ಸೆಟ್ಟೇರಿದೆ ಹಾಸ್ಯದ ಜೊತೆಗೆ ಫಿಲಾಸಫಿ ಹೇಳುವ 'ಆದಿ ಪುರಾಣ'
ಕಳೆದ ಹನ್ನೆರಡು ವರ್ಷಗಳಿಂದ ಸಂಕಲನಕಾರರಾಗಿದ್ದ ಮೋಹನ್ ಕಾಮಾಕ್ಷಿ 'ಆದಿ ಪುರಾಣ' ಚಿತ್ರದಿಂದ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ 'ಮೆಲೋಡಿ' ಮತ್ತು 'ಪ್ರೀತಿ ಕಿತಾಬು' ಚಿತ್ರ ನಿರ್ಮಿಸಿದ್ದ ಶಮಂತ್.ಕೆ.ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಸಹೋದರ ಬಾಲಾಜಿ ಕ್ಲಾಪ್ ಮಾಡುವ ಮೂಲಕ 'ಆದಿ ಪುರಾಣ' ಚಿತ್ರಕ್ಕೆ ಕಳೆದ ಶುಕ್ರವಾರ (23 ಜೂನ್) ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಹಕರಾದ ಎಚ್.ಎಂ.ರಾಮಚಂದ್ರ ಚಿತ್ರಕ್ಕೆ ಕ್ಯಾಮರಾ ಚಾಲನೆ ಮಾಡಿದರು.

'ಅದಿ ಪುರಾಣ' ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಕಚಗುಳಿ ಇಡುವ ಸಂಭಾಷಣೆ ಮತ್ತು ಹೊಸತನದ ನಿರೂಪಣೆ ಇರಲಿದೆ.
ಎಲ್ಲ ಹೊಸ ಪ್ರತಿಭೆಗಳನ್ನು ಒಟ್ಟುಗೂಡಿಸಿ ಹೊಸ ತಂಡ ಕಟ್ಟಿದ್ದಾರೆ ನಿರ್ದೇಶಕ ಮೋಹನ್ ಕಾಮಾಕ್ಷಿ. ಚಿತ್ರಕ್ಕೆ ಶಶಾಂಕ್ ನಾಯಕರಾಗಿದ್ದು, ಅಹಲ್ಯ ಸುರೇಶ್ ಮತ್ತು ಮೋಕ್ಷ ಕುಶಾಲ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.

ರಂಗಾಯಣ ರಘು, ನಾಗೇಂದ್ರ ಶಾ, ಕರಿಸುಬ್ಬು, ವತ್ಸಲಾ ಮೋಹನ್ ಮತ್ತಿತರ ರಂಗಭೂಮಿ ಕಲಾವಿದರು ಚಿತ್ರದ ತಾರಾಗಣದಲ್ಲಿ ಇದ್ದಾರೆ.
ರಂಗಭೂಮಿ ಹಿನ್ನಲೆ ಇರುವ ವಿಕ್ರಮ್ ವಸಿಷ್ಟ, ಚಂದನ ಹಾಗೂ ಖ್ಯಾತ ಸಿತಾರ್ ವಾದಕಿ ಶೃತಿ ಕಾಮತ್ ರವರ ಪುತ್ರ ಸಿದ್ದಾರ್ಥ್ ಕಾಮತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಹಲವಾರು ಹಿರಿಯ ಛಾಯಾಗ್ರಾಹಕರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಗುರುಪ್ರಸಾದ್ ಈ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗುತ್ತಿದ್ದಾರೆ. ಮೋಹನ್ ಕಾಮಾಕ್ಷಿ ಮತ್ತು ಮಹೇಂದ್ರ ರಾವ್ ಚಿತ್ರಕ್ಕೆ ಹಾಸ್ಯಭರಿತ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

'ಆದಿ ಪುರಾಣ' ಚಿತ್ರ ಹಾಸ್ಯದ ಜೊತೆಗೆ ಫಿಲಾಸಫಿಯನ್ನೂ ಒಳಗೊಂಡಿದೆ. ಜುಲೈ 3 ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದೆ. ಒಂದು ಹಾಡನ್ನು ಕೆ.ಆರ್.ಎಸ್ ಬ್ಯಾಕ್ ವಾಟರ್ ನಲ್ಲಿ ಇರುವ ದೇವಸ್ಥಾನದಲ್ಲಿ ಚಿತ್ರೀಕರಿಸುವ ಯೋಚನೆಯಲ್ಲಿದೆ ಚಿತ್ರತಂಡ.


Click it and Unblock the Notifications











