ರಾಜ್ ಕುರಿತ ಇನ್ನೊಂದಿಷ್ಟು ಇಂಟರೆಸ್ಟಿಂಗ್ ಸಂಗತಿಗಳು
ಕರ್ನಾಟಕಕ್ಕೆ ಮರೆಯಲಾಗದ ಮುತ್ತು ಸಿಕ್ಕಿದ್ದು ಇವತ್ತಿಗೆ ಸರಿಯಾಗಿ 84 ವರ್ಷಗಳ ಹಿಂದೆ. ಅಂದು ಸಿಂಗಾನಲ್ಲೂರಿನ ಪುಟ್ಟಸ್ವಾಮಯ್ಯನವರ ಮಗನಾಗಿ ಜನ್ಮತಾಳಿ ಬೆಳಿದಿದ್ದು ಮುತ್ತುರಾಜನಾಗಿ. ಮುತ್ತುರಾಜನ ಕನ್ನಡದ ಚಿತ್ರರಂಗದ ಕಣ್ಣಾಗಿ ಬೆಳೆಯೋಕೆ ಮೂಲವಾಗಿದ್ದು ಬೇಡರ ಕಣ್ಣಪ್ಪ ಸಿನಿಮಾ.
ರಾಜ್ ಅಭಿನಯದ ಮೊದಲ ಸಿನಿಮಾ 'ಬೇಡರ ಕಣ್ಣಪ್ಪ' (1954) ಚಿತ್ರಕ್ಕೇ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಮೊದಲ ಸಿನಿಮಾದಲ್ಲೆ ರಾಜ್ ಕಣ್ಣಪ್ಪನಾಗಿ ತ್ಯಾಗದ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ರು. ರಾಜ್ ರ ಮೊದಲ ಸಿನಿಮಾದಲ್ಲೇ ಅವರ ಅಭಿನಯ ನೋಡಿ ಆವತ್ತಿನ ಸಿನಿಮಾ ದಿಗ್ಗಜರು ಇವನೇ ಕನ್ನಡದ ರಾಜಕುಮಾರ ಅಂದಿದ್ರು. [ಅಣ್ಣಾವ್ರು ಇದ್ದಿದ್ರೆ ಇದನ್ನ ಒಪ್ತಿದ್ರಾ ಹೇಳಿ ಶಿವಣ್ಣ?]
ಕನ್ನಡ ಚಿತ್ರರಂಗದ ಬೇರಾಗಿ, ಸಣ್ಣ ಗಿಡವನ್ನ ಭಾರತೀಯ ಚಿತ್ರರಂಗದಲ್ಲಿ ಹೆಮ್ಮರವಾಗಿಸೋದ್ರಲ್ಲಿ ರಾಜ್ ಪಾಲು ದೊಡ್ಡದು. ಆ ಸ್ಥಾನದಲ್ಲಿ ರಾಜ್ ಅಲ್ಲದೆ ಮತ್ತೆ ಯಾರಿದ್ದರೂ ಅದು ಅಸಾಧ್ಯವಾದ ಕಥೆ. ಇದಕ್ಕೊಂದು ಉದಾಹರಣೆ ಅಂದ್ರೆ ಗೋಕಾಕ್ ಚಳುವಳಿ.
ಅಭಿಮಾನಿಗಳನ್ನ ದೇವರು ಅಂತ ಹೇಳಿ ತಾನೇ ದೇವರಾದ ಮಹಾನ್ ಚೇತನ ರಾಜ್ ಮಾಡಿದ ಸಾಧನೆ ಬಹಳ ಅಪರೂಪದ್ದು, ಕೇವಲ ಮೂರನೇ ತರಗತಿ ಓದಿದ್ದ ರಾಜ್ ಜೀವನ ನೂರಾರು ಕೋರ್ಸ್ ಓದಿರೋ ಇವತ್ತಿನ ಜನತೆಗೆ ಪ್ರೇರಣೆ. ಅಂತಹಾ ರಾಜ್ ಗೆ ಹುಟ್ಟುಹಬ್ಬದ ಶುಭಾಶಯ ಹೇಳ್ತಾ ರಾಜ್ ಕುರಿತು ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನ ಅವ್ರ ಹುಟ್ಟುಹಬ್ಬದ ದಿನ ಮೆಲುಕು ಹಾಕೋಣ. [ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು]

ಗಾಯನ ಮತ್ತು ನಟನೆಗೆ ರಾಷ್ಟ್ರಪ್ರಶಸ್ತಿ
ಯಾರೂ ಮಾಡಲಾಗದ ಅಪರೂಪದ ಸಾಧನೆ ಇದು. ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ರಾಜ್ ಗಾಯಕನಾಗೀನೂ ರಾಷ್ಟ್ರ ಪ್ರಶಸ್ತಿ ಪಡೆದ ದೇಶದ ಏಕೈಕ ನಟ.

ಸತತ ಹತ್ತು ವರ್ಷ ರಾಜ್ ಸಿನಿಮಾಗೆ ರಾಷ್ಟ್ರಪ್ರಶಸ್ತಿ
1954ರಿಂದ 1964ರವರೆಗೆ ಸತತ ಹತ್ತು ವರ್ಷ ರಾಜ್ ನಟಿಸಿದ ಒಂದಲ್ಲ ಒಂದು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಇಂತಹಾ ಅಪರೂಪದ ಸಾಧನೆಯನ್ನ ಬೇರ್ಯಾವ ನಟರ ಸಿನಿಮಾಗಳೂ ಮಾಡಿಲ್ಲ.

ರಾಜಕೀಯಕ್ಕೆ ಬಂದಿದ್ರೆ ಮುಖ್ಯಮಂತ್ರಿಯಾಗ್ತಿದ್ರು
ರಾಜ್ ಬಯಸಿ ರಾಜಕೀಯಕ್ಕೆ ಬಂದಿದ್ರೆ ಮುಖ್ಯಮಂತ್ರಿಯಾಗ್ತಿದ್ರು. ಇದು ನಾವು ಹೇಳ್ತಿರೋ ಮಾತಲ್ಲ. ಅದೆಷ್ಟೋ ರಾಜಕೀಯ ಮುತ್ಸದ್ಧಿಗಳೇ ಹೇಳಿದ ಮಾತು. ಆದ್ರೆ ರಾಜ್ ಗೆ ರಾಜಕೀಯ ಅನ್ನೋ ಸಮುದ್ರಕ್ಕೆ ಇಳಿಯೋಕೆ ಇಷ್ಟವಿರಲಿಲ್ಲ.

ರಾಜಕುಮಾರನಾಗಿಯೇ ಇರ್ತೀನಿ ಅಂದ್ರು
ರಾಜಕೀಯಕ್ಕೆ ಬನ್ನಿ ಅನ್ನೊ ರಾಜಕಾರಿಣಿಗಳ ಒತ್ತಾಯಕ್ಕೆ ರಾಜ್ ತಣ್ಣಗೆ ಉತ್ತರಿಸಿದ್ರು: ಕನ್ನಡದ ಜನ್ರು ನನ್ನನ್ನ ರಾಜಕುಮಾರ ಅಂತ ಕರೆದಿದ್ದಾರೆ. ನಾನು ರಾಜಕುಮಾರನಾಗಿಯೇ ಇರುತ್ತೇನೆ ಅಂದಿದ್ರು ರಾಜ್.

ರಾಜ್ ಓದಿದ್ದು ಮೂರು ಸಾಧನೆ ನೂರಾರು
ಇಷ್ಟೆಲ್ಲಾ ಸಾಧನೆ ಮಾಡಿರೋ ರಾಜ್ ಯಾವುದೇ ಯುನಿವರ್ಸಿಟಿಯಿಂದ ಪದವಿ ಪಡೆದಿಲ್ಲ. ರಾಜ್ ಓದಿರೋದು ಕೇವಲ ಮೂರನೇ ತರಗತಿ ಈಗ ರಾಜ್ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿದವ್ರಿಗೂ ಇವತ್ತು ರಾಜ್ ಗುರು.

ಸ್ವಾರ್ಥ ಧೂರ್ತ ಇಲ್ಲದ ದೈವ ಸ್ವರೂಪಿ
ರಾಜ್ ಅಂದ್ರೆ ಕನ್ನಡಿಗರ ಪಾಲಿಗೆ ದೈವ. ಇವತ್ತಿಗೂ ಅದೆಷ್ಟೋ ಹಳ್ಳಿಗಳಲ್ಲಿ ರಾಜ್ ಭಾವಚಿತ್ರಕ್ಕೆ ಪೂಜೆ ನಡೆಯುತ್ತೆ. ಇದಕ್ಕೆ ತನ್ನ ಸಿನಿಮಾಗಳ ಮೂಲಕ ರಾಜ್ ಕೊಟ್ಟ ಮೌಲ್ಯಯುತ ಪಾತ್ರಗಳೇ ಕಾರಣ.

ರಾಜ್ ಅಂದ್ರೆ ಸರಳ ಸದ್ಗುಣ ಸಂಪನ್ನ
ರಾಜ್ ಕುಮಾರ್ ಅಂದ್ರೆ ಸರಳತೆ, ಸರಳತೆ ಅಂದ್ರೆ ರಾಜ್ ಕುಮಾರ್. ರಾಜ್ ಜನಮನ ಗೆದ್ದಿದ್ದು ತಾನು ಹೇಗಿದ್ದೆನೋ ಹಾಗೇ ಜನರ ಮುಂದೆ ಬರ್ತಾ ಇದ್ದಿದ್ದರಿಂದ. ಹಾಗಾಗೀನೇ ರಾಜ್ ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ಹೀರೋ ಆಗಿಬಿಟ್ರು.

ರಾಜ್ ಕುಮಾರ್ ಅಂದ್ರೆ ಕರುಣೆ ಅಂತಃಕರಣ
ಸಿನಿಮಾದಲ್ಲಿ ಲೈಟ್ ಬಾಯ್ ನಿಂದ ನಿರ್ದೇಶಕರವರೆಗೂ ಪ್ರತಿಯೊಬ್ಬರನ್ನೂ ಒಂದೇ ರೀತಿಯಿಂದ ಕಾಣ್ತಿದ್ದ ರಾಜ್ ಊಟ ಆಯ್ತಾ? ಹೇಗಿದ್ದೀರಾ? ಅಂತ ಪ್ರತಿಯೊಬ್ಬರನ್ನೂ ವಿಚಾರಿಸಿಕೊಳ್ಳುತ್ತಿದ್ರು, ಕಷ್ಟದಲ್ಲಿದ್ದವರಿಗೆ ಕೈಚಾಚಿ ಸಹಾಯ ಮಾಡ್ತಿದ್ರು. ಈ ಗುಣವೇ ರಾಜ್ ರನ್ನ ಕೋಟಿ ಕೋಟಿ ಜನರ ಆರಾಧ್ಯ ದೈವವಾಗಿಸ್ತು.

ರಾಜ್ ಅಂದ್ರೆ ಪ್ರೀತಿ
ಕನ್ನಡ ಚಿತ್ರರಂಗಕ್ಕೆ ಪ್ರೀತಿ ಹಂಚಿ ಮನೆಯ ಯಜಮಾನನಾಗಿ ಎಲ್ಲರ ಪ್ರೀತಿಗೆ ಪಾತ್ರರಾದ ರಾಜ್ ಗಳಿಸಿದ್ದು ಅಭಿಮಾನಿಗಳ ಪ್ರೀತಿ ಅಷ್ಟೇ. ನಮ್ಮನ್ನ ಅಗಲಿದ ರಾಜ್ ಪ್ರೀತಿಗಿಂತ ಹೆಚ್ಚೇನನ್ನೂ ತೆಗೆದುಕೊಂಡು ಹೋಗಲಿಲ್ಲ. ಕೊನೆಗೆ ರಾಜ್ ನೇತ್ರದಾನ ಮಾಡಿ ತನ್ನ ದೃಷ್ಟಿಯನ್ನ ಮತ್ತೊಬ್ಬರಿಗೆ ದಾನಮಾಡಿ ಹೋದ್ರು..

ಪ್ರತಿ ಕನ್ನಡಿಗನ ಮನಸ್ಸಲಿದ್ದಾರೆ ಮುತ್ತುರಾಜ
ರಾಜ್ ನಮ್ಮನ್ನಗಲಿ ಎಂಟು ವರ್ಷಗಳಾದ್ರೂ ಅವರ ಪ್ರೀತಿ, ಆ ಸದ್ಗುಣ ಸಂಪನ್ನತೆ. ಶ್ರೇಷ್ಠ ವ್ಯಕ್ತಿತ್ವ ಪ್ರತಿಯೊಬ್ಬ ಕನ್ನಡಿಗನ ಮನಸ್ಸಲ್ಲೂ ಅಚ್ಛಳಿಯದೆ ಉಳಿದಿದೆ. ಹಾಗಾಗೀನೇ ರಾಜ್ ಇಲ್ಲೆ ಎಲ್ಲೋ ಇದ್ದಾರೆ ಅನ್ನಿಸುತ್ತೆ.


Click it and Unblock the Notifications











