ಕ್ರೂರ ಹಂತಕ ವೀರಪ್ಪನ್ ಮತ್ತೆ ಹುಟ್ಟಿಬಂದರೆ ಹೆಂಗಿರತ್ತೆ?
ಮಹಾಶರಣ ಹರಳಯ್ಯ, ಅಮ್ಮ ಬಾಗಮ್ಮ, ಪಗಡೆಯಂಥ ಭಕ್ತಿಪ್ರಧಾನ ಹಾಗೂ ಸಾಮಾಜಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಓಂಕಾರ್ ಪುರುಷೋತ್ತಮ್ ಈಗ ಮತ್ತೊಂದು ಮನರಂಜನಾತ್ಮಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ಮತ್ತೆ ಬಂದ ವೀರಪ್ಪನ್' ಎಂಬ ಹೆಸರಿನ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.
ಈ ಹಿಂದೆ ಪಗಡೆ ಚಿತ್ರವನ್ನು ನಿರ್ಮಿಸಿದ್ದ ಎಚ್.ವಿ.ಅಣ್ಣಪ್ಪ ಹಾಗೂ ಅವರ ಸ್ನೇಹಿತರಾದ ಸೋಮಶೇಖರ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕ ಪುರುಷೋತ್ತಮ್ ಅವರ ನಿರ್ದೇಶನದ 13ನೇ ಚಿತ್ರ ಇದಾಗಿದ್ದು ಪಗಡೆ ನಂತರ ನಿರ್ದೇಶಿಸುತ್ತಿರುವ 2ನೇ ಕಮರ್ಷಿಯಲ್ ಚಿತ್ರ ಕೂಡ ಇದಾಗಿದೆ. ಅವರ ಉಳಿದ 11 ಚಿತ್ರಗಳಲ್ಲಿ ಭಕ್ತಿರಸವೇ ಪ್ರಧಾನವಾಗಿತ್ತು.[ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!]

ಅದ್ದೂರಿಯಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಸಚಿವ ಎಚ್.ಆಂಜನೇಯ ಅವರು ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಆದಿಚುಂಚನಗಿರಿ ಶಾಖಾಮಠದ ಚಂದ್ರಶೇಖರ ಸ್ವಾಮೀಜಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಕಾಡುಗಳ್ಳ, ನರಹಂತಕ ವೀರಪ್ಪನ್ ಕಥೆಯನ್ನಾಧರಿಸಿ ಈಗಾಗಲೇ ಹಲವಾರು ಚಿತ್ರಗಳು ನಿರ್ಮಾಣವಾಗಿವೆ. ಹಾಗಂತ ಆ ಚಿತ್ರಗಳ ಸಾಲಿಗೆ ಇದೂ ಕೂಡ ಸೇರಲಿದೆ ಎಂದು ತಿಳಿದರೆ ಅದು ತಪ್ಪು ಕಲ್ಪನೆಯಾಗಲಿದೆ. ಅಂಥ ಒಬ್ಬ ಕ್ರೂರ ಹಂತಕ ಮತ್ತೆ ಹುಟ್ಟಿಬಂದರೆ ಹೇಗಿರಬಹುದೆಂಬುದನ್ನು ಊಹಿಸಿಕೊಂಡು ಸ್ವಲ್ಪ ಹಾಸ್ಯಮಿಶ್ರಿತವಾಗಿ ಈ ಕಥಾಹಂದರವನ್ನು ನಿರ್ದೇಶಕ ಪುರುಷೋತ್ತಮ್ ಅವರು ರಚಿಸಿಕೊಂಡಿದ್ದಾರೆ.[ಬಂದ..ಬಂದ..ನೋಡಿ ಹೊಸ ವೀರಪ್ಪನ್..]
ನಿರ್ಮಾಪಕ ಅಣ್ಣಪ್ಪ ಅವರು ಬರೆದ ಕಥೆಗೆ ಚಿತ್ರಕಥೆ, ಸಂಭಾಷಣೆ ಮಾಡಿಕೊಂಡಿರುವ ನಿರ್ದೇಶಕರು ವೀರಪ್ಪನ್ ಪಾತ್ರವನ್ನು ನಿರ್ಮಾಪಕ ಅಣ್ಣಪ್ಪ ಅವರಿಂದಲೇ ಮಾಡಿಸುತ್ತಿದ್ದಾರೆ. ಚಿತ್ರರಂಗದಲ್ಲೇ ಮೊದಲೆನ್ನಬಹುದಾದ 4 ಐಟಂ ಹಾಡುಗಳನ್ನು ಈ ಚಿತ್ರ ಒಳಗೊಂಡಿದೆ. ಒಂದು ಡ್ಯುಯೆಟ್ ಹಾಡನ್ನು ಪತ್ರಕರ್ತರಾದ ವಿಜಯ್ ಭರಮಸಾಗರ ಅವರು ರಚಿಸಿದ್ದಾರೆ.

ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪುರುಷೋತ್ತಮ್, ವೀರಪ್ಪನ್ ಸತ್ತ ನಂತರ ನಡೆಯುವ ಕಾಲ್ಪನಿಕ ಕಥೆಯಿದು. ಆತ ಮತ್ತೆ ಹುಟ್ಟಿಬಂದರೆ ಸಮಾಜದಲ್ಲಿ ಯಾವ ರೀತಿ ಬದುಕಬಲ್ಲ ಎಂದು ತೋರಿಸುವ ಪ್ರಯತ್ನ ಮಾಡಿದ್ದೇವೆ. ಒಬ್ಬ ಮನುಷ್ಯನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಅದನ್ನು ತಿದ್ದಿಕೊಂಡಾಗ ಸಮಾಜ ಅದನ್ನು ಒಪ್ಪಬೇಕು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ಹೇಳಿದ್ದೇವೆ ಎಂದರು.[ಕಾಡುಗಳ್ಳ ವೀರಪ್ಪನ್ ದೆವ್ವ ಆಗಿದ್ದಾನೆ..!]
ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ 10 ದಿನ ಚಿತ್ರೀಕರಿಸಿ ನಂತರ ಜೋಗ್ ಫಾಲ್ಸ್, ಊಟಿ, ಮಲೆಮಾದೇಶ್ವರ ಬೆಟ್ಟದ ಕಾಡಿನಲ್ಲಿ 25 ದಿನಗಳ ಕಾಲ ಕಾಡಿನ ಎಪಿಸೋಡ್ ಚಿತ್ರೀಕರಿಸುವುದಾಗಿ ಅವರು ಹೇಳಿಕೊಂಡರು. ನಿವೃತ್ತ ಪೋಲೀಸ್ ಅಧಿಕಾರಿ ಶಂಕರ ಬಿದರಿ ಅವರು ಡಿಸಿಪಿ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕಿಯಾಗಿ ದೀಪಾಗೌಡ, ಮುಖ್ಯಮಂತ್ರಿ ಚಂದ್ರು, ತಬಲಾನಾಣಿ, ಗಣೇಶ್ರಾವ್, ಟೆನ್ನಿಸ್ಕೃಷ್ಣ ಉಳಿದ ತಾರಾಗಣದಲ್ಲಿದ್ದಾರೆ.


Click it and Unblock the Notifications











