ನೀವು ಹೇಳಿದ ಈ ಸುದ್ದಿ ನಿಜಾ ಆದರೆ ನಿಮಗೆ ಧಾರವಾಡದ ಪೇಡಾ ಕೊಡ್ತೀನಿ ಎಂದ ರುಕ್ಮಿಣಿ ವಸಂತ್...!
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನಾಯಕಿಯರ ಕೊರತೆ ಎದ್ದು ಕಾಣುತ್ತಿದೆ. ಅನೇಕ ನಾಯಕಿಯರು ನಿವೃತ್ತಿಯಾಗಿದ್ದಾರೆ. ಇನ್ನು ಕೆಲವರು ಗಂಡ ಮನೆ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನೂ ಕೆಲವರು ಕನ್ನಡ ಚಿತ್ರರಂಗಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿ ಪರಭಾಷೆಯ ಪಾಲಾಗಿದ್ದಾರೆ. ಅಂದ ಚೆಂದ ಇದ್ದರೆ ಪ್ರತಿಭೆ ಇರಲ್ಲ.ಪ್ರತಿಭೆ ಇದ್ದವರಲ್ಲಿ ಗ್ಲಾಮರ್ ಇಲ್ಲ ಎನ್ನುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಮಯದಲ್ಲಿ ಕನ್ನಡ ಚಿತ್ರರಂಗದ ಗಮನ ಸೆಳೆಯುವದರ ಜೊತೆಯಲ್ಲಿ ಕನ್ನಡ ಕಲಾರಸಿಕರ ಹೃದಯದಲ್ಲಿ ರುಕ್ಮಿಣಿ ವಸಂತ್ ಸ್ಥಾನ ಪಡೆದಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಂತರ ಅನೇಕರ ಪಾಲಿನ ಡ್ರೀಮ್ ಗರ್ಲ್ ಆಗಿ ಕೂಡ ರುಕ್ಮಿಣಿ ವಸಂತ್ ಹೊರ ಹೊಮ್ಮಿದ್ದಾರೆ. ಆದರೆ. ರುಕ್ಮಿಣಿ ವಸಂತ್ ಕೂಡ ಮಿಕ್ಕವರಂತೆ ಎಲ್ಲಿ ಪರಭಾಷೆ ಚಿತ್ರರಂಗಕ್ಕೆ ವಲಸೆ ಹೋಗುತ್ತಾರೆ ಎನ್ನುವ ಭಯ ಕೂಡ ಇದೇ ಸಮಯದಲ್ಲಿ ಇವರ ಸಮಸ್ತ ಕನ್ನಡ ಅಭಿಮಾನಿಗಳಲ್ಲಿದೆ. ಇದಕ್ಕೆ ಪೂರಕವಾಗಿ ರುಕ್ಮಿಣಿ ವಸಂತ್ ವಿಜಯ್ ಸೇತುಪತಿ ಜೊತೆ 'ಏಸ್' ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಶಿವಕಾರ್ತಿಕೇಯನ್ ಜೊತೆ ಒಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇನ್ನೂ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಸಂಗಮಕ್ಕೆ ಸಾಕ್ಷಿಯಾಗಲಿರುವ ಚಿತ್ರದಲ್ಲಿ ಕೂಡ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದು ನಿಜಾನಾ ಗೊತ್ತಿಲ್ಲ. ಆದರೆ.. ಸದ್ಯಕ್ಕೆ ರುಕ್ಮಿಣಿ ವಸಂತ್ ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಸಂಪೂರ್ಣವಾಗಿ ತಳ್ಳಿಯೂ ಹಾಕಿಲ್ಲ. ಹೌದು, ರುಕ್ಮಿಣಿ ವಸಂತ್ ಅಭಿನಯದ ಬಘೀರ ಇನ್ನೇನು ಈ ಅಕ್ಟೋಬರ್ 31ಕ್ಕೆ ಬಿಡುಗಡೆಯಾಗಲಿದೆ. ಕೇವಲ ಕನ್ನಡ ಮಾತ್ರವಲ್ಲದೇ ಚಿತ್ರ ತೆಲುಗಿನಲ್ಲಿ ಕೂಡ ಏಕಕಾಲಕ್ಕೆ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ. ಹೀಗಾಗಿ ಚಿತ್ರದ ಪ್ರಚಾರವನ್ನು ಶ್ರೀಮುರಳಿ ಮತ್ತು ರುಕ್ಮಿಣಿ ವಸಂತ್ ಆಂಧ್ರದಲ್ಲಿ ಮಾಡುತ್ತಿದ್ದಾರೆ. ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಹೀಗೆ Ntvಗೆ ನೀಡಲಾದ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಬಗ್ಗೆ ರುಕ್ಮಿಣಿ ವಸಂತ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ನಂತರ ಬಘೀರ, ಬಘೀರ ನಂತರ ಜ್ಯೂ.ಎನ್.ಟಿ.ಆರ್ ಮತ್ತು ನೀಲ್ ಜೊತೆ ನೀವು ಸಿನಿಮಾ ಮಾಡ್ತಿದ್ದೀರಾ ಎಂದು ಸಂದರ್ಶನದಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ ಮಂದಹಾಸ ಬೀರಿದ ರುಕ್ಮಿಣಿ ವಸಂತ್ ಓ ಹೌದಾ ಎಲ್ಲಿ ಸಹಿ ಮಾಡಬೇಕು, ಒಪ್ಪಂದದ ಪತ್ರ ಇದೆಯಾ ನಾನು ಈಗಲೇ ಸಹಿ ಮಾಡುತ್ತೇನೆ ಎಂದು ನಕ್ಕಿದ್ದಾರೆ. ಇದಕ್ಕೆ ನಿರೂಪಕ ನಿಮ್ಮ ಸಂಭಾವನೆ ಎಷ್ಟು ಎಂದು ಕೇಳಿದ್ದಾರೆ. ನೀವು ಸಹಿ ಮಾಡುತ್ತೀರಾ ಇಲ್ಲವಾ ಗೊತ್ತಿಲ್ಲ. ಆದರೆ ನಿಮಗೆ ಈ ಸುದ್ದಿಯನ್ನು ನಾನು ಮೊದಲು ಹೇಳಿದ್ದೇನೆ. ಈ ಕಾರಣಕ್ಕೆ ಈ ಚಿತ್ರದಲ್ಲಿ ನೀವು ಇರುವುದು ಖಚಿತವಾದರೆ ನನಗೇನು ಕೊಡ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ರುಕ್ಮಿಣಿ ವಸಂತ್ ಇದು ಸುಂದರವಾದ ವದಂತಿ ಆದರೆ ಎಂದಿದ್ದಾರೆ. ಅಷ್ಟರಲ್ಲಿಯೇ ನಿರೂಪಕ ಚಿತ್ರ ಕನ್ಫರ್ಮ್ ಆದರೆ ಎಂದು ಕೇಳಿದ್ದಾರೆ. ಇದಕ್ಕೆ ರುಕ್ಮಿಣಿ ಪಾರ್ಟಿ ಕೊಡುವ ಭರವಸೆ ನೀಡಿದ್ದಾರೆ. ಇಷ್ಟು ದೊಡ್ಡ ಚಿತ್ರ ನೀವು ಕೇವಲ ಒಂದು ಪಾರ್ಟಿ ಮಾತ್ರ ಕೊಡುವುದಾಗಿ ಹೇಳ್ತಿರಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಆಯ್ತು ನಿಮಗೋಸ್ಕರ ಒಂದು ಸ್ಪೆಷಲ್ ಧಾರವಾಡ ಪೇಡಾ ಕೊಡ್ತೇನೆ ಎಂದು ಹೇಳಿದ್ದಾರೆ. ನಕ್ಕಿದ್ದಾರೆ.
ಆದರೆ ಹರಿದಾಡುತ್ತಿರುವ ವದಂತಿ ಸಂಪೂರ್ಣ ಸುಳ್ಳು ಎಂದು ರುಕ್ಮಿಣಿ ವಸಂತ್ ಎಲ್ಲಿಯೂ ಹೇಳಿಲ್ಲ. ನಿಜಾ ಎಂದು ಒಪ್ಪಿಕೊಂಡಿಲ್ಲ. ಯಾರಿಗೆ ಗೊತ್ತು ಇನ್ನೂ ಮಾತುಕಥೆಯ ಹಂತದಲ್ಲಿರಬಹುದು. ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾದರು ಆಗಬಹುದು. ಅಂದ್ಹಾಗೇ ಸದ್ಯ ಬಘೀರ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ರುಕ್ಮಿಣಿ ವಸಂತ್ ಡಾ.ಶಿವರಾಜ್ ಕುಮಾರ್ ಜೊತೆ ಭೈರತಿ ರಣಗಲ್ನಲ್ಲಿ ಕೂಡ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ನವೆಂಬರ್ 15ರಂದು ಬಿಡುಗಡೆಯಾಗಲಿದೆ.


Click it and Unblock the Notifications











