ಚಿತ್ರೋತ್ಸವ ನಿಗದಿಯಂತೆಯೇ ನಡೆಯಲಿ- ವಾಣಿಜ್ಯ ಮಂಡಳಿ
ಬೆಂಗಳೂರು: ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡದೆ, ನಿಗದಿಯಾದಂತೆ ನಡೆಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ.
ಚಲನಚಿತ್ರೋತ್ಸವವೆಂದರೆ ಹಬ್ಬವಲ್ಲ , ಚಿತ್ರಗಳ ಅಧ್ಯಯನ. ಇದು ದೇಶ ವಿದೇಶಗಳ ಸಂಸ್ಕೃತಿ ವಿನಿಮಯದ ವೇದಿಕೆಯೂ ಹೌದು ಎಂದು ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಲನಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಹೇಳಿದರು.
ಚಿತ್ರೋತ್ಸವಕ್ಕಾಗಿ ಈಗಾಗಲೇ ಶೇ.50 ರಷ್ಟು ಸಿದ್ಧತೆಗಳನ್ನು ಪೂರೈಸಲಾಗಿದೆ. ಈ ಹಂತದಲ್ಲಿ ಚಿತ್ರೋತ್ಸವವನ್ನು ಮುಂದೂಡುವ ನಿರ್ಧಾರ ನಿರಾಶೆ ಮೂಡಿಸುವಂತಾದ್ದಾಗಿದೆ ಎಂದು ಚಂದ್ರಶೇಖರ್ ಹೇಳಿದರು. ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ವಾಣಿಜ್ಯ ಮಂಡಳಿಯಲ್ಲಿ ಉಳಿದಿರುವ 18 ಲಕ್ಷ ರುಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ ಚಿತ್ರಗಳ ಪ್ರತಿ ನೀಡಿದಲ್ಲಿ , ವಾಣಿಜ್ಯ ಮಂಡಳಿಯೇ ಚಿತ್ರೋತ್ಸವವನ್ನು ಸರಳವಾಗಿ ಆಚರಿಸುತ್ತದೆ ಎಂದು ಪ್ರಶ್ನೆಯಾಂದಕ್ಕೆ ಚಂದ್ರಶೇಖರ್ ಉತ್ತರಿಸಿದರು.


Click it and Unblock the Notifications