ಲವ್ ಜಿಹಾದ್ ? ನಾನು ಕನ್ನಡಿಗ, ಹಿಂದೂನೇ ; ನಮ್ಮನ್ನ ಬದುಕಲು ಬಿಡಿ- ಮುಕಳೆಪ್ಪ ಪ್ರತಿಕ್ರಿಯೆ
ಧಾರವಾಡ : ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ.
ಹೀಗೆ ಪ್ರೀತಿಯನ್ನು ಅರಿತುಕೊಂಡು ಪ್ರೀತಿಯನ್ನು ಅರ್ಥ ಮಾಡಿಕೊಂಡೇ ಸ್ವಇಚ್ಛೆಯಿಂದಲೇ ನಾನು ಮುಕಳೆಪ್ಪ ಜೊತೆ ಮದುವೆಯಾಗಿದ್ದು ಎಂದು ಧಾರವಾಡ ಜಿಲ್ಲೆಯ ಗಾಯತ್ರಿ ಹೇಳುತ್ತಿದ್ದಾರೆ. ಆದರೆ. ಗಾಯತ್ರಿ ಹೆತ್ತವರು ಹೇಳುವುದೇ ಬೇರೆ.

ಮುಕಳೆಪ್ಪ ಅಲಿಯಾಸ್ ''ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್'' ವಿರುದ್ದ ಲವ್ ಜಿಹಾದ್ ಆರೋಪ ಮಾಡಿರುವ ಗಾಯತ್ರಿ ಅವರ ತಂದೆ ತಾಯಿ ಮುಕಳೆಪ್ಪ ಮೋಸ ಮಾಡಿದ್ದಾನೆ ಎಂದು ಆರೋಪವನ್ನು ಕೂಡ ಮಾಡಿದ್ದಾರೆ. ತಂಗಿ ಎಂದು ಕರೆದು ಮದುವೆಯಾದ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದಲ್ಲದೇ ಈಗ ನಮಗೆ ಧಮ್ಕಿ ಹಾಕುತ್ತಿದ್ದಾನೆ ಎಂದು ತಮ್ಮ ಕೂಡ ತಮ್ಮ ಮನದ ನೋವನ್ನು ಮಾಧ್ಯಮದವರ ಎದುರು ಹಂಚಿಕೊಳ್ಳುತ್ತಲೇ ಇದ್ದಾರೆ.
ತಂದೆ ತಾಯಿಯ ಈ ಮಾತುಗಳಿಗೆ ಗಾಯತ್ರಿ ಈಗಾಗಲೇ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದು ನಮ್ಮವ್ವ ಏನೇನೋ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾಧ್ಯಮದವರ ಮುಂದೆ ನಮ್ಮವ್ವ ಏನೇನೋ ಹೇಳಿಕೆ ಕೊಡ್ತಿದ್ದಾಳೆ ಅದೆಲ್ಲಾ ಸುಳ್ಳು ಎಂದಿರುವ ಗಾಯತ್ರಿ, ನಮ್ಮವ್ವ ಮದುವೆಯಾದ ಮೇಲೆ ನಮಗೆ ತುಂಬಾ ಬೆಂಬಲ ನೀಡಿದ್ದಾರೆ. ಅದಕ್ಕೆ ಬೇಕಾದಂತಹ ಸಾಕ್ಷಿಗಳೆಲ್ಲವೂ ನನ್ನ ಬಳಿ ಇವೆ, ಅದೆಲ್ಲವನ್ನೂ ನಾನೇ ಸಮಯ ಬಂದಾಗ ನಿಮಗೆ ತೋರಿಸ್ತೀನಿ, ಆದರೆ.. ಈಗ ಅವಳು ಯಾರ ಮಾತು ಕೇಳಿ ಇದೆಲ್ಲಾ ಮಾಡುತ್ತಿದ್ದಾಳೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಕೂಡ ಹೇಳಿದ್ದಾರೆ. ಯಾರೋ ಅವರ ಬ್ರೈನ್ ವಾಶ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದರ ನಡುವೆ ಇದೀಗ ಇಡೀ ವಿವಾದ ಮತ್ತು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಲವ್ ಜಿಹಾದ್ ಆರೋಪಕ್ಕೆ ಮುಕಳೆಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮನ್ನೂ ಬದುಕಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದರ ನಡುವೆ ಇದೀಗ ಖುದ್ದು ಮುಕಳೆಪ್ಪ ಅಲಿಯಾಸ್ ''ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್'' ತಮ್ಮ ಪತ್ನಿ ಗಾಯತ್ರಿ ಜೊತೆ ಪ್ರತ್ಯಕ್ಷವಾಗಿದ್ದಾರೆ. ತಮ್ಮ ವಿರುದ್ಧ ಕೇಳಿ ಬರುತ್ತಿರುವ ಲವ್ ಜಿಹಾದ್ ಆರೋಪಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಮುಕಳೆಪ್ಪ, ನಾನು ಯಾವುದೇ ರೀತಿಯ ಲವ್ ಜಿಹಾದ್ ಮಾಡಿಲ್ಲ. ನಾವು ಇಬ್ಬರು ಇಷ್ಟ ಪಟ್ಟು ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ. ಯಾವ ತರಹದ ಮತಾಂತರ ಕೂಡ ಇಲ್ಲಿ ಆಗಿಲ್ಲ ಎಂದು ಹೇಳಿರುವ ಮುಕಳೆಪ್ಪ ಇವರು ಯಾವ ಧರ್ಮದಲ್ಲಿ ಹುಟ್ಟಿದ್ದಾರೋ ಅದೇ ಧರ್ಮದಲ್ಲಿ ಕೊನೆಯವರೆಗೆ ಮುಂದುವರೆಯುತ್ತಾರೆ. ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೀನೋ ನಾನು ಕೊನೆಯವರೆಗೆ ಅದೇ ಧರ್ಮದಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.

ಮುಂದುವರೆದು ಕಲಾವಿದರಲ್ಲಿ ಜಾತಿ-ಧರ್ಮ ಯಾವುದನ್ನು ತೆಗೆದುಕೊಂಡು ಬರಬೇಡಿ ಎಂದು ಹೇಳಿರುವ ಮುಕಳೆಪ್ಪ, ಕರ್ನಾಟಕದಲ್ಲಿ ನಾನು ಹುಟ್ಟಿದ್ದೇನೆ ಎಂದರೆ ನಾನು ಕೂಡ ಒಬ್ಬ ಕನ್ನಡಿಗ, ನಾನು ಒಬ್ಬ ಹಿಂದೂನೇ, ನಾನು ಕನ್ನಡಿಗ ನಾನು ಹಿಂದೂ ಎಂದು ಹೆಮ್ಮೆಯಿಂದ ನಾನು ಇದನ್ನು ಹೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಮಗೆ ಯಾವುದೇ ರೀತಿಯ ಕಿರಿಕಿರಿಯನ್ನುಂಟು ಮಾಡಬೇಡಿ, ನಮ್ಮ ವಿರುದ್ಧ ವಿಡಿಯೋಗಳನ್ನು ಮಾಡಿ ಹಾಕಬೇಡಿ ಎಂದು ಕೂಡ ಹೇಳಿರುವ ಮುಕಳೆಪ್ಪ ನಮಗೆ ದಯವಿಟ್ಟು ಬದುಕಲು ಬಿಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.


Click it and Unblock the Notifications











