'ನೀನೊಂದು ಮುಗಿಯದ ಮೌನ' ಹಾಡು ಹುಟ್ಟಿದ ರೋಚಕ ಕಥೆ ಹೇಳಿದ ಸಾಧು.!
'ನೀನೊಂದು ಮುಗಿಯದ ಮೌನ....ನಾನೇಗೆ ತಲುಪಲಿ ನಿನ್ನ......' ಈ ಮಧುರವಾದ ಹಾಡನ್ನ ಯಾರು ತಾನೆ ಮರೆಯೋಕೆ ಆಗುತ್ತೆ. ಡೆಡ್ಲಿ ಆದಿತ್ಯ ಅಭಿನಯದ 'ಎದೆಗಾರಿಕೆ' ಚಿತ್ರದ ಹಾಡಿದೆ.
ಸುಮನ ಕಿತ್ತೂರ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಎರಡು ರಾಜ್ಯ ಪ್ರಶಸ್ತಿ ಕೂಡ ಲಭಿಸಿತ್ತು. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಇದ್ದಿದ್ದು ಒಂದೇ ಹಾಡು. ಈ ಹಾಡು ಕೂಡ ಸಿನಿಮಾಗಿಂತ ದೊಡ್ಡ ಯಶಸ್ಸು ಕಂಡಿದೆ ಅಂದ್ರೆ ತಪ್ಪಾಗಲಾರದು.
ಆ ಸಮಯದಲ್ಲಿ ಈ ಹಾಡನ್ನ ಯುವ ರಸಿಕರಂತೂ ಸಿಕ್ಕಾಪಟ್ಟೆ ನೆನಪಿಸಿಕೊಂಡಿರ್ತಾರೆ. ಈ ಹಾಡಿಗೆ ಸಂಗೀತ ನಿರ್ದೇಶನ ನೀಡಿ, ಹಾಡಿದ್ದು ಕೂಡ ಸಾಧುಕೋಕಿಲಾ ಅವರೇ. ಪಕ್ಕಾ ಅಂಡರ್ ವರ್ಲ್ಡ್ ಚಿತ್ರಕ್ಕೆ ಈ ಹಾಡು ಸೇರಿಸಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ವಿಷ್ಯ ಇದೆ. ಏನದು.? ಮುಂದೆ ಓದಿ.....

ಆರಂಭದಲ್ಲಿ ಈ ಹಾಡು ಇರಲಿಲ್ಲ.!
ಸುಮನ ಕಿತ್ತೂರ್ ಈ ಸಿನಿಮಾ ಮಾಡಬೇಕು ಎಂದುಕೊಂಡಾಗ ಈ ಹಾಡು ಇರಲಿಲ್ಲ. ಈ ಹಾಡೇ ಇಲ್ಲ, ಸಿನಿಮಾದಲ್ಲಿ ಹಾಡು ಬೇಕು ಎಂದು ಯೋಚನೆ ಸಹ ಮಾಡಿರಲಿಲ್ಲ. ಬಟ್, ಈ ಹಾಡು ಸೇರಿಸಲು ಕಾರಣ ಸಾಧು ಕೋಕಿಲಾ. ಈ ಚಿತ್ರಕ್ಕೆ ಸಾಧುಕೋಕಿಲಾ ಅವರು ಹಿನ್ನೆಲೆ ಸಂಗೀತ ಒದಗಿಸಿದ್ದರು. ಚಿತ್ರಕ್ಕೆ ರೀ-ರೆಕಾರ್ಡಿಂಗ್ ಮಾಡಬೇಕಾದರೇ ಈ ಹಾಡು ಹುಟ್ಟಿಕೊಂಡಿದೆ.

ಸಾಧು ಮನಸ್ಸಿಗೆ ಬಂತು ಈ ಹಾಡು
ಸಾಧುಕೋಕಿಲಾ ಅವರು ರೀ-ರೆಕಾರ್ಡಿಂಗ್ ಮಾಡಬೇಕಾದರೇ ಚಿತ್ರದಲ್ಲಿ ಕೆಲವು ಮಾಂಟೇಜ್ ದೃಶ್ಯಗಳಿದ್ದವು. ಅದನ್ನ ನೋಡಿ ಸಾಧು ಅವರು ಸುಮ್ಮನೆ ಮ್ಯೂಸಿಕ್ ಬಿಟ್ ಹಾಕಿದ್ದರಂತೆ. ಇದನ್ನ ನೋಡಿದ ನಿರ್ದೇಶಕಿ ಸುಮನ ಕಿತ್ತೂರ್ ಸಾಹಿತ್ಯ ಇರಲಿ ಎಂದು ಸಾಲುಗಳನ್ನ ಬರೆದರಂತೆ. ಅದನ್ನ ಸಾಂಗ್ ರೆಕಾರ್ಡ್ ಮಾಡಿದ್ರಂತೆ. ನಂತರ ಅದನ್ನ ಕೇಳಿದ್ಮೇಲೆ ಎಲ್ಲರಿಗೂ ಖುಷಿ ಆಯ್ತಂತೆ.

ಬೇರೆಯವರು ಹಾಡಬೇಕಿತ್ತು
ಈ ಹಾಡನ್ನ ಹಾಡಿರುವುದು ಸಾಧುಕೋಕಿಲಾ ಅವರು. ಆದ್ರೆ, ಅವರಿಗೂ ಮುಂಚೆ ಈ ಹಾಡನ್ನ ಬಾಲಿವುಡ್ ಗಾಯಕರೊಬ್ಬರು ಹಾಡಬೇಕಿತ್ತಂತೆ. ಬಟ್, ನಿರ್ಮಾಪಕರು ರೆಕಾರ್ಡಿಂಗ್ ವೇಳೆ ನೀವು ಹಾಡಿದ್ದೇ ಚೆನ್ನಾಗಿದೆ. ನೀವೇ ಹಾಡಿ ಸಾಕು ಎಂದರು. ಸರಿ ಅಂತ ಅದನ್ನ ನಾನು ಕಂಪ್ಲೀಟ್ ಮಾಡಿದೆ ಎಂದು ಸಾಧು ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನಂತರ ಜನರ ಮಧ್ಯೆ ಬಂದಾಗ ಈ ಹಾಡು ಸಿಕ್ಕಾಪಟ್ಟೆ ಇಷ್ಟವಾಯ್ತು. ವಿಶೇಷ ಅಂದ್ರೆ, ಸಾಧು ಕೋಕಿಲಾ ಅವರ ಗಾಯನಕ್ಕೆ ಪ್ರಶಸ್ತಿ ಕೂಡ ಸಿಕ್ಕಿತ್ತು.

2012ರಲ್ಲಿ ತೆರೆಕಂಡಿದ್ದ ಚಿತ್ರ
2012ರಲ್ಲಿ 'ಎದೆಗಾರಿಕೆ' ಸಿನಿಮಾ ಬಿಡುಗಡೆಯಾಗಿತ್ತು. ಅಗ್ನಿ ಶ್ರೀಧರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದರು. ಸುಮನ ಕಿತ್ತೂರ್ ನಿರ್ದೇಶನ ಮಾಡಿದ್ದರು. ಆದಿತ್ಯ ಮತ್ತು ಆಕಾಂಕ್ಷ, ಅತುಲ್ ಕುಲಕರ್ಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು.


Click it and Unblock the Notifications











