ತೂಗುದೀಪ ಫ್ಯಾಮಿಲಿ ಸಂಕ್ರಾಂತಿ ಸಂಭ್ರಮ; ಯಾರೆಲ್ಲಾ ಭಾಗಿ ಆಗಿದ್ದರು? ಇಲ್ಲಿದೆ ಫೋಟೋಸ್
ನಟ ದರ್ಶನ್ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಸಾಕಷ್ಟು ಸಂಕಷ್ಟ ಎದುರಿಸಿದ್ದ ದರ್ಶನ್ ಎಲ್ಲಾ ನೋವು ಮರೆತು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲೇ ಫ್ಯಾಮಿಲಿ ಸಮೇತ ಹಬ್ಬ ಆಚರಿಸಿದ್ದಾರೆ.
ಅಂದಹಾಗೆ ದರ್ಶನ್ಗೆ ಸಂಕ್ರಾಂತಿ ಹಬ್ಬ ಅಂದ್ರೆ ಬಹಳ ವಿಶೇಷ. ಕಾರಣ ಅವರು ಪ್ರಾಣಿ-ಪಕ್ಷಿ ಪ್ರೇಮಿ. ಮನೆಯ ರಾಸುಗಳಿಗೆ ಪೂಜೆ ಮಾಡಿ ಕಿಚ್ಚು ಹಾಯಿಸುವುದಕ್ಕಿಂತ ದೊಡ್ಡ ಹಬ್ಬ ಯಾವುದಿದೆ ಹೇಳಿ. ಪ್ರತಿವರ್ಷ ತಮ್ಮ ಫಾರ್ಮ್ಹೌಸ್ನಲ್ಲಿ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸುತ್ತಾರೆ. ಆಪ್ತರು ಅವರೊಟ್ಟಿಗೆ ಕೈ ಜೋಡಿಸುತ್ತಾರೆ. ಈ ಬಾರಿ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಕೂಡ ಜೊತೆಯಾಗಿದ್ದಾರೆ.

ಈ ಬಾರಿ ದರ್ಶನ್ ಸಂಕ್ರಾಂತಿ ಸಂಭ್ರಮಾಚರಣೆಯ ಫೋಟೊಗಳು, ವೀಡಿಯೋಗಳು ಕಳೆದೆರಡು ದಿನಗಳಿಂದ ವೈರಲ್ ಆಗುತ್ತಿದೆ. ವಿಜಯಲಕ್ಷ್ಮಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದರು. ಸ್ವತಃ ದರ್ಶನ್ ಪೋಸ್ಟ್ ಮಾಡಿ ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ್ದರು. ಬಹಳ ದಿನಗಳ ಬಳಿಕ ನೆಚ್ಚಿನ ನಟನ ಪೋಸ್ಟ್ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
"ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ" ಎಂದು ದರ್ಶನ್ ಬರೆದುಕೊಂಡಿದ್ದರು.
ಸದ್ಯ ದರ್ಶನ್ ಪುತ್ರ ವಿನೀಶ್ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾನೆ. ತಂದೆ-ತಾಯಿ ಹಾಗೂ ಚಿಕ್ಕಪ್ಪನ ಜೊತೆ ಹಬ್ಬ ಆಚರಿಸಿದ ಸಂಭ್ರಮದಲ್ಲಿದ್ದಾನೆ. ಮೈಸೂರಿನ ಟೀ. ನರಸಿಪುರ ರಸ್ತೆಯಲ್ಲಿ ದರ್ಶನ್ ಫಾರ್ಮ್ಹೌಸ್ ಇದೆ. ಅಲ್ಲಿ ಹತ್ತಾರು ಪ್ರಾಣಿ, ಪಕ್ಷಿಗಳನ್ನು ಸಾಕಿ ಸಲಹುತ್ತಿದ್ದಾರೆ. ಇತ್ತೀಚೆಗೆ ವಿವಿಧ ತಳಿಯ ಹಸು, ಎತ್ತು, ಕುದುರೆಗಳು ಅದಕ್ಕೆ ಸೇರಿಕೊಂಡಿವೆ.
ದರ್ಶನ್ ಬಿಟ್ಟರೆ ಫಾರ್ಮ್ಹೌಸ್ನಲ್ಲಿ ಕುಟುಂಬ ಸದಸ್ಯರು ಕಾಣಿಸಿಕೊಳ್ಳುವುದು ಕಮ್ಮಿ. ಆಗೊಮ್ಮೆ ಈಗೊಮ್ಮೆ ಪುತ್ರ ವಿನೀಶ್ ಅಲ್ಲಿ ಹೋಗುತ್ತಾನೆ. ಕಳೆದ ಬಾರಿ ತಂದೆ ಜೊತೆ ಸೇರಿ ವಿನೀಶ್ ಸಂಕ್ರಾಂತಿ ಆಚರಿಸಿದ್ದ ವೀಡಿಯೋ ವೈರಲ್ ಆಗಿತ್ತು. ಸಹೋದರ ದಿನಕರ್ ಕೂಡ ಬಹಳ ದಿನಗಳ ಬಳಿಕ ಫಾರ್ಮ್ಹೌಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಬೆಂಗಳೂರಿನ ನಿವಾಸದಿಂದ ದರ್ಶನ್ ಮೈಸೂರಿಗೆ ಪ್ರಯಾಣ ಬೆಳೆಸಿದ್ದರು.
ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದ್ದರು. ಬಳಿಕ ಫಾರ್ಮ್ಹೌಸ್ ತಲುಪಿದ್ದರು. ಫಾರ್ಮ್ಹೌಸ್ಗೆ ತೆರಳಿ ಸ್ನೇಹಿತರು ಹಾಗೂ ಅಲ್ಲಿನ ಸಿಬ್ಬಂದಿ ಜೊತೆ ಸೇರಿ ದರ್ಶನ್ ಸುಗ್ಗಿ ಸಂಭ್ರಮ ಆಚರಿಸಿದ್ದಾರೆ. ದಿನಕರ್ ಪತ್ನಿ ಮಗ ಕೂಡ ಈ ವೇಳೆ ಹಾಜರಿದ್ದರು.
ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂಕ್ರಾಂತಿ ಹಬ್ಬ ಆಚರಿಸಿ ಇಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ಶಸ್ತ್ರ ಚಿಕಿತ್ಸೆ ನಡೆಯಬೇಕಿದೆ. ಆದರೆ ಇಂದು ಕೂಡ ಸರ್ಜರಿ ನಡೆಯಲಿಲ್ಲ. ಇವತ್ತು ಕೇವಲ ಇಂಜೆಕ್ಷನ್ ಮಾತ್ರ ಕೊಟ್ಟಿದ್ದಾರೆ ಎನ್ನಲಾಗ್ತಿದೆ. 3 ಇಂಜೆಕ್ಷನ್ ಕೊಡಲಾಗುತ್ತದೆ. ಬಳಿಕ ಶಸ್ತ್ರ ಚಿಕಿತ್ಸೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.
L5, S1 ಸಮಸ್ಯೆಯಿಂದ ದರ್ಶನ್ ಬಳಲುತ್ತಿದ್ದಾರೆ. ಡಾ. ಅಜಯ್ ಹೆಗಡೆ ನೇತೃತ್ವದಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರು ನಟನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ದರ್ಶನ್ ಬೆನ್ನು ನೋವಿನ ಸಮಸ್ಯೆಗೆ ಸರ್ಜರಿ ನಡೆಸುವ ಬಗ್ಗೆ ವೈದ್ಯರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗ್ತಿದೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ದರ್ಶನ್ ಒಪ್ಪಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications











