ರಿಮೇಕ್ ಚಿತ್ರಗಳಿಗೆ 2002 ಮಾರ್ಚ್ವರೆಗೆ ತೆರಿಗೆ ವಿನಾಯ್ತಿ
ಬೆಂಗಳೂರು : ಕನ್ನಡ ಚಿತ್ರೋದ್ಯಮಕ್ಕೆ ಸಮಗ್ರವಾಗಿ 'ಉದ್ದಿಮೆ"ಯ ಸ್ಥಾನಮಾನ ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ. ನಟ ವಿಷ್ಣುವರ್ಧನ್ ನೇತೃತ್ವದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ್ದ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ.
ಅಲ್ಲದೆ ರೀಮೇಕ್ ಚಿತ್ರಗಳಿಗೆ ಮಾರ್ಚ್ 2002ರವರೆಗೆ ಮನರಂಜನಾ ತೆರಿಗೆ ವಿನಾಯ್ತಿ ವಿಸ್ತರಿಸಲಾಗುವುದು ಎಂದೂ ಕೃಷ್ಣ ಪ್ರಕಟಿಸಿದ್ದಾರೆ. ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯ್ತಿ ವಿಸ್ತರಣೆ ಸುದ್ದಿ, ಚಿತ್ರೋದ್ಯಮದಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಏಕಗವಾಕ್ಷಿ ಪದ್ಧತಿಯನ್ನೂ ಶೀಘ್ರವೇ ಜಾರಿಗೆ ತರುವುದಾಗಿ ಅವರು ನಿಯೋಗಕ್ಕೆ ತಿಳಿಸಿದ್ದಾರೆ. ಈ ಪದ್ಧತಿ ಜಾರಿಗೆ ಬಂದರೆ, ಒಂದೇ ಕಡೆ ಅನುಮತಿ ಪಡೆದು ರಾಜ್ಯದ ಎಲ್ಲಿ ಬೇಕಾದರೂ ಚಿತ್ರೀಕರಣ ನಡೆಸುವ ಅವಕಾಶ ಲಭ್ಯವಾಗುತ್ತದೆ. ಈ ಹೊತ್ತು ಚಿತ್ರೀಕರಣ ನಡೆಸಲು ಹತ್ತಾರು ಇಲಾಖೆಗಳಿಂದ ಪೂರ್ವಾನುಮತಿ ಪಡೆಯುವ ಪರಿಸ್ಥಿತಿ ಇದೆ.
ಮುಖ್ಯಮಂತ್ರಿ ಅವರನ್ನು ಬೇಟಿ ಮಾಡಿದ ನಿಯೋಗದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್, ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್, ನಟ ಜಗ್ಗೇಶ್, ಶಾಸಕ ಹಾಗೂ ಚಿತ್ರನಟ ಯೋಗೀಶ್ವರ್, ರಾಜ್ ಅಭಿನಾನಿಗಳ ಸಂಘದ ಸಾ.ರಾ. ಗೋವಿಂದು, ಚಿತ್ರನಟಿ ಜಯಮಾಲಾ, ಸಿ.ವಿ.ಎಲ್. ಶಾಸ್ತ್ರೀ, ಮೊದಲಾದವರು ಇದ್ದರು.
(ಇನ್ಫೋ ವಾರ್ತೆ)


Click it and Unblock the Notifications