ನಟ ಕಮಲ್ ಹಾಸನ್ ಮಾತಿಗೆ ನಿಬ್ಬೆರಗಾದ ಕನ್ನಡಿಗರು
ಭಾರತೀಯ ಚಿತ್ರರಂಗದ ಮೇರು ನಟ ಕಮಲ್ ಹಾಸನ್ ಅವರು 70 ಹಾಗೂ 80ರ ದಶಕದಲ್ಲಿ ಕನ್ನಡ ಚಿತ್ರಗಳನ್ನು ನೋಡುವ ಸಲುವಾಗಿ ಬೆಂಗಳೂರಿಗೆ ಬರುತ್ತಿದ್ದನ್ನು ನೆನಪಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಸಿನಿಮಾ ಶತಮಾನೋತ್ಸವ ಸಂಭ್ರಮದಲ್ಲಿ ಅವರು ಭಾನುವಾರ (ಸೆ.22) ಮಾತನಾಡುತ್ತಿದ್ದರು.
ತಮ್ಮ ಗುರುಗಳಾದ ಕೆ.ಬಾಲಚಂದರ್ ಅವರು ಎಪ್ಪತ್ತು, ಎಂಬತ್ತರ ದಶಕದಲ್ಲಿ ಕರ್ನಾಟಕಕ್ಕೆ ಬಂದು ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದರು. ಆಗ ಕನ್ನಡದಲ್ಲಿ ಸೂಕ್ಷ್ಮ ಸಂವೇದಿ ಚಿತ್ರಗಳು ಬರುತ್ತಿದ್ದಂತಹ ಕಾಲ. ನಮಗೂ ಬೆಂಗಳೂರಿಗೆ ಹೋಗಿ ಸಿನಿಮಾಗಳನ್ನು ನೋಡುವಂತೆ ಅವರು ಸಲಹೆ ನೀಡುತ್ತಿದ್ದರು.
ಆ ಕಾಲ ಮತ್ತೆ ಕನ್ನಡ ಚಿತ್ರರಂಗದಲ್ಲಿ ಬರಲಿ ಎಂದು ಕಮಲ್ ಆಶಿಸಿದರು. ನಾನು ಕನ್ನಡಿಗನಾಗಲು ಇಷ್ಟಪಡುತ್ತೇನೆ ಎಂದೂ ಈ ಸಂದರ್ಭದಲ್ಲಿ ಕಮಲ್ ಹೇಳಿದರು. ಅವರ ಈ ಮಾತಿಗೆ ಕನ್ನಡ ಚಿತ್ರರಂಗದ ತಾರೆಗಳೂ ನಿಬ್ಬೆರಗಾದರು. ಜವಾಹರ್ ಲಾಲ್ ನೆಹರು ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತು.ಕನ್ನಡ ಚಿತ್ರರಂಗದಲ್ಲಿ ಉತ್ತಮ ಪ್ರೇಕ್ಷಕರಿದ್ದಾರೆ. ಅವರೆಲ್ಲಾ ನನ್ನನ್ನು ಒಪ್ಪಿಕೊಂಡಿದ್ದಾರೆ. ಕಲಾವಿದನಿಗೆ ಭಾಷೆ ಮುಖ್ಯ ಅಲ್ಲ. ನಾವೆಲ್ಲರೂ ಒಂದೇ. ಈ ರೀತಿಯ ಕಾರ್ಯಕ್ರಮಗಳು ಎಲ್ಲಾ ಭಾಷಾ ಚಿತ್ರರಂಗದಲ್ಲೂ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಖ್ಯಾತ ಅಭಿನೇತ್ರಿ ಬಿ.ಸರೋಜಾದೇವಿ ಅವರು ಕನ್ನಡಿಗರಾದರೂ ಅವರನ್ನು ತಮಿಳು ಪ್ರೇಕ್ಷಕರು ನಮ್ಮವರೆಂದುಕೊಂಡಿದ್ದಾರೆ. ಅವರನ್ನು ಕನ್ನಡಿಗರೆಂದರೆ ಚೆನ್ನೈನವರು ಗಲಾಟೆ ಮಾಡುತ್ತಾರೆ. ತಾಯಿ ನಾಗೇಶ್ ಅವರು ಕನ್ನಡಿಗರು. ಆದರೆ ಅವರನ್ನು ತಮಿಳರೆಂದು ಗುರುತಿಸುತ್ತಾರೆ. ನಾನು ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಕನ್ನಡಿಗನಾಗಲು ಇಷ್ಟಪಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚು ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಕನ್ನಡದ 60 ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಅವರಲ್ಲಿ ಗಿರೀಶ್ ಕಾಸರವಳ್ಳಿ, ಕೆ.ಎಸ್.ಎಲ್.ಸ್ವಾಮಿ, ಬಿ.ಎನ್.ಗಂಗಾಧರ್, ಕೆ.ಸಿ.ಎನ್.ಚಂದ್ರಶೇಖರ್, ಬಿ.ಸರೋಜಾದೇವಿ, ರಾಜನ್ ನಾಗೇಂದ್ರ, ಹಂಸಲೇಖ, ಬಿ.ಕೆ.ಸುಮಿತ್ರಾ, ಲೀಲಾವತಿ ಮುಂತಾದವರಿದ್ದಾರೆ.


Click it and Unblock the Notifications












