Kishore: ಪೋಸ್ಟ್ ಅಳಿಸಿ ಹಾಕಿದ ಇನ್ಸ್ಟಾಗ್ರಾಂ: "ಮೋದಿಯವರಿದ್ದರೆ ಇದೆಲ್ಲವೂ ಸಾಧ್ಯ" ಎಂದ ಕಿಶೋರ್
ಚಂದ್ರಯಾನ-3ರ ಯಶಸ್ಸನ್ನು ತಮ್ಮ ಯಶಸ್ಸು ಎಂದು ಬಿಂಬಿಸಿಕೊಳ್ಳಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ನಟ ಕಿಶೋರ್ ಇತ್ತೀಚೆಗೆ ಟೀಕಿಸಿದ್ದರು. ಚಂದ್ರಯಾನ-3 ಸಕ್ಸಸ್ ಬೆನ್ನಲ್ಲೇ ಇನ್ಸ್ಟಾಗ್ರಾಮ್ನಲ್ಲೊ ದೊಡ್ಡ ಪೋಸ್ಟ್ ಬರೆದುಕೊಂಡಿದ್ದರು. "ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ" ಎಂದಿದ್ದರು.
ಸದ್ಯ ಕಿಶೋರ್ ಮಾಡಿದ್ದ ಟ್ವೀಟ್ ಅನ್ನು ಇನ್ಸ್ಟಾಗ್ರಾಂ ಅಳಿಸಿದೆ. ಈ ಪೋಸ್ಟ್ ಇನ್ಸ್ಟಾಗ್ರಾಂ ನಿಮಯಗಳನ್ನು ಮೀರಿದ್ದು "ADULT SEXUAL EXPLOITATION" ಆಗಿದೆ. ಪದೇ ಪದೆ ಇನ್ಸ್ಟಾಗ್ರಾಂ ಉಲ್ಲಂಘಿಸಿದ್ದಕ್ಕೆ ಪೋಸ್ಟ್ ತೆಗೆದು ಹಾಕಿರುವುದಾಗಿ ಹೇಳಿದೆ. ಈ ಬಗ್ಗೆ ಮತ್ತೆ ನಟ ಕಿಶೋರ್ ಪ್ರತಿಕ್ರಿಯಿಸಿದ್ದು "ಮೋದಿ ಹೈ ತೊ ಏ ಸಬ್ ಮುಮ್ಕಿನ್ ಹೈ, ಮೋದಿಯವರಿದ್ದರೆ ಇದೆಲ್ಲವೂ ಸಾಧ್ಯ" ಎಂದು ಪರೋಕ್ಷವಾಗಿ ಕಿಶೋರ್ ತಿರುಗೇಟು ನೀಡಿದ್ದಾರೆ.

ಮತ್ತೊಂದು ಪೋಸ್ಟ್ನಲ್ಲಿ "ಇನ್ಸ್ಟಾಗ್ರಾಮಿನ ಈ ನಿಯಮಗಳು ನನ್ನ ನೊಂದು ಬೆಂದ ಮಣಿಪುರಕ್ಕೆ , ಕಾಶ್ಮೀರಕ್ಕೆ , ಗುಜರಾತಿಗೆ, ನೂಹ್ ಗೆ, ಹಾಥರಸ್ ಗೆ, ಸಿಂಘು ಬಾರ್ಡ್ರರಿಗೆ, ಲಖೀಮ್ ಪುರ್ ಖೀರಿಗೆ, ಧರ್ಮಸ್ಥಳಕ್ಕೆ, ದೇಶದ ಉದ್ದಗಲಕ್ಕೆ ಅನ್ವಯಿಸಿಬಿಟ್ಟಿದ್ದರೆ ಎಷ್ಟು ಚೆಂದ. ಇವರು ಹೇಳುವ "ADULT SEXUAL EXPLOITATION" ಅನ್ನು, ಇವರು ಹರಡುವ ದ್ವೇಷವನ್ನು ನನ್ನ ದೇಶದ ಮನಃಪಟಲದಿಂದ ನನ್ನ ಪೋಸ್ಟಿನ ಹಾಗೆ ಅಳಿಸಿಬಿಡಲು ಸಾಧ್ಯವಿದ್ದಿದ್ದರೆ ಎಷ್ಟು ಚೆಂದ...
"ನಾನೋ, ನಾನು ಹಾಕುವ ಪೋಸ್ಟೊ, ಮೋದಿಯೋ, ಗೋದಿಯೋ ಮುಖ್ಯವೇ ಅಲ್ಲ . ಈ ದೇಶವನ್ನು , ಕುವೆಂಪು ಗಾಂಧಿ ಅಂಬೇಡ್ಕರ್ ಬುದ್ಧ ಬಸವ ರ ಕನಸಿನ ಸರ್ವ ಸಮಾನತೆಯ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳುತ್ತೇವೆಯಾ ಎನ್ನುವುದಷ್ಟೇ ಮುಖ್ಯ" ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಇನ್ಸ್ಟಾಗ್ರಾಂ ಅಳಿಸಿ ಹಾಕಿರುವ ಪೋಸ್ಟ್ನಲ್ಲಿ ಏನು ಇತ್ತು ಎನ್ನುವುದನ್ನು ನೋಡುವುದಾದರೆ "ಚಂದ್ರನ ದಕ್ಷಿಣ ಧುೃವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ... ಹೆಮ್ಮೆಯಿದೆ, ಎದೆ ಬೀಗಿದೆ... ಆದರೆ .. ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ... ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ"

"ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ... ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ... ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ... ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಾಶ್ಮೀರದ ಜನತೆಯ ಚಿತ್ರ... ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ .... ಹೀಗೇ ನೂರಾರು...".
"ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ... ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು...???" ಎಂದು ಮಾರ್ಮಿಕವಾಗಿ ಚಂದ್ರಯಾನದ ಯಶಸ್ಸನ್ನು ತಮ್ಮ ಯಶಸ್ಸು ಎಂದು ಬಿಂಬಿಸಿಕೊಳ್ಳಲು ಪ್ರಧಾನಿ ಪ್ರಯತ್ನಿಸುತ್ತಿದ್ದಾರೆ" ಎಂದು ಟೀಕಿಸಿದ್ದರು.


Click it and Unblock the Notifications











