'ಪ್ರಜಾಕೀಯ' ಹೆಸರಲ್ಲಿ ದುಡ್ಡು ಪೀಕುತ್ತಿದ್ದಾನೆ ಓರ್ವ ವ್ಯಕ್ತಿ: ಮೋಸ ಹೋಗ್ಬೇಡಿ, ಹುಷಾರ್!
ನಟ ಉಪೇಂದ್ರ 'ಪ್ರಜಾಕೀಯ'ಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ''ದುಡ್ಡು ಮಾಡುವ ಉದ್ದೇಶದಿಂದ ನಾನು ಪ್ರಜಾಕೀಯಕ್ಕೆ ಬರುತ್ತಿಲ್ಲ'' ಎಂದು ಉಪೇಂದ್ರ ಪದೇ ಪದೇ ಹೇಳುತ್ತಲೇ ಇದ್ದಾರೆ. ನಾಡಿನಾದ್ಯಂತ ಅವರಿಗೆ ಅಪಾರ ಬೆಂಬಲವೂ ದೊರಕಿದೆ.
ಅಷ್ಟಕ್ಕೂ, 'ಪ್ರಜಾಕೀಯ'ದ ಮೂಲ ಉದ್ದೇಶವೇ ಭ್ರಷ್ಟ ರಹಿತ ಸಮಾಜವನ್ನು ನಿರ್ಮಾಣ ಮಾಡುವುದು. ಹೀಗಿರುವಾಗ ಕಿಡಿಗೇಡಿಯೊಬ್ಬ 'ಪ್ರಜಾಕೀಯ'ದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಮಾಡುತ್ತಿದ್ದಾನೆ.

ಹೌದು, 'ಪ್ರಜಾಕೀಯ'ದ ಹೆಸರನ್ನು ಬೆಳಸಿಕೊಂಡು ವ್ಯಕ್ತಿಯೊಬ್ಬ ದುಡ್ಡು ಪೀಕುತ್ತಿದ್ದಾನೆ. ಈ ವಿಚಾರ ಉಪೇಂದ್ರ ರವರ ಕಿವಿಗೂ ಬಿದ್ದಿದೆ. ಕೂಡಲೆ ಆತನ ಬಗ್ಗೆ ಮಾಹಿತಿ ಕಲೆ ಹಾಕಿದ ಉಪೇಂದ್ರ, 'ಪ್ರಜಾಕೀಯ'ದ ಹೆಸರಿಗೆ ಮಸಿ ಬಳಿಯುತ್ತಿದ್ದವನ ಫೋಟೋ ಸಮೇತ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡು ಜನರಿಗೆ ಅರಿವು ಮೂಡಿಸಿದ್ದಾರೆ.
ಈ ಬಗ್ಗೆ ಸ್ವತಃ ಉಪೇಂದ್ರ ಅವರನ್ನು 'ಫಿಲ್ಮಿ ಬೀಟ್ ಕನ್ನಡ' ತಂಡ ಸಂಪರ್ಕಿಸಿದಾಗ, "ಹೌದು, ಆತ ನನ್ನ ಫ್ಯಾನ್ಸ್ ಅಸೋಸಿಯೇಷನ್ ನಲ್ಲಿ ಇದ್ದಾಗಲೂ ಹೀಗೆ ಎಲ್ಲರಿಂದಲೂ ದುಡ್ಡು ಪಡೆಯುತ್ತಿದ್ದ. ನಂತರ ನಾವು ಅವನನ್ನು ದೂರ ಇಟ್ಟೆವು. ಈಗ 'ಪ್ರಜಾಕೀಯ'ದ ಹೆಸರು ಬಳಸಿಕೊಂಡು ದುಡ್ಡು ಮಾಡುತ್ತಿದ್ದಾನಂತೆ. ಆದರೆ ನಾನು ಅದನ್ನು ನೋಡಿಲ್ಲ. ನನ್ನ ಜೊತೆಯಲ್ಲಿರುವ ಎಲ್ಲರೂ ಹಾಗೆ ಹೇಳುತ್ತಿದ್ದಾರೆ. ಈಗ ನನ್ನ ಜೊತೆ ವರ್ಕ್ ಮಾಡುತ್ತಿರುವ ದೀಪು ಎಂಬ ಹುಡುಗನ ಬಳಿಯೂ, ನನ್ನನ್ನು ಭೇಟಿ ಮಾಡಿಸುವುದಾಗಿ ದುಡ್ಡು ಪಡೆದಿದ್ದನಂತೆ" ಎಂದು ಹೇಳಿದರು.
ಅಂದ್ಹಾಗೆ, ದುಡ್ಡು ಮಾಡುತ್ತಿರುವವನ ಹೆಸರು ಬಹಿರಂಗ ಆಗಿಲ್ಲ. ಆದ್ರೆ, ಆತನ ಫೋಟೋ ಮಾತ್ರ ಎಲ್ಲೆಡೆ ಹರಿದಾಡುತ್ತಿದೆ.
ಒಂದಂತೂ ಸತ್ಯ, ಯಾರಿಂದಲೂ ಹಣ ಪಡೆಯುವ ಉದ್ದೇಶ ಉಪೇಂದ್ರ ರವರಿಗಿಲ್ಲ. ಹೀಗಾಗಿ, 'ಪ್ರಜಾಕೀಯ' ಹಾಗೂ 'ಉಪೇಂದ್ರ' ಹೆಸರಲ್ಲಿ ಯಾರೇ ದುಡ್ಡು ಕೇಳಿದರೂ, ಕೊಡಬೇಡಿ. ಮೋಸ ಮಾಡುವವರನ್ನು ನಂಬಿ ಮೋಸ ಹೋಗ್ಬೇಡಿ.


Click it and Unblock the Notifications











