ಅವತ್ತು ರಶ್ಮಿಕಾ ಮಂದಣ್ಣ ಮಾಡಿದ್ದು ತಪ್ಪು ಅಂದ್ರೆ, ಮೊನ್ನೆ ರಿಷಬ್ ಶೆಟ್ಟಿ ಮಾಡಿದ್ದು ಸರೀನಾ?
ಸೋಲು ಮಾತ್ರವಲ್ಲ ಗೆಲುವು ಕೂಡ ವ್ಯಕ್ತಿಗಳ ನಡುವೆ ಕಂದಕ ಏರ್ಪಡಲು ಕಾರಣವಾಗಿಬಿಡುತ್ತದೆ. ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ 'ಕಾಂತಾರ' ಸರಣಿ ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿ ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಆದರೆ ಈಗ ಹೊಂಬಾಳೆ ಹಾಗೂ ರಿಷಬ್ ನಡುವೆ ಬಿರುಕು ಮೂಡಿದೆ. ಅದು ಜಗಜ್ಜಾಹೀರಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹೊಂಬಾಳೆ ಫಿಲ್ಮ್ಸ್ ಅನ್ನು ರಿಷಬ್ ಶೆಟ್ಟಿ ಅನ್ಫಾಲೋ ಮಾಡಿದ್ದಾರೆ. ಈ ವೈಮಸ್ಸಿನ ವಿಚಾರವನ್ನು ರಿಷಬ್ ಆಪ್ತ ಸ್ನೇಹಿತ ಪ್ರಮೋದ್ ಶೆಟ್ಟಿ ಕೂಡ ಖಚಿತಪಡಿಸಿದ್ದಾರೆ.
ಈಗೋ ಕಾರಣಕ್ಕೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ತಿಕ್ಕಾಟ ನಡೆದಿದೆ ಎನ್ನಲಾಗ್ತಿದೆ. ರಿಷಬ್ ಶೆಟ್ಟಿ ಇಲ್ಲದೇ ಹೇಗೆ 'ಕಾಂತಾರ' ಸಿನಿಮಾ ಆಗುತ್ತಿರಲಿಲ್ಲವೋ ಅದೇ ರೀತಿ ವಿಜಯ್ ಕಿರಗಂದೂರ್ ಇಲ್ಲದೇ ಈ ಕಥೆ ತೆರೆಮೇಲೆ ಬರುತ್ತಿರಲಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ರಿಷಬ್ ಶೆಟ್ಟಿ ಹೇಳಿದ 'ಕಾಂತಾರ' ಕಥೆಯನ್ನು ಒಪ್ಪಿ 15 ಕೋಟಿ ರೂ. ಬಂಡವಾಳ ಹಾಕಿ ಸಿನಿಮಾ ಮಾಡಲು ಹೊಂಬಾಳೆ ಫಿಲ್ಮ್ಸ್ ಮುಂದೆ ಬಂದಿತ್ತು. ಇದು ಅಷ್ಟು ಸುಲಭದ ನಿರ್ಧಾರ ಖಂಡಿತ ಅಲ್ಲ. ರಿಷಬ್ ಕೂಡ ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಹೇಳಿದ್ದಾರೆ. ಅಲ್ಲಿಗೆ ರಿಷಬ್ ಹೊಂಬಾಳೆ ಸಂಸ್ಥೆಯನ್ನು ಕಡೆಗಣಿಸುವುದರಲ್ಲಿ ಅರ್ಥವೇ ಇಲ್ಲ.

ರಿಷಬ್ ಹಾಗೂ ಹೊಂಬಾಳೆ ನಡುವೆ ಈಗ ಎಲ್ಲವೂ ಸರಿಯಿಲ್ಲ ಎನ್ನುವುದು ನಿಜ. ಆದರೆ ಕೊನೆ ಪಕ್ಷ ಸಂಸ್ಥೆಯ ಹೆಸರು ಹೇಳಲು ರಿಷಬ್ ಹಿಂದು ಮುಂದು ನೋಡುತ್ತಾರೆ ಅಂದ್ರೆ ಅಚ್ಚರಿಯೇ ಸರಿ. ಮೊನ್ನೆ ಮೊನ್ನೆ 'ಚಂದನವನ ಫಿಲ್ಮ್ ಕ್ರಿಟಿಕ್ ಅವಾರ್ಡ್' ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ ಸೇರಿ 9 ವಿಭಾಗಗಳಲ್ಲಿ 'ಕಾಂತಾರ- 1' ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿತ್ತು. ಎರಡು ಬಾರಿ ಪ್ರಶಸ್ತಿ ಸ್ವೀಕರಿಸಲು ರಿಷಬ್ ವೇದಿಕೆ ಏರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ವೇಳೆ ಅಪ್ಪಿ ತಪ್ಪಿ ಕೂಡ ಹೊಂಬಾಳೆ ಫಿಲ್ಮ್ಸ್ ಅಥವಾ ನಿರ್ಮಾಪಕ ವಿಜಯ್ ಕಿರಗಂದರೂರ್ ಬಗ್ಗೆ ಒಂದೇ ಒಂದು ಮಾತು ಆಡಲಿಲ್ಲ.
ಮಾತು ಆಡುವುದು ಇರಲಿ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೆಸರನ್ನು ಕೂಡ ಪ್ರಸ್ತಾಪಿಸಲು ರಿಷಬ್ ಶೆಟ್ಟಿ ಹಿಂದೇಟು ಹಾಕಿದ್ದು ಸ್ಪಷ್ಟವಾಗಿ ಕಂಡುಬಂತು. ಅತ್ಯುತ್ತಮ ಚಿತ್ರ ಪ್ರಶಸ್ತಿ ಸ್ವೀಕರಿಸಲು ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಯಾರೊಬ್ಬರು ಬಂದಿರಲಿಲ್ಲ. ರಿಷಬ್ ಶೆಟ್ಟಿ ಮುಖಾಮುಖಿ ಬೇಡ ಎನ್ನುವ ಕಾರಣಕ್ಕೋ ಏನೋ ಈ ರೀತಿ ಮಾಡಿದ್ದರು ಅನ್ನಿಸುತ್ತದೆ. ಹಾಗಾಗಿ ಆಯೋಜಕರ ಒತ್ತಾಯದ ಮೇರೆಗೆ ಸ್ವತಃ ರಿಷಬ್ ಶೆಟ್ಟಿ ವೇದಿಕೆ ಏರಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಸ್ವೀಕರಿಸುವಂತಾಯಿತು.

ಎರಡು ಬಾರಿ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದಾಗ ಹೊಂಬಾಳೆ ಫಿಲ್ಮ್ಸ್ ಬಗ್ಗೆ ರಿಷಬ್ ಒಂದು ಪದವೂ ಮಾತನಾಡಲಿಲ್ಲ. ಕೊನೆಗೆ ಅತ್ಯುತ್ತಮ ಪ್ರಶಸ್ತಿ ಸ್ವೀಕರಿಸಿ ತಾವು ಮಾತನಾಡುವ ಬದಲು ಅಲ್ಲಿದ್ದ ತಂಡದ ಸದಸ್ಯರನ್ನು ವೇದಿಕೆಗೆ ಕರೆದು ಮಾತನಾಡಲು ಹೇಳಿದ್ದರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ ಹೊಂಬಾಳೆ ಹಾಗೂ ವಿಜಯ್ ಕಿರಗಂದೂರ್ ಹೆಸರು ಪ್ರಸ್ತಾಪಿಸಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದರು. ಆಗ ಕೂಡ ರಿಷಬ್ ಸುಮ್ಮನಿದ್ದರು. ಒಂದು ವೇಳೆ ತಾವು ಮಾತನಾಡುವಾಗ ಹೊಂಬಾಳೆ ಹೆಸರು ಮರೆತ್ತಿದ್ದರೂ ಅಜನೀಶ್ ಮಾತನಾಡಿದ ಮೇಲೆ ರಿಷಬ್ ನೆನಪು ಮಾಡಿಕೊಂಡು ಹೊಂಬಾಳೆ ಫಿಲ್ಮ್ಸ್ ಹೆಸರು ಹೇಳಬಹುದಿತ್ತು. ಆದರೆ ಆ ರೀತಿ ಮಾಡಲೇ ಇಲ್ಲ. ಬೇಕೆಂದೇ ರಿಷಬ್ ಅವಾಯ್ಡ್ ಮಾಡಿದಂತೆ ಕಂಡುಬಂತು.
ಈ ಹಿಂದೆ 'ಕಿರಿಕ್ ಪಾರ್ಟಿ' ಚಿತ್ರ ನಿರ್ಮಾಣದ ಸಂಸ್ಥೆ ಹೆಸರು ಹೇಳಲಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದರು. ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತನಾಡುವ ವೇಳೆ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಅವಕಾಶ ಸಿಕ್ಕ ಬಗ್ಗೆ ಹೇಳಿದ್ದರು. 'ಪರಂವಃ ಸ್ಟುಡಿಯೋಸ್' ಸಂಸ್ಥೆ ಹೆಸರು ಹೇಳದೇ ವ್ಯಂಗ್ಯವಾಗಿ ಬೆರಳು ತೋರಿಸುತ್ತಾ "ಆ ಸಂಸ್ಥೆಯಿಂದ ಕರೆ ಬಂದಿತ್ತು. ನಾನು ನಟಿಸೋಕೆ ಇಷ್ಟ ಇಲ್ಲ ಎಂದು ಹೇಳಿ ಫೋನ್ ಇಟ್ಟಿದ್ದೆ" ಎಂದು ರಶ್ಮಿಕಾ ಹೇಳಿದ್ದರು. ಇದಕ್ಕೆ ಪರೋಕ್ಷವಾಗಿ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದರು.
ಸಂದರ್ಶನವೊಂದರಲ್ಲಿ ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ? ಯಾರೊಟ್ಟಿಗೆ ನಟಿಸ್ತೀರಾ? ಎನ್ನುವ ಪ್ರಶ್ನೆ ರಿಷಬ್ ಶೆಟ್ಟಿ ಎದುರಾಗಿತ್ತು. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡ್ತೀನಿ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ) ನಟಿಯರು ನನಗೆ ಇಷ್ಟ ಇಲ್ಲ" ಎಂದು ರಶ್ಮಿಕಾ ರೀತಿ ಸನ್ನೆ ಮಾಡಿ ರಿಷಬ್ ತೋರಿಸಿದ್ದರು. ಇದು ವೈರಲ್ ಆಗಿತ್ತು. ರಶ್ಮಿಕಾಗೆ ರಿಷಬ್ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಅಂದು ಪರಂವಃ ಸ್ಟುಡಿಯೋಸ್ ಸಂಸ್ಥೆ ಹೆಸರು ಹೇಳದೇ ರಶ್ಮಿಕಾ ಮಾಡಿದ್ದು ತಪ್ಪು ಎನ್ನುವುದಾದರೆ ಈಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರು ಹೇಳದೇ ರಿಷಬ್ ಶೆಟ್ಟಿ ನುಣುಚಿಕೊಂಡಿರುವುದು ತಪ್ಪು ಅಲ್ಲವೇ ಎನ್ನುವ ಚರ್ಚೆ ಶುರುವಾಗಿದೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಲವ್ ಬ್ರೇಕಪ್ ಆಗಿತ್ತು. ಅದೇ ಕೋಪದಲ್ಲಿ ಅಂದು ರಶ್ಮಿಕಾ ಪರಂವಃ ಸ್ಟುಡಿಯೋಸ್ ಹೆಸರು ಹೇಳಲಿಲ್ಲ. ಆದರೆ 'ಕಾಂತಾರ' ರೀತಿಯ ಪ್ರಯತ್ನಕ್ಕೆ ಜೊತೆಯಾಗಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ರಿಷಬ್ ಮರೆತ್ತಿದ್ದು ಯಾಕೆ? ಎನ್ನುವಂತಾಗಿದೆ.


Click it and Unblock the Notifications











