Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಶತಮಾನೋತ್ಸವದ ಕಂಪ್ಲೀಟ್ ಡೀಟೇಲ್ಸ್
ಇಡೀ ದಕ್ಷಿಣ ಭಾರತದ ಚಿತ್ರರಂಗ ನೂರು ವರ್ಷಗಳ ಸಿನಿಮಾ ಸಂಭ್ರಮಕ್ಕೆ ಸಜ್ಜಾಗಿದೆ. ಶನಿವಾರ (ಸೆ.21) ಸಂಜೆ 4ಗಂಟೆಗೆ ವರ್ಣರಂಜಿತ ಕಾರ್ಯಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಉದ್ಘಾಟಿಸಲಿದ್ದಾರೆ. ಚೆನ್ನೈನ ಜವಹಾರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ತಾರೆಗಳು, ತಂತ್ರಜ್ಞರು ಈ ಕಾರ್ಯಕ್ರಮಕ್ಕೆ ಹೊಸ ಮೆರುಗು ತರುತ್ತಿದ್ದಾರೆ. ಸೌತ್ ಇಂಡಿಯನ್ ಫಿಲಂ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮದ ಮುಂದಾಳತ್ವ ವಹಿಸಿದೆ.
ಈ ವರ್ಣರಂಜಿತ ಕಾರ್ಯಕ್ರಮಕ್ಕಾಗಿ ಸಂಗೀತ ಮಾಂತ್ರಿಕ ಇಳಯರಾಜಾ ಅವರು ಗೀತೆಯೊಂದನ್ನು ಸಂಯೋಜಿಸಿದ್ದಾರೆ. ಈ ಗೀತೆಯ ವಿಶೇಷ ಎಂದರೆ ಎಲ್ಲಾ ಭಾಷೆಗಳನ್ನೂ ಸಂಯೋಜಿಸಿ ಸೃಷ್ಟಿಸಿರುವುದು. ಇದರ ಜೊತೆಗೆ ದಕ್ಷಿಣದ ಪ್ರತಿ ಭಾಷೆಯಲ್ಲೂ ವಿಶೇಷ ಗೀತೆಗಳನ್ನೂ ಅವರು ಸಂಯೋಜಿಸಿದ್ದಾರೆ.
ನೂರು ವರ್ಷಗಳಲ್ಲಿ ತಾವು ನಿರ್ವಹಿಸಿದ ಮಹತ್ವದ ಪಾತ್ರವನ್ನು ಇಡೀ ಜಗತ್ತಿಗೆ ತಿಳಿಸಲು ಅದ್ದೂರಿಯಾಗಿ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಚಿತ್ರೋದ್ಯಮಗಳು ಕೈ ಜೋಡಿಸಿವೆ.
ಸುಮಾರು ರು.30 ಕೋಟಿ ವೆಚ್ಚದಲ್ಲಿ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ, ತಮಿಳುನಾಡು ಸರ್ಕಾರ ಜಂಟಿಯಾಗಿ ಈ ಅದ್ದೂರಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿವೆ. ಉದ್ಘಾಟನೆ ದಿನ ತಮಿಳು ಚಿತ್ರರಂಗಕ್ಕೆ ಸಂಬಂಧಿಸಿದ 50 ಕಲಾವಿದರನ್ನು ಜಯಲಲಿತಾ ಸನ್ಮಾನಿಸಲಿದ್ದಾರೆ.
ಭಾನುವಾರ (ಸೆ.22) ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಅಂದು ಸಂಜೆ ತೆಲುಗು ಚಿತ್ರರಂಗದ ಕಾರ್ಯಕ್ರಮಗಳು ಆರಂಭವಾಗಲಿವೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಒಟ್ಟು 650 ಮಂದಿ ಕಲಾವಿದರು, ತಂತ್ರಜ್ಞರು ಹಾಜರಾಗುತ್ತಿದ್ದಾರೆ.
ಸೋಮವಾರ (ಸೆ.23) ಮಲಯಾಳಂ ಚಿತ್ರೋದ್ಯಮದ ಕಾರ್ಯಕ್ರಮಗಳು ಹಾಗೂ ಮಂಗಳವಾರ (ಸೆ.24) ಕಾರ್ಯಕ್ರಮಕ್ಕೆ ತೆರೆಬೀಳಲಿದೆ. ಸಮಾರೋಪ ಸಮಾರಂಭಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಅಂದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೆ ಸಂಬಂಧಿಸಿದ ಒಟ್ಟು 28 ಕಲಾವಿದರನ್ನು ಸನ್ಮಾನಿಸಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದ ಪೂರ್ಣ ಪಟ್ಟಿ ಈಗಾಗಲೆ ಸಿದ್ಧವಾಗಿದೆ. ಆದರೆ ಹೆಸರುಗಳನ್ನು ಗೋಪ್ಯವಾಗಿಡಲಾಗಿದ್ದು ಸನ್ಮಾನದ ದಿನ ಪ್ರಕಟಿಸುವುದಾಗಿ ಚೇಂಬರ್ ಅಧ್ಯಕ್ಷ ಸಿ ಕಲ್ಯಾಣ್ ತಿಳಿಸಿದ್ದಾರೆ. ವೇದಿಕೆ ನಿರ್ಮಾಣಕ್ಕಾಗಿಯೇ ರು.8 ಕೋಟಿ ವೆಚ್ಚ ಮಾಡಲಾಗಿದೆ.
ಮೊದಲ ದಿನದ ತಮಿಳು ಚಿತ್ರೋದ್ಯಮ ವೇದಿಕೆ ಮೇಲೆ ಸಂಭ್ರಮಿಸಲಿದೆ. ತಮಿಳು ಸಿನಿಮಾದ ದಿಗ್ಗಜರನ್ನು ಮುಖ್ಯಮಂತ್ರಿ ಜಯಲಲಿತಾ ಸನ್ಮಾನಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಲು ಸಿನಿಮಾ ತಾರೆಗಳು ಹೆಜ್ಜೆ ಹಾಕಲಿದ್ದಾರೆ. ಈಗಾಗಲೆ ತಾರೆಗಳು ಈ ಕಾರ್ಯಕ್ರಮಕ್ಕಾಗಿ ಸಿದ್ಧರಾಗಿದ್ದಾರೆ.
ಎರಡನೇ ದಿನ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಅಂದು ಕನ್ನಡ ಚಿತ್ರರಂಗಕ್ಕೆ ವೇದಿಕೆ ಮೀಸಲು. ರಾಜ್ಯದ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾ ರೆಡ್ಡಿ, ಉಮಾಶ್ರೀ ವಿಶೇಷ ಆಹ್ವಾನ ನೀಡಲಾಗಿದೆ. ಕರ್ನಾಟಕ ಸಿನಿ ದಿಗ್ಗಜರಿಗೆ ಅಂದು ಸನ್ಮಾನವಿರುತ್ತದೆ.
ಎರಡನೇ ದಿನ ಸಂಜೆ ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಆರಂಭವಾಗಲಿವೆ. ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ, ಆಂಧ್ರದ ಉಪಮುಖ್ಯಮಂತ್ರಿ ದಾಮೋದರ ರಾಜನಹಸಿಂಹ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 23ರಂದು ಬೆಳಗ್ಗೆ 10ಕ್ಕೆ ಮಲಯಾಳಂ ಚಿತ್ರರಂಗದ ಕಾರ್ಯಕ್ರಮಗಳು ನಡೆಯಲಿವೆ. ಕೇಂದ್ರದ ಸಾಗರೋತ್ತರ ವ್ಯವಹಾರಗಳ ಖಾತೆಯ ಸಚಿವ ವಯಲಾರ್ ರವಿ, ಕೇರಳ ಗ್ರಾಮೀಣಾಭಿವೃದ್ಧಿ ಸಚಿವ ಕೆಸಿ ಜೋಸೆಫ್ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ಶತಮಾನೋತ್ಸವ ಸಂಭ್ರಮದ ಕೊನೆಯ ದಿನ ಸಿನಿಮಾ, ರಾಜಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದಕ್ಷಿಣ ಭಾರತದ ಮುಖ್ಯಮಂತ್ರಿಗಳು, ಸಿನಿಮಾ ದಿಗ್ಗಜರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಸಂಜೆ 5 ಗಂಟೆಗೆ ತೆರೆಬೀಳಲಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಆಂಧ್ರಪ್ರದೇಶ್ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಒಂದೇ ವೇದಿಕೆ ಮೇಲೆ ಆಸೀನರಾಗಲಿದ್ದಾರೆ. ಭದ್ರತೆಯ ಕಾರಣ ಈ ಕಾರ್ಯಕ್ರಮವನ್ನು ಸಾರ್ವಜನಿಕರು ಕಣ್ಣಾರೆ ನೋಡುವ ಭಾಗ್ಯವಿಲ್ಲ. ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದವರಷ್ಟೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. (ಏಜೆನ್ಸೀಸ್)