮಳೆಹನಿಯೇ' ಚಿತ್ರದಿಂದಲೂ ರಮ್ಯಾ ಹೊರ ಬಂದಿದ್ದರು. ಆದರೆ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಮೊದಲಿಗೆ ನಟಿಸುವುದಾಗಿ ಒಪ್ಪಿದ್ದ ಮೋಹಕ ತಾರೆ ಬಳಿಕ ಸಾಧ್ಯವಿಲ್ಲ ಎಂದಿದ್ದರು. ನಂತರ ಸಿರಿ ರವಿಕುಮಾರ್ ಆ ಪಾತ್ರವನ್ನು ನಿಭಾಯಿಸಿದ್ದರು. ರಮ್ಯಾ ಚಿತ್ರದಲ್ಲಿ ನಟಿಸಲ್ಲ ಎಂದಿದ್ದರ ಬಗ್ಗೆ ರಾಜ್. ಬಿ ಶೆಟ್ಟಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದರು. ನವೆಂಬರ್ನಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು.

'ಉತ್ತರಕಾಂಡ' ಚಿತ್ರದಿಂದ ನಟಿ ರಮ್ಯಾ ಹೊರ ಬರುತ್ತಾರೆ ಎಂದು ಬಹಳ ಹಿಂದೆಯೇ ಫಿಲ್ಮಿಬೀಟ್ ವರದಿ ಮಾಡಿತ್ತು. ಇದೀಗ ಖುದ್ದು ರಮ್ಯಾ ಈ ವಿಚಾರವನ್ನು ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ಡೇಟ್ಸ್ ಇಲ್ಲದ ಕಾರಣ ನಾನು 'ಉತ್ತರಕಾಂಡ' ಚಿತ್ರದಲ್ಲಿ ಕೆಲಸ ಮಾಡುತ್ತಿಲ್ಲ. (ಸಿನಿಮಾ ಹಾಗೂ ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ನಿಲ್ಲಿಸಿದ್ದೇನೆ) ಚಿತ್ರತಂಡಕ್ಕೆ ಶುಭವಾಗಲಿ" ಎಂದು ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
9 ವರ್ಷಗಳಿಂದ ನಟಿ ರಮ್ಯಾ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. 2016ರಲ್ಲಿ ಬಂದಿದ್ದ 'ನಾಗರಹಾವು' ಆಕೆ ಬಣ್ಣ ಹಚ್ಚಿದ ಕೊನೆಯ ಸಿನಿಮಾ. ಆ ಬಳಿಕ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದು ಸಂಸದೆ ಆಗಿದ್ದರು. ಬಳಿಕ ಸೋತು ದೆಹಲಿ ಸೇರಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಹಲವು ದಿನಗಳ ಕಾಲ ಕೆಲಸ ಮಾಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ಅಜ್ಞಾತಕ್ಕೆ ತೆರಳಿದ್ದರು.
ಬಹಳ ದಿನಗಳ ಕಾಲ ಸಿನಿಮಾ ಹಾಗೂ ರಾಜಕೀಯರಂಗದಿಂದ ದೂರವೇ ಉಳಿದಿದ್ದರು. ಕೊನೆಗೆ ಮತ್ತೆ ಚಿತ್ರರಂಗದ ಕಾಣಿಸಿಕೊಳ್ಳು ಆರಂಭಿಸಿದ್ದರು. 'ಹೊಯ್ಸಳ' ಸಿನಿಮಾ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದರು. '777 ಚಾರ್ಲಿ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. 'ರತ್ನನ್ ಪ್ರಪಂಚ' ಸಿನಿಮಾ ನೋಡಿ ಬಹಳ ಇಷ್ಟಪಟ್ಟು ಚಿತ್ರತಂಡವನ್ನು ಅಭಿನಂದಿಸಿದ್ದರು.
'ರತ್ನನ್ ಪ್ರಪಂಚ' ಕಾಂಬಿನೇಷನ್ನಲ್ಲಿ 'ಉತ್ತರಕಾಂಡ' ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ಧನಂಜಯ್ ಜೊತೆ ನಟಿಸಲು ರಮ್ಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕೂಡ ಭಾಗಿ ಆಗಿದ್ದರು. ಮಂಡ್ಯದಲ್ಲಿ ಕೊನೆಯದಾಗಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು. ಬಳಿಕ ದೂರದ ಡೆನ್ಮಾರ್ಕ್ ಸೇರಿಕೊಂಡಿದ್ದರು.

ಮೋಹಕತಾರೆ ಚಿತ್ರರಂಗದಲ್ಲಿ ಕಂಬ್ಯಾಕ್ ಮಾಡಲು ದೇಹದ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕೆ ಡೆನ್ಮಾರ್ಕ್ನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡುತ್ತಿದ್ದರು. ಇದೀಗ ದಿಢೀರನೇ 'ಉತ್ತರಕಾಂಡ' ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಕೂಡ ನಟಿಸುತ್ತಾರೆ ಎನ್ನಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಚಿತ್ರದ ಪೋಸ್ಟರ್, ಟೀಸರ್ ಕೂಡ ರಿಲೀಸ್ ಆಗಿ ಹಿಟ್ ಆಗಿದೆ.


Click it and Unblock the Notifications











