ಐಟಿ ಅಧಿಕಾರಿಗಳು ಇವರನ್ನೇ ಟಾರ್ಗೆಟ್ ಮಾಡಲು ಕಾರಣ ಇದಿರಬಹುದೇ?
ಇಂದು ಬೆಳ್ಳಂಬೆಳಗ್ಗೆ ಸ್ಯಾಂಡಲ್ವುಡ್ ನಟ ನಿರ್ಮಾಪಕರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳಿಂದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ರೇಡ್ ನಡೆದಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ದೊಡ್ಡ ಪ್ರಮಾಣದ ಐಟಿ ರೇಡ್ ನಡೆದಿದೆ. ಕರ್ನಾಟಕ-ಗೋವಾ ವಲಯದ ಹಿರಿಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರ್ನಾಲ್ಕು ತಿಂಗಳಿನಿಂದ ಮಾಹಿತಿ ಕಲೆ ಹಾಕಿದ್ದ ಅಧಿಕಾರಿಗಳು ಇಂದು ಫೀಲ್ಡ್ ಗೆ ಇಳಿದಿದ್ದಾರೆ.
ಕನ್ನಡದ ನಾಲ್ಕು ನಟರು ಹಾಗೂ ನಾಲ್ಕು ನಿರ್ಮಾಪಕರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ನಟರಾದ ಶಿವರಾಜ್ ಕುಮಾರ್, ಯಶ್, ಪುನೀತ್ ರಾಜ್ ಕುಮಾರ್, ಸುದೀಪ್, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಜಯಣ್ಣ, ವಿಜಯ್ ಕಿರಗಂದೂರು ಹಾಗೂ ಸಿ ಆರ್ ಮನೋಹರ್ ಅವರ ನಿವಾಸಗಳ ದಾಖಲೆ ಪರಿಶೀಲನೆ ಆಗುತ್ತಿದೆ.
ಅಂದಹಾಗೆ, ಐಟಿ ಅಧಿಕಾರಿಗಳು ಇದೇ ನಟ ಹಾಗೂ ನಿರ್ಮಾಪಕರ ಮೇಲೆ ದಾಳಿ ಮಾಡಲು ಕಾರಣ ಏನಿರಬಹುದು ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ. ಈ ಎಂಟು ಮನೆಗಳ ಮೇಲೆ ಐಟಿ ರೇಡ್ ಆಗಲು ಈ ಕೆಳಗಿನ ಕೆಲ ಕಾರಣಗಳು ಇರಬಹುದು. ಮುಂದೆ ಓದಿ...

ಪುನೀತ್ ನಿರ್ಮಾಣ ಸಂಸ್ಥೆ
ನಟ ಪುನೀತ್ ರಾಜ್ ಕುಮಾರ್ ಕನ್ನಡದ ಸ್ಟಾರ್ ನಟ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಪುನೀತ್ ಕೂಡ ಒಬ್ಬರು. ಅಲ್ಲದೆ ಪುನೀತ್ ರಾಜ್ ಕುಮಾರ್ ಈಗ ತಮ್ಮ ಆದ ನಿರ್ಮಾಣ ಸಂಸ್ಥೆ ಹಾಗೂ ಆಡಿಯೋ ಕಂಪನಿ ಹೊಂದಿದ್ದಾರೆ. ಜಾಹಿರಾತು ಕೂಡ ಪುನೀತ್ ಅವರ ಆದಾಯವಾಗಿದೆ.

ಸುದೀಪ್ 100 ಕೋಟಿ ಸಿನಿಮಾ
ನಟ ಸುದೀಪ್ ಸಂಭಾವನೆ ಕೂಡ ಬಹಳ ದೊಡ್ಡಿದಿದೆ. ಸಿನಿಮಾ, ಜಾಹಿರಾತು, ಬಿಗ್ ಬಾಸ್, ಖಾಸಗಿ ಕಾರ್ಯಕ್ರಮಗಳಿಂದ ಸುದೀಪ್ ವರಮಾನ ಹೊಂದಿದ್ದಾರೆ. ಅಲ್ಲದೆ ಇತ್ತೀಚಿಗಷ್ಟೆ ಸುದೀಪ್ ತಮ್ಮ ಬ್ಯಾನರ್ ಮೂಲಕವೇ ನೂರು ಕೋಟಿ ಬಜೆಟ್ ನ ಸಿನಿಮಾ ಮಾಡುತ್ತಾರೆ ಎಂದು ಸುದ್ದಿ ಕೂಡ ಇತ್ತು. ಜೊತೆಗೆ 'ಬಿಲ್ಲ ರಂಗ ಭಾಷ' ಚಿತ್ರಕ್ಕೆ ಕೂಡ ಕಿಚ್ಚ ಬಂಡವಾಳ ಹಾಕುತ್ತಿದ್ದಾರೆ.

ಶಿವಣ್ಣ ಸಾಲು ಸಿನಿಮಾಗಳು
ನಟ ಶಿವರಾಜ್ ಕುಮಾರ್ ಕುಮಾರ್ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಅವರು ಕೂಡ ತಮ್ಮದೆ ಆದ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ಶ್ರೀ ಮುತ್ತು ಸಿನಿ ಸರ್ನಿಸ್ ಬ್ಯಾನರ್ ನಲ್ಲಿ ಶಿವಣ್ಣ ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸೀರಿಸ್ ಗೆ ಬಂಡವಾಳ ಹಾಕುತ್ತಿದ್ದಾರೆ.

ಯಶ್ 'ಕೆಜಿಎಫ್' ಯಶಸ್ಸು
ನಟ ಯಶ್ 'ಕೆಜಿಎಫ್' ಸಿನಿಮಾಗಾಗಿ ದೊಡ್ಡ ಪ್ರಮಾಣದ ಸಂಭಾವನೆ ಪಡೆದಿದ್ದಾರೆ. ಎರಡ್ಮೂರು ವರ್ಷ ಈ ಸಿನಿಮಾಗಾಗಿಯೇ ಯಶ್ ತಮ್ಮ ಸಮಯ ಮೂಡಿಪಾಗಿಟ್ಟಿದ್ದು, ಸಂಭಾವನೆ ಪ್ರಮಾಣವನ್ನು ಕೂಡ ಹೆಚ್ಚು ನೀಡಲಾಗಿದೆ ಎಂಬ ಮಾತಿದೆ. ಜೊತೆಗೆ 'ಕೆಜಿಎಫ್' ಸಿನಿಮಾ ಕಲೆಕ್ಷನ್ ಕೂಡ ದಾಖಲೆಯನ್ನ ನಿರ್ಮಾಣ ಮಾಡಿತ್ತು.

ರಾಕ್ ಲೈನ್ ದೊಡ್ಡ ಬಂಡವಾಳ
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕನ್ನಡ ಪಾತ್ರವಲ್ಲದೆ ಇತರ ಭಾಷೆಯ ದೊಡ್ಡ ದೊಡ್ಡ ಸಿನಿಮಾಗಳನ್ನು ಸಹ ನಿರ್ಮಾಣ ಹಾಗೂ ಹಂಚಿಕೆ ಮಾಡಿದ್ದರು. ರಜನಿಕಾಂತ್ ಅವರ 'ಲಿಂಗ' ಹಾಗೂ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯಿಜಾನ್' ಸಿನಿಮಾಗಳಿಗೆ ಸಹ ಬಂಡವಾಳ ಹಾಕಿದ್ದರು. ಅವರ 'ನಟ ಸಾರ್ವಭೌಮ' ಸಿನಿಮಾ ಕೂಡ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ.

ಸಿ ಆರ್ ಮನೋಹರ್ ಬಿಗ್ ಬಜೆಟ್
ಸಿ ಆರ್ ಮನೋಹರ್ ಇತ್ತೀಚಿಗೆ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ 'ದಿ ವಿಲನ್' ಚಿತ್ರವನ್ನ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಕೂಡ ಕನ್ನಡ ಬಿಗ್ ಬಜೆಟ್ ಚಿತ್ರವಾಗಿತ್ತು. ನಿರ್ಮಾಪಕ ಮಾತ್ರವಲ್ಲದೆ ಸಿ ಆರ್ ಮನೋಹರ್ ವಿಧಾನ ಪರಿಷತ್ ಸದಸ್ಯರು ಕೂಡ ಆಗಿದ್ದಾರೆ.

ಜಯಣ್ಣ ಯಶಸ್ವಿ ಸಿನಿಮಾಗಳು
ಕನ್ನಡದ ಹೆಸರಾಂತ ನಿರ್ಮಾಪಕರ ಪೈಕಿ ಜಯಣ್ಣ ಕೂಡ ಒಬ್ಬರಾಗಿದ್ದಾರೆ. ಅವರ ನಿರ್ಮಾಣದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ 50 ಕೋಟಿ ಗಳಿಕೆ ಮಾಡಿತ್ತು. ಇದರ ಜೊತೆಗೆ 'ಗೂಗ್ಲಿ', 'ರಣವಿಕ್ರಮ', 'ರುಸ್ತುಂ' ರೀತಿಯ ದೊಡ್ಡ ದೊಡ್ಡ ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ.

ವಿಜಯ್ ಕಿರಗಂದೂರು ಆದಾಯ ಮೂಲಗಳು
'ಕೆಜಿಎಫ್' ಸಿನಿಮಾ ಕಲೆಕ್ಷನ್ ನಲ್ಲಿ ಇಡೀ ಕನ್ನಡ ಚಿತ್ರರಂಗದಲ್ಲಿಯೇ ದಾಖಲೆ ಬರೆದಿದೆ. ಕನ್ನಡ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಿಂದ ದುಡ್ಡು ಬಂದು ನಿರ್ಮಾಪಕರ ಜೇಬಿಗೆ ಬೀಳುತ್ತಿದೆ. ಇದು ಸಾಮಾನ್ಯವಾಗಿಯೇ ಐಟಿ ಅಧಿಕಾರಗಳ ಗಮನ ಸೆಳೆದಿರುತ್ತದೆ. ಸಿನಿಮಾ ಮಾತ್ರವಲ್ಲದೆ ವಿಜಯ್ ಉದ್ಯಮಿ ಕೂಡ ಆಗಿದ್ದಾರೆ.


Click it and Unblock the Notifications











