ಬರ, ಅಸ್ಥಿರತೆ ಭೀತಿ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ರದ್ದು
ನವದೆಹಲಿ : ಅಕ್ಟೋಬರ್ 10 ರಿಂದ 20 ರವರೆಗೆ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ 32 ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಂತರರಾಷ್ಟ್ರೀಯ ಭಯೋತ್ಪಾದಕತೆಯನ್ನು ಹತ್ತಿಕ್ಕುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಉಂಟಾಗಿರುವ ಅಸ್ಥಿರ ಪರಿಸ್ಥಿತಿಯಲ್ಲಿ ಚಿತ್ರೋತ್ಸವವನ್ನು ರದ್ದು ಮಾಡಲು ಸರ್ಕಾರ ತೀರ್ಮಾನಿಸಿತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆ ಈ ನಿರ್ಣಯ ಕೈಗೊಂಡಿದೆ ಎಂದು ಬುಧವಾರ ಬಿಡುಗಡೆ ಮಾಡಿರುವ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಮೂಡಿರುವುದರಿಂದ ಚಿತ್ರೋತ್ಸವವನ್ನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಮಾಡಿದ ಮನವಿಯನ್ನು ಚಿತ್ರೋತ್ಸವ ರದ್ದು ಮಾಡುವ ತೀರ್ಮಾನದಲ್ಲಿ ಪರಿಗಣಿಸಲಾಗಿದೆ. ಚಿತ್ರೋತ್ಸವಕ್ಕೆ ಆಯ್ಕೆಯಾದ ವಿದೇಶೀ ಸಿನಿಮಾಗಳು ಹಾಗೂ ಪನೋರಮಾಕ್ಕೆ ಆಯ್ಕೆಯಾದ ಭಾರತೀಯ ಸಿನಿಮಾಗಳನ್ನು ಸೂಕ್ತ ಸಮಯದಲ್ಲಿ ವಿವಿಧ ಜಾಗೆಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅಂತರರಾಷ್ಟ್ರೀಯ ಸಿನಿಮಾ ನಿರ್ಮಾಪಕರ ಒಕ್ಕೂಟ(ಎಫ್ಐಎಪಿಎಫ್) ನಿರ್ಧರಿಸಿರುವ ಕ್ಯಾಲೆಂಡರ್ ಪ್ರಕಾರ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ನಡೆಸಲಾಗುತ್ತದೆ. ಆ ಕಾರಣದಿಂದಾಗಿ ಚಿತ್ರೋತ್ಸವನ್ನು ಮುಂದೂಡುವುದು ಸಾಧ್ಯವಿಲ್ಲ ವಾದ್ದರಿಂದ, ರದ್ದುಗೊಳಿಸಬೇಕಾಯಿತು ಎಂದೂ ಪ್ರಕಟಣೆ ಹೇಳಿದೆ.
(ಪಿಟಿಐ)


Click it and Unblock the Notifications