ಕಾಟೇರ ಕದನ ; ಯಾರು ಇರಲಿ ಇಲ್ಲದಿರಲಿ ಸಿನಿಮಾರಂಗ ಇರುತ್ತೆ ಎಂದ ಪವನ್ ಕುಮಾರ್..!
ಒಂದು ಸಿನಿಮಾ ಎಂಬುದು ಯಾರೋ ಒಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವಂಥಾದ್ದಲ್ಲ. ಅದರಲ್ಲಿ ಡೈರೆಕ್ಟರ್, ಹೀರೋ, ಕ್ಯಾಮೆರಾದಿಂದ ಮೊದಲ್ಗೊಂಡು ಲೈಟ್ ಬಾಯ್ಗಳ ತನಕ ನೂರಾರು ಮಂದಿಯ ಶ್ರಮವಿರುತ್ತೆ. ಕನ್ನಡದ ಖ್ಯಾತ ನಿರ್ದೇಶಕ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಹೇಳಿದ್ದು ಇದನ್ನೇ.
ಹೌದು. ನಿಮಗೆ ಗೊತ್ತು ಕಾಟೇರ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದಂತೆಯೇ ಇದು ಯಾರ ಗೆಲುವು ಎಂಬ ಪ್ರಶ್ನೆ ಎದ್ದಿದೆ. ಕ್ರೆಡಿಟ್ಟಿಗಾಗಿ, ಸಣ್ಣ ಮೆಚ್ಚುಗೆಗಾಗಿ, ಗೆಲುವಿನಲ್ಲಿ ತಮ್ಮದೂ ಪಾಲಿದೆ ಎಂಬುದನ್ನು ನಿರೂಪಿಸೋದಕ್ಕಾಗಿ ಕಸರತ್ತು ನಡೆಯುತ್ತಿದೆ. ವಾದ - ವಿವಾದದ ಸ್ವರೂಪವನ್ನೂ ಪಡೆದಿದೆ.

ಮುಂದೆ ಈ ರಂಪ-ರಾಮಾಯಣ ಎಲ್ಲಿ ಹೋಗಿ ತಲುಪುತ್ತೆ ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ, ಪವನ್ ಕುಮಾರ್ ಸದ್ಯಕ್ಕೆ ಚಿತ್ರರಂಗದ ಈ ಬೆಳವಣಿಗೆ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ಕಾಟೇರ ವಿವಾದದ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲವೆಂದಿರುವ ಪವನ್ ಕುಮಾರ್ ಯಾರು ಇರಲಿ ಇಲ್ಲದಿರಲಿ ಸಿನಿಮಾ ರಂಗ ಇದ್ದೇ ಇರುತ್ತೆ ಎಂದಿದ್ದಾರೆ.
ನ್ಯೂಸ್ ಫಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪವನ್ ಕುಮಾರ್, ಒಂದು ಸಿನಿಮಾಗೆ ನಾಯಕಷ್ಟೇ ಚಿತ್ರದ ತಂತ್ರಜ್ಞರು ಮುಖ್ಯ ಎಂದಿದ್ದಾರೆ. ಕ್ಯಾಮೆರಾ, ಕಲಾ ನಿರ್ದೇಶನ, ಎಡಿಟಿಂಗ್, ಸಂಗೀತ, ಸಾಹಸ ನಿರ್ದೇಶನ ಹೀಗೆ ಅನೇಕ ವಿಭಾಗಗಳಲ್ಲಿ ಹಗಲು ರಾತ್ರಿ ದುಡಿಯುವ ಅದೆಷ್ಟೋ ಜನರ ಬೆವರು ಒಂದು ಸಿನಿಮಾದ ಹಿಂದೆ ಇರುತ್ತೆ ಆದರೆ ಅವರು ಸುರಿಸಿದ ಬೆವರಿಗೆ ತಕ್ಕ ಫಲ ಬಹುತೇಕ ಬಾರಿ ಸಿಗಲ್ಲವೆಂದಿದ್ದಾರೆ.

ಕೇವಲ ನಾಯಕ ಅಷ್ಟೇ ಅಲ್ಲ ನಿರ್ಮಾಪಕರ ಕಷ್ಟ ನಷ್ಟದ ಬಗ್ಗೆಯೂ ಮಾತನಾಡಿರುವ ಪವನ್ ಕುಮಾರ್, ನಿರ್ಮಾಪಕರು ಹಾಗೂ ನಾಯಕ ನಟರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಒಬ್ಬರಿಂದ ಯಾವುದು ಸಾಧ್ಯವಾಗಲ್ಲ ಅಂದಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರು ದೊಡ್ಡವರು ಮತ್ತೊಬ್ಬರು ಸಣ್ಣವರು ಅಂತಿಲ್ಲ. ಎಲ್ಲರೂ ಕೂಡ ಕನ್ನಡ ಚಿತ್ರರಂಗಕ್ಕೆ ಮುಖ್ಯವಾಗುತ್ತಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಾಟೇರ ಬಹುದೊಡ್ಡ ಗೆಲುವನ್ನ ಕಂಡಿದೆ. ಐತಿಹಾಸಿಕ ದಾಖಲೆ ಬರೆದಿದೆ. ಆದರೆ ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ನಡುವಿನ ವಾದ ವಿವಾದ ಕಾಟೇರ ಗೆಲುವಿನ ಸಂಭ್ರಮವನ್ನ ಮರೆಸಿದೆ.


Click it and Unblock the Notifications











