'ಇನ್' ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ: ವಿಶೇಷತೆ ಏನು?
ಕನ್ನಡ ಚಿತ್ರರಂಗದಲ್ಲಿ ಹೊಸಬರು ಹೊಸ ಹೊಸ ಪ್ರಯೋಗ ಮತ್ತು ವಿಭಿನ್ನ ಶೈಲಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ನಟಿ ಪಾವನಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಇನ್' ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ರುದ್ರಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ಯುವ ನಿರ್ದೇಶಕ ಬಡಿಗೇರ್ ದೇವೇಂದ್ರ. ಒಬ್ಬಳೇ ಯುವತಿ ಒಂಟಿ ಮನೆ ಸುತ್ತ ಲಾಕ್ ಡೌನ್ ಪರಿಣಾಮದ ಕುರಿತ ವಿಭಿನ್ನ ಕಥಾ ಹಂದರವುಳ್ಳ ಚಿತ್ರ ನಿರ್ದೇಶನ ಮಾಡಿದ್ದಾರೆ. ಪತ್ರಕರ್ತ ಶಂಕರ ಪಾಗೋಜಿ ಅವರೊಂದಿಗೆ ಕಥೆ,ಚಿತ್ರಕತೆ, ಸಂಭಾಷಣೆ ಜವಾಬ್ದಾರಿ ನೋಡಿಕೊಂಡಿದ್ದಾರೆ.
ಸಿನಿಮಾದ ನಾಯಕಿ ಸಣ್ಣ ಹಳ್ಳಿಯ ಹುಡುಗಿ ತನ್ನ ಕನಸಿನ ನಗರಿ ಬೆಂಗಳೂರಿನಲ್ಲಿ ಅದ್ಧೂರಿ ಜೀವನ ನಡೆಸಬೇಕೆಂಬ ಕನಸು ಕಟ್ಡಿಕೊಂಡವಳು. ಬೆಂಗಳೂರಿನಲ್ಲಿ ಒಬ್ಬಳೇ ಇದ್ದು ನೌಕರಿ ಮಾಡಿಕೊಂಡು ತನ್ನದೇ ಆದ ಸುಂದರ ಜೀವನ ರೂಪಿಸಿಕೊಳ್ಳುತ್ತಿರುವಾಗಲೇ ಕೊವಿಡ್ ಕಾರಣದಿಂದ ಇಡೀ ಜಗತ್ತಿಗೆ ಲಾಕ್ ಡೌನ್ ಜಾರಿಯಾಯಿತು. ಇದು ಅಕ್ಷರಶಃ ಎಲ್ಲರಿಗೂ ಗೃಹ ಬಂಧನವಾಯಿತು.

ಲಾಕಡೌನ್ ಆರಂಭದ ಕೆಲವು ದಿನ ಖುಷಿ ಖುಷಿ ಎನಿಸಿದರೂ, ಲಾಕ್ ಡೌನ್ ಪರಿಣಾಮ ಕಂಪನಿಗಳಲ್ಲಿ ಸಂಬಳ ಕಡಿತ, ಉದ್ಯೋಗ ಕಡಿತದಿಂದ ಜನರು ತಿಂಗಳ ಇಎಂ ಐ ತುಂಬಲು ಕಷ್ಟ ಪಡುವಂತಾಯಿತು. ಅನೇಕ ಜನರು ಲಾಕ್ ಡೌನ್ ಪರಿಣಾಮ ಜೀವನ ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಲಾಕ್ ಡೌನ್ ತಿಂಗಳು ಗಟ್ಟಲೇ ಮುಂದುವರಿದ ಪರಿಣಾಮ ಮನೆಯಲ್ಲಿ ಒಂಟಿಯಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದ ಯುವತಿ ಪ್ರತಿ ದಿನ ಸಮಸ್ಯೆಗಳನ್ನು ಎದುರಿಸುವಂತಾಯಿತು. ತಿಂಗಳುಗಟ್ಟಲೆ ಒಂದು ಮನೆಯೊಳಗೆ (ಇನ್) ಬಂಧಿಯಾಗುವ ಯುವತಿ ಈ ಸಂದರ್ಭದಲ್ಲಿ ಜೀವನವನ್ನು ಹೇಗೆ ನಿರ್ವಹಿಸುತ್ತಾಳೆ. ಲಾಕ್ ಡೌನ್ ಅವಳಿಗೆ ವರವೋ ಶಾಪವೋ ಅದನ್ನು ಹೇಗೆ ಎದುರಿಸಿ ಜೀವನ ಸಾಗಿಸುತ್ತಾಳೆ ಎನ್ನುವುದೇ 'ಇನ್' ಚಿತ್ರದ ಕಥಾವಸ್ತು.
ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಬಡಿಗೇರ್ ದೇವೇಂದ್ರ, ''ಲಾಕ್ ಡೌನ್ ಸಂದರ್ಭದಲ್ಲಿ ಏನಾದರೂ ಪ್ರಯೋಗ ಮಾಡಬೇಕೆಂದು ಸ್ನೇಹಿತ ಶಂಕರ ಪಾಗೋಜಿ ಜೊತೆ ಈ ಚಿತ್ರದ ಕುರಿತು ಚರ್ಚಿಸಿದೆ. ನಟಿ ಪಾವನ ಗೌಡ ಅವರೂ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲಿದೆ. ಜನರು ನಮ್ಮ ಪ್ರಯತ್ನವನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸವಿದೆ'' ಎಂದು ನುಡಿದಿದ್ದಾರೆ.
''ಒಂದು ವಿಭಿನ್ನ ಹಾಗೂ ಪ್ರಯೋಗಾತ್ಮಕ ಪಾತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಮಹಾನಗರದಲ್ಲಿ ಏಕಾಂಗಿಯಾಗಿ ಜೀವನ ನಡೆಸುವ ಯುವತಿಯರಿಗೆ ಈ ಚಿತ್ರ ಒಳ್ಳೆಯ ಸಂದೇಶ ಮತ್ತು ಸ್ಪೂರ್ತಿದಾಯಕವಾಗಲಿದೆ'' ಎನ್ನುವ ವಿಶ್ವಾಸವನ್ನು ಚಿತ್ರದ ನಾಯಕಿ ಪಾವನಾ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

ಕರುಣಾಕರ ಟಿ.ಎನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರಕತೆ ಮತ್ತು ಸಂಭಾಷಣೆಯನ್ನು ಶಂಕರ ಪಾಗೋಜಿ ಹಾಗೂ ಬಡಿಗೇರ್ ದೇವೇಂದ್ರ ಬರೆದಿದ್ದಾರೆ. ಚಿತ್ರಕ್ಕೆ ಭರತ್ ನಾಯ್ಕ್ ಅವರ ಸಂಗೀತವಿದೆ.
ನಿನ್ನೆಯಷ್ಟೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇಂದು 'ಇನ್' ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಚಿತ್ರರಂಗದ ಬಗ್ಗೆ ವಿಶೇಷ ಒಲವು, ಆಸಕ್ತಿಯುಳ್ಳ ಸಿಎಂ ಬಸವರಾಜ ಬೊಮ್ಮಾಯಿ, ನಿನ್ನೆ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪುನೀತ್ ರಾಜ್ಕುಮಾರ್ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವುದಾಗಿ ಘೋಷಿಸಿದರು. ಅಲ್ಲದೆ, ಪುನಿತ್ ರಾಜ್ಕುಮಾರ್ ಸರಳತೆಯನ್ನು, ದೊಡ್ಮನೆ ಕುಟುಂಬದ ಘನತೆಯನ್ನು ಬಹುವಾಗಿ ಹೊಗಳಿದರು. ಪುನೀತ್ ಗೌರವ ಸದಾ ಕಾಲ ಉಳಿಯುವ ಕಾರ್ಯ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.


Click it and Unblock the Notifications











