ಕನ್ನಡ ಚಿತ್ರರಂಗಕ್ಕೆ ಇಂಥ ಪ್ರೊಡ್ಯೂಸರ್ ಬೇಕು! ಯಶ್ ನಡೆಗೆ ಮೆಚ್ಚಲೇಬೇಕು!
'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಡೆದ ದುರಂತ ಮಾತ್ರ ಯಾರೂ ಮರೆಯೋಕೆ ಸಾಧ್ಯವೇ ಇಲ್ಲ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕಣ್ಮುಂದೆಯೇ ಉದಯೋನ್ಮುಖ ನಟರಾದ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದರು.['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]
ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸಬಾರದು... ಅನಾಹುತಗಳಿಂದ ನಟರ ಕುಟುಂಬ ಸಂಕಷ್ಟಕ್ಕೆ ಸಿಲುಕಬಾರದು ಅಂತಲೇ ನಟ ಯಶ್ ಹಾಗೂ 'ಕೆ.ಜಿ.ಎಫ್' ನಿರ್ಮಾಪಕ ವಿಜಯ್ ಕಿರಗಂದೂರ್ ಸ್ಯಾಂಡಲ್ ವುಡ್ ನಲ್ಲಿ ಒಂದು ಹೊಸ ನಡೆಗೆ ಮುನ್ನಡಿ ಬರೆದಿದ್ದಾರೆ. ಅದೇನಪ್ಪಾ ಅಂದ್ರೆ....

'ಕೆ.ಜಿ.ಎಫ್' ಚಿತ್ರತಂಡಕ್ಕೆ ಇನ್ಶೂರೆನ್ಸ್ ಮಾಡಿಸಿದ ನಿರ್ಮಾಪಕ.!
ನಟ ಯಶ್ ಅಭಿನಯಿಸುತ್ತಿರುವ 'ಕೆ.ಜಿ.ಎಫ್' ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಇನ್ಶೂರೆನ್ಸ್ ಮಾಡಿಸಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್.[ಯಶ್ 'ಕೆ.ಜಿ.ಎಫ್' ಚಿತ್ರದ ಲೇಟೆಸ್ಟ್ ಸುದ್ದಿ ಕೇಳಿದ್ರಾ?]

ಸುರಕ್ಷತೆ ಮೊದಲ ಆದ್ಯತೆ ಎಂದ ನಟ ಯಶ್
''ನಾವು ಚಿತ್ರೀಕರಣ ಮಾಡುತ್ತಿರುವ ಜಾಗದಲ್ಲಿ (ಕೋಲಾರ) ಸುರಕ್ಷತೆ ಬೇಕೇ ಬೇಕು. ಇದೇ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರ್ ರವರ ಜೊತೆ ಮಾತನಾಡಿದೆ. ಪ್ರತಿಯೊಬ್ಬರ ಜೀವ ನಮಗೆ ಮುಖ್ಯ. ಕನ್ನಡ ಚಿತ್ರರಂಗದಲ್ಲಿ ವೃತ್ತಿಪರತೆ ಕಾಪಾಡಿಕೊಳ್ಳಬೇಕು. ಹೀಗಾಗಿ ಎಲ್ಲರಿಗೂ ಇನ್ಶೂರೆನ್ಸ್ ಮಾಡಿಸಲು ವಿಜಯ್ ಕಿರಗಂದೂರ್ ಒಪ್ಪಿಕೊಂಡರು'' ಎನ್ನುತ್ತಾರೆ ನಟ ಯಶ್.

ಮನುಷ್ಯತ್ವ ಮೆರೆದ ನಿರ್ಮಾಪಕ
''ಶೂಟಿಂಗ್ ಸೆಟ್ ನಲ್ಲಿ ಹೀರೋ ಮತ್ತು ಜ್ಯೂನಿಯರ್ ಆರ್ಟಿಸ್ಟ್ ಎಂಬ ಭೇದಭಾವ ಇರಬಾರದು. ಯಾಕಂದ್ರೆ, ಎಲ್ಲರ ಜೀವ ಕೂಡ ಅಷ್ಟೇ ಮುಖ್ಯ. ಈ ವಿಚಾರದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಮನುಷ್ಯತ್ವ ಮೆರೆದಿದ್ದಾರೆ'' - ನಟ ಯಶ್.

ನಿರ್ಮಾಪಕ ವಿಜಯ್ ಕಿರಗಂದೂರ್ ಏನೆನ್ನುತ್ತಾರೆ.?
''ಚಿತ್ರ ನಿರ್ಮಾಣಕ್ಕಾಗಿ ಕೋಟಿ ಕೋಟಿ ಸುರಿಯುವಾಗ, ಅದರಲ್ಲಿ ಸ್ವಲ್ಪ ಹಣವನ್ನ ಇನ್ಶೂರೆನ್ಸ್ ಗಾಗಿ ಮೀಸಲಿಡುವುದು ದೊಡ್ಡ ವಿಷಯವಲ್ಲ. ಅಷ್ಟಕ್ಕೂ, ಸುರಕ್ಷತಾ ಕ್ರಮಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಇದನ್ನ ಕಡ್ಡಾಯಗೊಳಿಸಬೇಕು'' ಎಂದು ವಿಜಯ್ ಕಿರಗಂದೂರ್ ಹೇಳಿದರು.

ಏನೇನು ಸೌಲಭ್ಯವಿದೆ.?
ಕೆ.ಜಿ.ಎಫ್ ಚಿತ್ರತಂಡದ ಬರೋಬ್ಬರಿ 500 ಮಂದಿಗೆ ಥರ್ಡ್ ಪಾರ್ಟಿ ಗ್ರೂಪ್ ಇನ್ಶೂರೆನ್ಸ್ ಮಾಡಿಸಲಾಗಿದೆ. ಸಿನಿಮಾದ ಸೆಟ್ ನಲ್ಲಿ ಏನೇ ಅನಾಹುತ ಸಂಭವಿಸಿದರೂ ಆಸ್ಪತ್ರೆಯ ಖರ್ಚು ವೆಚ್ಚವನ್ನ ಇನ್ಶೂರೆನ್ಸ್ ಕಂಪನಿ ಭರಿಸಲಿದೆ. ಒಂದ್ವೇಳೆ ಯಾರೇ ಸಾವನ್ನಪ್ಪಿದರೂ, ಸಂಭಾವನೆಯ ಐದು ಪಟ್ಟು ಹೆಚ್ಚು ಪರಿಹಾರ ನೀಡಲಾಗುವುದು.

ಶ್ಲಾಘಿಸಿದ ವಾಣಿಜ್ಯ ಮಂಡಳಿ
'ಕೆ.ಜಿ.ಎಫ್' ಚಿತ್ರ ನಿರ್ಮಾಪಕರ ಈ ನಡೆ ನೋಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಶ್ಲಾಘಿಸಿದ್ದಾರೆ.

'ಕೆ.ಜಿ.ಎಫ್' ಚಿತ್ರೀಕರಣ ಎಲ್ಲಿ.?
'ಕೆ.ಜಿ.ಎಫ್' ಚಿತ್ರೀಕರಣ ಕೋಲಾರದ ಸುಡು ಬಿಸಿಲಿನಲ್ಲಿ ನಡೆಯುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಯಾರಿಗೂ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಂತಹ ನಿರ್ಮಾಪಕರು ಬೇಕು.!
ಸಿನಿಮಾ ಎಂದರೆ ಹೀರೋ ಮತ್ತು ಹೀರೋಯಿನ್ ಮಾತ್ರ ಅಂತ ಯೋಚಿಸುವ ಈಗಿನ ಕಾಲದಲ್ಲಿ ಇಡೀ ತಂಡಕ್ಕೆ ಸುರಕ್ಷತೆ ಒದಗಿಸಲು ಮುಂದಾಗಿರುವ ನಿರ್ಮಾಪಕ ವಿಜಯ್ ಕಿರಗಂದೂರ್ ರವರ ಈ ನಡೆ ನಿಜಕ್ಕೂ ಶ್ಲಾಘನೀಯ. ಕನ್ನಡ ಚಿತ್ರರಂಗಕ್ಕೆ ಇಂತಹ ನಿರ್ಮಾಪಕರು ಬೇಕು. ಹಾಗೇ, ನಟ ಯಶ್ ರವರ ಈ ನಡೆಗೂ ಮೆಚ್ಚಲೇಬೇಕು.


Click it and Unblock the Notifications











