'ಅಭಿಮಾನಿ ದೇವರಿಗೆ' ಡಾ.ರಾಜ್ ಕುಮಾರ್ ಬರೆದಿದ್ದ ಅಪರೂಪದ ಪತ್ರ ನೋಡಿದ್ದೀರಾ.?
ಡಾ.ರಾಜ್ ಕುಮಾರ್ ಓರ್ವ ನಟ ಮಾತ್ರ ಅಲ್ಲ.. ಅವರೊಂದು ಶಕ್ತಿ.. ಅದಕ್ಕೇ ಅಲ್ವೇ, ಅಭಿಮಾನಿಗಳೆಲ್ಲರೂ ಅವರನ್ನ ಪೂಜ್ಯ ಭಾವದಿಂದ ಕಾಣುತ್ತಿದ್ದದ್ದು.! 'ಅಭಿಮಾನಿಗಳೇ ದೇವರು' ಎಂದು ಕರೆಯುತ್ತಿದ್ದ ಅಭಿಮಾನಿಗಳ ಆರಾಧ್ಯ ದೈವ 'ನಟ ಸಾರ್ವಭೌಮ' ಡಾ.ರಾಜ್ ಕುಮಾರ್.
ಈಗೆಲ್ಲಾ ಅಭಿಮಾನಿಗಳಿಗೆ ತಾರೆಯರು ಒಂದು ಸೆಲ್ಫಿ ಕೊಟ್ಟರೆ ಸಾಕು... ಆದ್ರೆ, ಹಿಂದೆಲ್ಲಾ ನಟ-ನಟಿಯರ ಆಟೋಗ್ರಾಫ್ ಗಾಗಿ ಅಭಿಮಾನಿಗಳು ಹಪಹಪಿಸುತ್ತಿದ್ದರು. ಇನ್ನೂ, ಡಾ.ರಾಜ್ ಮೇಲೆ ಅಭಿಮಾನ ವ್ಯಕ್ತಪಡಿಸಿ ಹಲವಾರು ಅಭಿಮಾನಿಗಳು ಪತ್ರ ಬರೆಯುತ್ತಿದ್ದರು. ಆ ಎಲ್ಲಾ ಪತ್ರಗಳನ್ನು ಓದಿ, ಪ್ರತಿಯೊಂದಕ್ಕೂ ಉತ್ತರ ಬರೆಯುತ್ತಿದ್ದರಂತೆ ಅಣ್ಣಾವ್ರು. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ...
ಅಭಿಮಾನಿಯೊಬ್ಬರಿಗೆ ಡಾ.ರಾಜ್ ಕುಮಾರ್ ಬರೆದಿರುವ ಪತ್ರವನ್ನ ನವರಸ ನಾಯಕ ಜಗ್ಗೇಶ್ ಇಂದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...
ನಟ ಜಗ್ಗೇಶ್ ಮಾಡಿರುವ ಟ್ವೀಟ್ ಏನು.?
''ಅಭಿಮಾನಿಗಳಲ್ಲಿ ದೇವರನ್ನು ಕಂಡ ದೇವರ ಮಗ ರಾಜಣ್ಣ. ಆ ದೇವರಿಗೆ ಪ್ರೀತಿಯಿಂದ ಬರೆದ ಅಭಿಮಾನದ ಪತ್ರ. ಮುತ್ತು ಪೋಣಿಸಿದ ರೀತಿಯ ಕೈಬರಹ, ಅವರ ಮುತ್ತಿನಂಥ ಮನದ ಪ್ರತೀಕ. ಯತಃಮನಃ ತಥಃಬರವಣಿಗೆ... ಇಂಥ ಮಾನಸಿಕ ಗುರು ಪಡೆದ ನಾವೇ ಧನ್ಯ.. ಭಾವುಕನಾದೆ ಈ ಪತ್ರ ನೋಡಿ'' ಎಂದು ನಟ ಜಗ್ಗೇಶ್ ಪತ್ರದ ಸಮೇತ ಟ್ವೀಟ್ ಮಾಡಿದ್ದಾರೆ.

ಪತ್ರದಲ್ಲಿ ಅಣ್ಣಾವ್ರು ಬರೆದಿರುವುದು ಏನು.?
ಒಲವಿನ ಸೋದರಿ ಬಿ.ಸಿ.ಗಾಯಿತ್ರಿಯವರಿಗೆ,
''ನಮಸ್ಕಾರ, ತುಂಬು ಅಭಿಮಾನದಿಂದ ತಾವು ನನಗೆ ಬರೆದ ಪತ್ರ ತಲುಪಿದೆ. ವಂದನೆಗಳು ನನ್ನ ಹಲವಾರು ಚಿತ್ರ ನೋಡಿ, ನನ್ನ ಹಲವಾರು ಚಿತ್ರಗೀತೆ, ಭಕ್ತಿಗೀತೆ ಆಲಿಸಿ, ಹರ್ಷ ಪಟ್ಟು, ಮೆಚ್ಚುಗೆ ವ್ಯಕ್ತ ಪಡಿಸಿರುತ್ತೀರಿ, ಧನ್ಯವಾದ''

ಸದಾ ಸರ್ವಮಂಗಳೆಯಾಗಿ, ಸದ್ಗುಣ ಸಂಪನ್ನೆಯಾಗಿ....
''ತಮ್ಮಂಥ ಸೋದರಿಯರ ಹಾರೈಕೆ, ಹಿರಿಯರ ಆಶೀರ್ವಾದ, ಶ್ರೀಗುರು ರಾಘವೇಂದ್ರರ ಕೃಪೆ ನನ್ನ ಏಳಿಗೆಗೆ ಕಾರಣ. ನನ್ನೆಲ್ಲಾ ಕೀರ್ತಿ, ಪದವಿ, ಬಿರುದು ತಮ್ಮಗಳ ಪ್ರೀತಿಯ ಕೊಡುಗೆ. ತಾವು ಸದಾ ಸರ್ವಮಂಗಳೆಯಾಗಿ, ಸದ್ಗುಣ ಸಂಪನ್ನೆಯಾಗಿ, ಕೊಟ್ಟ ಮನೆಗೂ ಕೂಡಿದ ಮನೆಗೂ ಕೀರ್ತಿಯ ಕಳಶವಾಗಿರಿ. ಈ ಪತ್ರದೊಂದಿಗೆ ನನ್ನ ಫೋಟೋ ಕಳುಹಿಸಿರುವೆ''
ಎಂದೆಂದಿಗೂ ನಿಮ್ಮ ಸೋದರನೇ
ಎಂದು ಪತ್ರದಲ್ಲಿ ಸಹಿ ಮಾಡಿದ್ದಾರೆ ಡಾ.ರಾಜ್ ಕುಮಾರ್.

ಡಾ.ರಾಜ್ ಕೈಬರಹ ನೋಡಿದ್ರಲ್ಲಾ!
ಡಾ.ರಾಜ್ ಕುಮಾರ್ ರವರ ಕೈಬರಹ ಕಾಣದ ಇಂದಿನ ಯುವ ಪೀಳಿಗೆಗೆ ನಟ ಜಗ್ಗೇಶ್ ಪತ್ರದ ಮೂಲಕ ಪರಿಚಯ ಮಾಡಿಸಿದ್ದಾರೆ. ಡಾ.ರಾಜ್ ದೊಡ್ಡ ಕಲಾವಿದರಾಗಿದ್ದರೂ, ಅವರಲ್ಲಿ ವಿನಯ-ವಿಧೇಯತೆ ಎಷ್ಟು ಮೈಗೂಡಿತ್ತು ಅನ್ನೋದಕ್ಕೆ ಈ ಪತ್ರವೇ ಉತ್ತಮ ಉದಾಹರಣೆ.


Click it and Unblock the Notifications











