ಭಾರತ ಸರ್ಕಾರದ ಅಂಚೆ ಇಲಾಖೆಯಿಂದ ಗೌರವ: ಶೀಘ್ರದಲ್ಲೇ ಕಿಚ್ಚನ ವಿಶೇಷ 'ಅಂಚೆ ಲಕೋಟೆ' ಬಿಡುಗಡೆ!
ಕಿಚ್ಚ ಸುದೀಪ್ ಅಭಿಮಾನಿಗಳು ಹೆಮ್ಮೆ ಪಡುವಂತಹ ಸುದ್ದಿಯೊಂದು ಬಂದಿದೆ. ಭಾರತೀಯ ಅಂಚೆ ಇಲಾಖೆಯು ನಟ ಕಿಚ್ಚ ಸುದೀಪ್ ಅವರ ವಿಶೇಷ 'ಅಂಚೆ ಲಕೋಟೆ'ಯನ್ನು ಹೊರ ತರಲು ಮುಂದಾಗಿದೆ. ಇದಕ್ಕೆ ಒಪ್ಪಿ ಕಿಚ್ಚ ಸುದೀಪ್ ಕೂಡ ಸಹಿ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಸಾಮಾಜಿಕ ಕೆಲಸಗಳಿಂದಲೂ ಸುದೀಪ್ ಮನೆಮಾತಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ಕಿಚ್ಚನ ಸಾಧನೆ ಪುರಸ್ಕರಿಸಿ ಅಂಚೆ ಇಲಾಖೆ ಈ ಲಕೋಟೆ ಹೊರ ತರುತ್ತಿದೆ.
ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ ಆಗಾಗ್ಗೆ ವಿಶೇಷ 'ಅಂಚೆ ಲಕೋಟೆಯನ್ನು' ಬಿಡುಗಡೆ ಮಾಡುತ್ತದೆ. ಅದೇ ಪ್ರಕಾರ 25 ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಅದರ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಅಧೀಕ್ಷರಾದ ಮಾದೇಶ್, ನಟ ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ನಿರಾಕ್ಷೇಪಣ ಪತ್ರ ಪಡೆದುಕೊಂಡಿದ್ದಾರೆ.

ಶೀಘ್ರದಲ್ಲೇ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ನಡೆಯಲಿದ್ದು, ಸುದೀಪ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಿಚ್ಚ ಸುದೀಪ್ ಅವರ ಸಾಧನೆ ಗುರುತಿಸಿ ವಿಶೇಷ 'ಅಂಚೆ ಲಕೋಟೆ ಮೂಲಕ ಗೌರವ ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಅಭಿಮಾನಿಗಳು ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.
1997ರಲ್ಲಿ 'ತಾಯವ್ವ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಕಿಚ್ಚ ಸುದೀಪ್ ಸಾಕಷ್ಟು ಏಳುಬೀಳು ಕಂಡು ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ, ಗಾಯಕರಾಗಿ, ನಿರ್ಮಾಪಕರಾಗಿ, ಕಿರುತೆರೆಯ ನಿರೂಪಕರಾಗಿಯೂ ಸುದೀಪ್ ಸಕ್ಸಸ್ ಕಂಡಿದ್ದಾರೆ.
ಒಂದ್ಕಾಲದಲ್ಲಿ ಸುದೀಪ್ ಅವರಿಗೆ 'ಐರೆನ್ ಲೆಗ್' ಎನ್ನುವ ಹಣೆಪಟ್ಟಿ ಕಟ್ಟಿದ್ದರು. ಆದರೆ ಅದನ್ನೆಲ್ಲಾ ಮೀರಿ ಸುದೀಪ್ ಗೆಲುವು ಕಂಡರು. ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ನಟಿಸಿ ಗೆದ್ದರು. ಅಮಿತಾಬ್ ಬಚ್ಚನ್, ಚಿರಂಜೀವಿರಂತಹ ಸೂಪರ್ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಾಜಮೌಳಿ, ರಾಮ್ಗೋಪಾಲ್ ವರ್ಮಾ ನಿರ್ದೇಶನದಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಪರಭಾಷಾ ಸೂಪರ್ ಸ್ಟಾರ್ಗಳೇ ಕಿಚ್ಚನ ನಟನೆಗೆ ಬಹುಪರಾಕ್ ಹೇಳ್ತಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಅಭಿಮಾನಿಗಳ ಪ್ರೀತಿಯ ಬಾದ್ಶಾ ಸುದೀಪ್ ಸಂಚಲನ ಸೃಷ್ಟಿಸಿದ್ದಾರೆ.

Recommended Video
ಒಂದ್ಕಡೆ 'ವಿಕ್ರಾಂತ್ ರೋಣ' ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಅಂದಾಜು 200 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಕಿಚ್ಚನ ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಬಾಕಿಯಿದೆ. 'ವಿಕ್ರಾಂತ್ ರೋಣ' ಸಕ್ಸಸ್ ಸಂಭ್ರಮದಲ್ಲೇ ಹುಟ್ಟುಹಬ್ಬ ಆಚರಿಸಲು ಮುಂದಾಗಿರುವ ಕಿಚ್ಚನಿಗೆ ಅಂಚೆ ಇಲಾಖೆಯಿಂದ ವಿಶೇಷ 'ಅಂಚೆ ಲಕೋಟೆ'ಯ ಉಡುಗೊರೆಯೂ ಸಿಗುತ್ತಿದೆ. ಇನ್ನು ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'ವಿಕ್ರಾಂತ್ ರೋಣ' ಸಿನಿಮಾ ಓಟಿಟಿಗೂ ಬಂದು ಸದ್ದು ಮಾಡಲಿದೆ. ಅದೇ ದಿನ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡುವ ಸಾಧ್ಯತೆಯಿದೆ.


Click it and Unblock the Notifications











