ಮಹಾರಾಜ ನಿರ್ಮಾಪಕನ ಜೊತೆ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ; ಇಬ್ಬರ ಪ್ರೇಮಕಥೆಗೆ ಕಾರಣವಾಗಿದ್ಹೇಗೆ 'ಗಾಳಿಪಟ 2' ನಟಿ ಸಂಯುಕ್ತಾ ?
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ತೀರಾ ಇತ್ತೀಚೆಗೆ ಸಿಲುಕಿದ್ದ ಕನ್ನಡ ಚಿತ್ರರಂಗದ ''ಸಜನಿ'' ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಸುಂದರಂ ಉಂಗುರ ಬದಲಿಸಿಕೊಂಡಿದ್ದಾರೆ. ತಮ್ಮ ಎಂಗೇಜ್ಮೆಂಟ್ನ ಸುಂದರವಾದ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುಧನ್ ಸುಂದರಂ ಯಾರು ?
ಶರ್ಮಿಳಾ ಹೃದಯ ಗೆದ್ದ ಸುಧನ್ ಸುಂದರಂ ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ. ಪ್ಯಾಶನ್ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯಡಿ ಇಲ್ಲಿಯವರೆಗೆ ಹಲವು ಚಿತ್ರಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಆ ಪೈಕಿ ''ಕಪ್ಪಲ್''.. ''ನಿಬುಣನ್''.. ''ಸೀತಕಾತಿ''.. ''ಅನಬೆಲ್ ಸೇತುಪತಿ'' ಪ್ರಮುಖವಾದವು.
ಇನ್ನು, ವಿಜಯ್ ಸೇತುಪತಿ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ''ಮಹಾರಾಜ''ಗೆ ಹಣ ಹೂಡಿ ಭರ್ಜರಿ ಲಾಭ ಮಾಡಿದವರು ಬೇರೆ ಯಾರು ಅಲ್ಲ ಬದಲಿಗೆ ಇದೇ ಸುಧನ್ ಸುಂದರಂ. ಇವರ ನಿರ್ಮಾಣದ ಮತ್ತೊಂದು ಚಿತ್ರ ''ಪಾರ್ಕಿಂಗ್''ಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ.
ಶರ್ಮಿಳಾ ಮತ್ತು ಸುಧನ್ ಸುಂದರಂ ಪ್ರೇಮಕಥೆಗೆ ಸೇತುವೆಯಾದ ಸಂಯುಕ್ತಾ ಮೆನನ್
ಶರ್ಮಿಳಾಗೆ ಈಗ 38 ವರ್ಷ. ಇನ್ನು ನಿಮಗೆ ಗೊತ್ತು, 30 ವರ್ಷವಾಗುತ್ತಿದ್ದಂತೆಯೇ ನಮ್ಮ ಸಮಾಜ ಮದುವೆ ಒತ್ತಡ ಹಾಕಲು ಶುರು ಮಾಡುತ್ತೆ. ಹದಿಹರೆಯದವರಿಗೆ ಕುಂತಲ್ಲಿ.. ನಿಂತಲ್ಲಿ.. ಎದುರಾಗುವುದು ಈ ಮದುವೆಯ ಕುರಿತ ಪ್ರಶ್ನೆಗಳೇ. ಸೆಲೆಬಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ.
ಹೀಗಾಗಿಯೇ ಮದುವೆಯಾಗುವ ಆಲೋಚನೆಯನ್ನು ಶರ್ಮಿಳಾ ಮಾಂಡ್ರೆ ಗಂಭೀರವಾಗಿ ಮಾಡುತ್ತಿದ್ದರು. ಈ ಸಮಯದಲ್ಲಿ ಇವರಿಗೆ ಸಿಕ್ಕ ಚಿತ್ರವೇ ''ಗಾಳಿಪಟ 2''. ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಜೊತೆ ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದರು.

ಈ ಸಿನಿಮಾದ ಚಿತ್ರೀಕರಣದಲ್ಲಿ ಮದುವೆ ಆಗುವ ಬಗ್ಗೆ ಸಂಯುಕ್ತಾ ಬಳಿ ಶರ್ಮಿಳಾ ಚರ್ಚೆ ಮಾಡುತ್ತಿದ್ದರು. ಆ ಸಮಯದಲ್ಲಿ ಕೇವಲ ''ಗಾಳಿಪಟ 2'' ಮಾತ್ರವಲ್ಲದೇ ಸಂಯುಕ್ತಾ, ಸುಧನ್ ಸುಂದರಂ ನಿರ್ಮಾಣದ ''ರಾಮ್'' ಎಂಬ ಚಿತ್ರವನ್ನು ಕೂಡ ಮಾಡುತ್ತಿದ್ದರು.
ವಿಶೇಷ ಅಂದರೆ ಸುಧನ್ ಕೂಡ ಸಂಯುಕ್ತಾ ಹತ್ತಿರ ಮದುವೆಯ ಕುರಿತು ಚರ್ಚೆ ಮಾಡಿದ್ದರು. ಇಬ್ರೂ ಮದುವೆ ಬಗ್ಗೆಯೇ ಮಾತನಾಡುವುದನ್ನು ಕೇಳಿ ಸಂಯುಕ್ತಾ ಆ ನಂತರ ಶರ್ಮಿಳಾ ಹಾಗೂ ಸುಧನ್ ಸುಂದರಂ ಪ್ರೇಮಕಥೆಗೆ ಸೇತುವೆಯಾದರು. ಸಂಯುಕ್ತಾ ಮೂಲಕ ಇಬ್ಬರ ಪರಿಚಯ ಆಯ್ತು. ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆಯಿತು. ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಖುದ್ದು ಶರ್ಮಿಳಾ ಮಾಂಡ್ರೆ ಈ ವಿಚಾರವನ್ನು ಕೆಲ ದಿನಗಳ ಹಿಂದೆ ವಿವರವಾಗಿ ಹಂಚಿಕೊಂಡಿದ್ದರು.
ಹೇಳಿದ್ದೇನು ಶರ್ಮಿಳಾ ಮತ್ತು ಸುಧನ್ ಸುಂದರಂ ?
ತಮ್ಮ ಮದುವೆಯ ಕುರಿತು ಪ್ರತಿಕ್ರಿಯಿಸಿರುವ ಶರ್ಮಿಳಾ ಇದು ನಮ್ಮ ಜೀವನದ ಅತ್ಯಂತ ಸುಂದರ ಹಾಗೂ ವಿಶೇಷವಾದ ಅಧ್ಯಾಯ. ನಮ್ಮ ಮೇಲೆ ಪ್ರೀತಿ ಮತ್ತು ಆಶೀರ್ವಾದ ಮಳೆಗರೆದ ಎಲ್ಲರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಮ್ಮ ಈ ಹೊಸ ಜೀವನದ ಪಯಣವನ್ನು ಎದುರುನೋಡುತ್ತಿದ್ದೇವೆ ಎಂದು ಹೇಳಿದ್ಧಾರೆ. ನಮ್ಮ ಬೆಂಬಲಕ್ಕೆ ನಿಂತಿರುವ ನಮ್ಮ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳ ಪ್ರೀತಿ ಮತ್ತು ಸಹಕಾರಕ್ಕೆ ನಾವು ಎಂದಿಗೂ ಚಿರಋಣಿ ಎಂದು ಸುಧನ್ ಸುಂದರಂ ಕೈ ಮುಗಿದಿದ್ದಾರೆ.
ಮದುವೆ ಯಾವಾಗ ?
ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ ಮದುವೆಯ ಕುರಿತು ಯಾವ ಮಾಹಿತಿಯನ್ನು ಕೂಡ ಹಂಚಿಕೊಂಡಿಲ್ಲ. ಆದರೆ. ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಈ ವರ್ಷಾಂತ್ಯದಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಕನ್ನಡ, ತಮಿಳು ಸೇರಿ ಬೇರೆ ಭಾಷೆಯ ಚಿತ್ರರಂಗದ ಹಲವರು ಈ ಭವ್ಯವಾದ ಮದುವೆಗೆ ಸಾಕ್ಷಿಯಾಗಲಿದ್ಧಾರೆ.


Click it and Unblock the Notifications