ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
ಜನಪ್ರಿಯ ನಟ ಪ್ರೇಮ್ ತಮ್ಮ ಕುಟುಂಬದೊಂದಿಗೆ ನಿರ್ಮಾಪಕರ ಮನೆಗೆ ಹೋಗಿದ್ದಾಗ ಮನೆಯ ಬಳಿ ದೊಡ್ಡ ನಾಗರಹಾವೊಂದು ಕಾಣಿಸಿಕೊಂಡು ಕ್ಷಣ ಕಾಲ ಆತಂಕದ ವಾತಾವರಣ ಉಂಟಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬಳ್ಳಿಯ ತಾಜ್ ನಗರದಲ್ಲಿರುವ ಚಲನಚಿತ್ರ ನಿರ್ಮಾಪಕ ವೆಂಕರೆಡ್ಡಿ ಅವರ ಮನೆಗೆ ನಟ ಪ್ರೇಮ್ ಹಾಗೂ ಕುಟುಂಬದವರು ಭೇಟಿ ನೀಡಿದ್ದರು. ಆಗ ಮನೆಯ ಹಿಂದಿನ ಲಕ್ಷ್ಮೀ ದೇವಸ್ಥಾನದ ಹತ್ತಿರದ ಅಂದಾಜು 6 ಅಡಿಯ ನಾಗರಹಾವು ಕಾಣಿಸಿಕೊಂಡಿತು. ಈ ವೇಳೆ ಹಾವು ಹೆಡೆಯನ್ನು ಎತ್ತಿ ಬುಸುಗುಡುತ್ತಿತ್ತು. ಇದರಿಂದ ದೇವಸ್ಥಾನಕ್ಕೆ ಬಂದ ಭಕ್ತರು ಹಾಗೂ ಸ್ಥಳೀಯರು ಭಯಗೊಳ್ಳುವಂತಾಗಿತ್ತು.
ಕೂಡಲೇ ನಿರ್ಮಾಪಕ ವೆಂಕರೆಡ್ಡಿ ಅವರು, ಉರಗತಜ್ಞ ಸಂಗಮೇಶ ಅವರಿಗೆ ಕರೆ ಮಾಡಿ ಹಾವು ಕಾಣಿಸಿಕೊಂಡಿರುವ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಉರಗ ರಕ್ಷಕ ಸ್ನೇಕ್ ಸಂಗಮೇಶ ಲಕ್ಷ್ಮೀ ಗುಡಿಯ ಹತ್ತಿರದಲ್ಲಿ ಅವಿತುಕೊಂಡಿದ್ದ ಹಾವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿದ್ದಾರೆ.

ಹಾವು ಹಿಡಿದ ಸಂಗಮೇಶ್, ನಿರ್ಮಾಪಕರ ಹಾಗೂ ಪ್ರೇಮ್ರ ಕುಟುಂಬ ಸದಸ್ಯರ ಮುಂದೆ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ ಹಾಗೂ ಮತ್ತೊಮ್ಮೆ ಹಾವು ಹಿಡಿಯುವ ಬಗ್ಗೆ ಪ್ರಾತ್ಯಕ್ಷಿತೆ ನೀಡಿದ್ದಾರೆ.
ಹಾವುಗಳು ಹಾಲು ಕುಡಿಯುವುದಿಲ್ಲ ಅಲ್ಲವೆ? ಎಂಬ ಪ್ರೇಮ್ರ ಪ್ರಶ್ನೆಗೆ ಉತ್ತರಿಸಿರುವ ಸಂಗಮೇಶ್, ಹೌದು, ಹಾವುಗಳು ಹಾಲನ್ನು ಕುಡಿಯುವುದಿಲ್ಲ, ಅವು ಹಾಲು ಕುಡಿದರೆ ಅವಕ್ಕೆ ಅನಾರೋಗ್ಯ ಉಂಟಾಗುತ್ತದೆ. ಇಲಿ, ಬೆಕ್ಕಿನ ಮರಿ ಇತರೆ ಜೀವಿಗಳನ್ನು ತಿಂದು ಜೀವನ ಸಾಗಿಸುತ್ತವೆ ಎಂದು ಸಂಗಮೇಶ್ ಮಾಹಿತಿ ನೀಡಿದ್ದಾರೆ.
ಮುಂದುವರೆದು, ಈ ಹಾವು (ನಾಗರಹಾವು)ಗಳು ಭಾರತದ ಅತ್ಯಂತ ವಿಷಕಾರಿ ಜಂತುಗಳು, ಆದರೆ ಇವು ಯಾವುದೇ ಜೀವಿಯ ಮೇಲೆ ಪೂರ್ಣ ವಿಷ ಪ್ರಯೋಗಿಸುವುದಿಲ್ಲ. ಜೀವಿಯ ಗಾತ್ರ, ತನಗೆ ಎದುರಾದ ಆಪತ್ತಿಗೆ ತಕ್ಕಂತೆ ಅವು ವಿಷ ಹೊರಸೂಸುತ್ತವೆ. ಆದರೆ ಕಾಳಿಂಗ ಸರ್ಪ ಹಾಗಲ್ಲ. ಅವು ಒಂದೇ ಬಾರಿ ಎಲ್ಲ ವಿಷಯವನ್ನು ಶತ್ರುವಿನ ಮೇಲೆ ಪ್ರಯೋಗಿಸುತ್ತದೆ ಹಾಗಾಗಿ ಜೀವಿಗಳು ಕೂಡಲೇ ಸಾಯುತ್ತವೆ ಎಂದು ಹೇಳಿದ್ದಾರೆ.


Click it and Unblock the Notifications











