ಎಸ್ ಪಿ ಬಾಲಸುಬ್ರಹ್ಮಣ್ಯಂ ಅರೋಗ್ಯ ಸ್ಥಿತಿ ಗಂಭೀರ: ಅಂತರಾಷ್ಟ್ರೀಯ ತಜ್ಞರಿಂದ ಚಿಕಿತ್ಸೆ
ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಎಸ್ ಪಿ ಬಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಇನ್ನೂ ಕ್ರಿಟಿಕಲ್ ಆಗಿದೆ ಎಂದು ತಿಳಿದ್ದಾರೆ.
ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನಲೆ ಎಸ್ ಪಿ ಬಿ ಆಗಸ್ಟ್ ಮೊದಲ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಪರಿಣಾಮ ಅವರನ್ನು ತೀವ್ರ ನಿಗಾಘಟಕಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಎಸ್ ಪಿ ಬಿ ಆರೋಗ್ಯ ಸ್ಥಿತಿ ಕಂಡು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ದೇಶದಾದ್ಯಂತ ಲೆಜೆಂಡರಿ ಗಾಯಕ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಕಳೆದೊಂದು ವಾರದಿಂದ ಎಸ್ ಪಿ ಬಿ ಆರೋಗ್ಯದಲ್ಲಿ ಯಾವುದೆ ಚೇತರಿಕೆ ಕಂಡು ಬಂದಿಲ್ಲ. ವೆಂಟಿಲೇಟರ್ ಮೂಲಕವೇ ಉಸಿರಾಡುತ್ತಿದ್ದಾರೆ.

ಇದೀಗ ಎಸ್ ಪಿ ಬಿ ಚಿಕಿತ್ಸೆಗೆ ಅಂತರಾಷ್ಟ್ರೀಯ ವೈದ್ಯಕೀಯ ತಜ್ಞರ ಸಲಹೆ ಪಡೆದುಕೊಂಡಿರುವುದಾಗಿ ಎಂಜಿಎಂ ಆಸ್ಪತ್ರೆ ತಿಳಿಸಿದೆ. ಇನ್ನೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ರ ಚರಣ್ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಕಣ್ಣೀರಿಟ್ಟಿದ್ದಾರೆ. ಅಪ್ಪನ ಆರೋಗ್ಯ ಯಥಾಸ್ಥಿತಿಯಲ್ಲಿ ಮುಂದುವರೆದಿದೆ ಎಂದು ಹೇಳಿರುವ ಚರಣ್, "ಹೀಗೆಯೇ ಪ್ರಾರ್ಥಿಸುತ್ತಿರಿ, ಪ್ರಾರ್ಥನೆ ದೇವರಿಗೆ ತಲುಪಿಯೇ ತೀರುತ್ತದೆ. ದೇವರು ಕರುಣಾಳು ಅವನು ಅಪ್ಪನನ್ನು ನಮ್ಮೊಂದಿಗೆ ಇರುವಂತೆ ಮಾಡುತ್ತಾನೆ" ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ಎಸ್ ಪಿ ಬಿ ಆರೋಗ್ಯಕ್ಕಾಗಿ ಆಗಸ್ಟ್ 20 ಸಂಜೆ 6 ಗಂಟೆಗೆ ವಿಶ್ವದಾದ್ಯಂತ ಪ್ರಾರ್ಥನೆ ಸಲ್ಲಿಸಲಾಯಿತು. ಕೋಟ್ಯಾಂತರ ಅಭಿಮಾನಿಗಳು ಖ್ಯಾತ ಗಾಯಕ ಶೀಘ್ರದಲ್ಲಿಯೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.


Click it and Unblock the Notifications











